ವಿ.ಎಂ. ನಾಗಭೂಷಣ
ಸುಮಾರು 40 ಸಾವಿರದಷ್ಟು ಜನಸಂಖೆ ಹೊಂದಿರುವ ಪಟ್ಟಣದಲ್ಲಿ ಪ್ರಸ್ತುತ ಆಧಾರ್ ನೋಂದಣಿಗೆ ಇರುವುದು ಒಂದೇ ಒಂದು ಕೇಂದ್ರ. ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ನೋಂದಣಿ, ತಿದ್ದುಪಡಿ- ಕೆಲ ತಿಂಗಳ ಹಿಂದೆ ಪಟ್ಟಣದ ಅಂಚೆ ಕಚೇರಿ, ತಾಲೂಕು ಕಚೇರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಆವರಣ ಹಾಗೂ ಬಿಎಸ್ಎನ್ಎಲ್ ಕಚೇರಿ ಆವರಣ ಸೇರಿ ಒಟ್ಟು ನಾಲ್ಕು ಕಡೆಗಳಲ್ಲಿ ಆಧಾರ್ ಕಾರ್ಡ್ನ ಕೆಲಸ ಮಾಡಲಾಗುತ್ತಿತ್ತು. ಇದೀಗ ಮೂರು ಕಡೆಗಳಲ್ಲಿದ್ದ ಆಧಾರ್ ಕೇಂದ್ರಗಳು ಮುಚ್ಚಿರುವುದರಿಂದ ಪ್ರಸ್ತುತ ಅಂಚೆ ಕಚೇರಿ ಕೇಂದ್ರದಲ್ಲಿ ಮಾತ್ರ ಆಧಾರ್ ನೋಂದಣಿ, ತಿದ್ದುಪಡಿ ಮಾಡಿಕೊಡಲಾಗುತ್ತಿದೆ.
ಅಂಚೆ ಕಚೇರಿಯಲ್ಲಿ ಒಂದು ದಿನಕ್ಕೆ ಕೇವಲ 15 ಜನರಿಗೆ ಮಾತ್ರ ಆಧಾರ್ ನೋಂದಣಿ, ತಿದ್ದುಪಡಿಗೆ ಅವಕಾಶ ಇರುವುದರಿಂದ ಈ 15 ಜನರಲ್ಲಿ ತಾವೊಬ್ಬರಾಗಲು ಜನತೆ ನಸುಕಿನಲ್ಲಿ 2-3 ಗಂಟೆಗೆ ಬಂದು ಪಾಳಿ ಹಚ್ಚುತ್ತಿದ್ದಾರೆ. ನಸುಕಿನಲ್ಲಿ ಬಂದು ತಮ್ಮ ಸ್ಥಳವನ್ನು ಕಾಯ್ದಿರಿಸಿದ್ದರೂ ಟೋಕನ್ ಕೊಡುವುದು ಬೆಳಿಗ್ಗೆ 9 ರಿಂದ 9.30ರವರೆಗೆ. ಒಬ್ಬರಿಗೆ ಒಂದು ಟೋಕನ್ ಮಾತ್ರ. ಮನೆಯಲ್ಲಿ ನಾಲ್ವರ ಆಧಾರ್ ಅಪ್ಡೇಟ್ ಮಾಡಿಸುವುದಿದ್ದರೆ ನಾಲ್ಕು ಜನರು ಬಂದು ಸರತಿ ಸಾಲಿನಲ್ಲಿ ಟೋಕನ್ಗಾಗಿ ಕಾಯಬೇಕು. ಆಧಾರ್ ನೋಂದಣಿ ಅಥವಾ ತಿದ್ದುಪಡಿ ಪ್ರಕ್ರಿಯೆ ಕಾರ್ಯವನ್ನು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಸಲಾಗುತ್ತದೆ. ಅಲ್ಲಿವರೆಗೆ ಟೋಕನ್ ಪಡೆದವರು ನೋಂದಣಿ, ತಿದ್ದುಪಡಿಗಾಗಿ ಕಾದು ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಪಟ್ಟಣದವರು ಮಾತ್ರವಲ್ಲದೇ ಸಂಡೂರು ಸುತ್ತಮುತ್ತಲಿನ ಗ್ರಾಮಗಳವರೂ ಆಧಾರ್ ಕಾರ್ಡ್ ಅಪ್ಡೇಟ್ಗಾಗಿ ಸಂಡೂರಿನಲ್ಲಿನ ಏಕೈಕ ಕೇಂದ್ರಕ್ಕೆ ಬರುತ್ತಿದ್ದಾರೆ.
ಈ ಅಂಶ ಪಟ್ಟಣದ ಜನತೆ ಆಧಾರ್ ತಿದ್ದುಪಡಿಗಾಗಿ ಪಡುತ್ತಿರುವ ಬವಣೆಗೆ ಕನ್ನಡಿ ಹಿಡಿಯುತ್ತದೆ. ಭುಜಂಗನಗರದ ವಿಜಯಕುಮಾರ್, ಮಲ್ಲಾರಳ್ಳಿಯ ಪಾಲಯ್ಯ, ಕೃಷ್ಣಾನಗರದ ಇಮಾಂಬಾಷ ಮುಂತಾದವರು ಸಂಡೂರಿನ ಆಧಾರ್ ಕೇಂದ್ರದ ಮುಂದೆ ಟೋಕನ್ ಪಡೆಯಲು ನಸುಕಿನಿಂದಲೇ ಕಾಯುತ್ತಾ ಕುಳಿತಿದ್ದ ದೃಶ್ಯ ಕಂಡು ಬಂದಿತು.
ಸಂಡೂರು ತಾಲೂಕು ಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ಕಾರ್ಯಕ್ಕೆ ಹೊಸಬರನ್ನು ನೇಮಿಸಲಾಗಿದೆ. ಇನ್ನು ಒಂದು ವಾರ ಅಥವಾ 15 ದಿನದಲ್ಲಿ ನೋಂದಣಿ, ತಿದ್ದುಪಡಿ ಕಾರ್ಯ ಆರಂಭವಾಗಲಿದೆ. ಹೋಬಳಿ ಕೇಂದ್ರಗಳಲ್ಲಿ ಆಧಾರ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ತಾಲೂಕು ಕಚೇರಿಯಲ್ಲಿ ಆಧಾರ್ ಕೇಂದ್ರ ಆರಂಭವಾದರೆ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ತಹಶೀಲ್ದಾರ್ ಜಿ.ಅನಿಲ್ಕುಮಾರ್.