ಸಂಡೂರು ಉಪ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ

KannadaprabhaNewsNetwork | Published : Nov 11, 2024 11:45 PM

ಸಾರಾಂಶ

ಉಪ ಚುನಾವಣೆ ಘೋಷಣೆಗೊಂಡು ನಾಮಪತ್ರ ಸಲ್ಲಿಕೆ ದಿನದಿಂದಲೇ ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ ಶುರುವಾಗಿತ್ತು.

ವಿಶೇಷ ವರದಿ

ಬಳ್ಳಾರಿ: ಸಂಡೂರು ಉಪ ಚುನಾವಣೆಯ ಬಹಿರಂಗ ಪ್ರಚಾರ ಸೋಮವಾರ ಸಂಜೆ ಅಂತ್ಯಗೊಂಡಿದ್ದು, ಕೈ-ಕಮಲ ನಾಯಕರ ವಾಕ್ಸಮರಕ್ಕೆ ತೆರೆ ಬಿದ್ದಿದೆ.

ಉಪ ಚುನಾವಣೆ ಘೋಷಣೆಗೊಂಡು ನಾಮಪತ್ರ ಸಲ್ಲಿಕೆ ದಿನದಿಂದಲೇ ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ ಶುರುವಾಗಿತ್ತು. ದಿನ ಕಳೆದು ರಾಜ್ಯ ನಾಯಕರು ಗಣಿನಾಡಿಗೆ ಎಂಟ್ರಿಯಾಗುತ್ತಿದ್ದಂತೆಯೇ ಬಹಿರಂಗ ಪ್ರಚಾರ ಮತ್ತಷ್ಟು ರಂಗು ಪಡೆಯಿತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಆದಿಯಾಗಿ ಸಂಡೂರಿಗೆ ಆಗಮಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಸಂಡೂರಿನ ಚುನಾವಣಾ ರಣಕಣದಲ್ಲಿ ಪರಸ್ಪರ ವಾಕ್ಸಮರ, ಆರೋಪ-ಪ್ರತ್ಯಾರೋಪದ ಬಿರುಸು ಬಾಣಗಳು ದೀಪಾವಳಿಯ ಪಟಾಕಿಗಳಿಗಿಂತಲೂ ಹೆಚ್ಚು ಸದ್ದು ಮಾಡಿದವು.

ಹಳ್ಳಿಹಳ್ಳಿ ಸುತ್ತಾಡಿದ ಸಿಎಂ:

ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಸಂಡೂರು ಕಮಲ ಪಾಳಯಕ್ಕೆ ತುತ್ತಾಗಬಾರದು ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಎರಡು ದಿನಗಳ ಕಾಲ ಸಂಡೂರಿನಲ್ಲಿಯೇ ವಾಸ್ತವ್ಯ ಹೂಡಿದರು. ಅಲ್ಲದೆ, ಹಳ್ಳಿಹಳ್ಳಿಗಳನ್ನು ಸುತ್ತಾಡಿ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಪ್ರತಿಪಕ್ಷ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಸಂಡೂರಿನಲ್ಲಿ ನಾನೇ ಸ್ಪರ್ಧಿಸಿದ್ದೇನೆಂದು ತಿಳಿದು ಮತದಾನ ಮಾಡಿ. ಯಾವುದೇ ಕಾರಣಕ್ಕೆ ಬಿಜೆಪಿಯನ್ನು ಗೆಲ್ಲಿಸಬೇಡಿ. ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ ಜನಾರ್ದನ ರೆಡ್ಡಿಯನ್ನು ದೂರವಿಡಿ ಎಂದು ಕರೆ ನೀಡಿದರು.

ಸಿಎಂ ಪ್ರಚಾರದಲ್ಲಿ ಸಾಥ್ ನೀಡಿದ ಸಚಿವ ಸಂತೋಷ್‌ ಲಾಡ್, ಶಾಸಕ ಜನಾರ್ದನ ರೆಡ್ಡಿ ಅವರಿಗೆ ಸಂಡೂರು ಅಭಿವೃದ್ಧಿಗಿಂತ ಇಲ್ಲಿನ ಗಣಿಮಣ್ಣಿನ ಮೇಲೆ ಕಣ್ಣಿದೆ. ಈಗಾಗಲೇ ಹಗರಣ ಮಾಡಿದವರ ಕೈಗೆ ಸಂಡೂರು ಕೊಡುವುದು ಬೇಡ ಎಂದು ಮತದಾರರಿಗೆ ಮುಂಜಾಗ್ರತೆಯ ಸಲಹೆ ನೀಡಿದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಂಡೂರು ಉಪಕಣದಲ್ಲಿ ಓಡಾಟ ನಡೆಸಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ವಿಜಯೇಂದ್ರ ಅವರ ಪ್ರಚಾರದ ಬಹುಭಾಗ ಮುಡಾ ಹಗರಣದ ಮೇಲೆ ಕೇಂದ್ರೀಕೃತವಾಗಿತ್ತು. ಸಿದ್ದರಾಮಯ್ಯ ಅಸಮರ್ಥತೆ, ಕೈ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾದ ಕರ್ನಾಟಕ, ಗ್ಯಾರಂಟಿಗಳ ಪಂಕ್ಚರ್, ತುಕಾರಾಂ ಅವರಿಂದ ಸಂಡೂರು ಹಿಂದುಳಿದಿದ್ದು ಹೀಗೆ ಹತ್ತಾರು ಆರೋಪಗಳ ಸುರಿಮಳೆಗಳ ಮೂಲಕ ಪ್ರಚಾರದಲ್ಲಿ ಗಮನ ಸೆಳೆದರು.

ಏತನ್ಮಧ್ಯೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಮಂತ್ರಿಗಳಾದ ಪ್ರಹ್ಲಾದ ಜೋಶಿ, ವಿ. ಸೋಮಣ್ಣ ಹೀಗೆ ಹತ್ತಾರು ಬಿಜೆಪಿ ನಾಯಕರು ಸಂಡೂರಿನಲ್ಲುಳಿದು ಪ್ರಚಾರ ಕಾರ್ಯ ಕೈಗೊಂಡರು. ರಾಜ್ಯ ಸರ್ಕಾರದ ಮಂತ್ರಿ ಮಂಡಲದ ಬಹುತೇಕರು ಸಂಡೂರಿನಲ್ಲಿ ಓಡಾಡಿ ಮತದಾರರ ಮನವೊಲಿಕೆಗೆ ಮುಂದಾಗಿದ್ದರು.

ಮುಡಾ-ವಾಲ್ಮೀಕಿ ನಿಗಮ ಹಗರಣ ಸದ್ದು:

ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಸಂಡೂರಿನಲ್ಲಿ ರಾಜಕೀಯ ಬೃಹತ್ ಸಮಾವೇಶಗಳನ್ನು ಆಯೋಜಿಸುವ ಮೂಲಕ ಶಕ್ತಿ ಪ್ರದರ್ಶಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ದಿನಾಂಕ ಘೋಷಣೆಯ ಒಂದು ದಿನ ಮುನ್ನವೇ ಸಂಡೂರಿಗೆ ಆಗಮಿಸಿ ಪಕ್ಷದಿಂದ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿಯೇ ಚುನಾವಣಾ ರಣಕಣಕ್ಕೆ ಪ್ರತಿಪಕ್ಷಕ್ಕೆ ಪಂಥಾಹ್ವಾನ ನೀಡಿದ ಸಿಎಂ, ಸಂಡೂರಿನಿಂದಲೇ ಚುನಾವಣಾ ರಣಕಹಳೆ ಮೊಳಗಿಸಿದರು. ಪ್ರಚಾರದಲ್ಲಿ ಬಿಜೆಪಿಗರು ಹಿಂದೆ ಬೀಳಲಿಲ್ಲ. ಪ್ರಚಾರ ಸಮಾವೇಶಗಳು, ಬಹಿರಂಗ ಸಭೆಗಳಲ್ಲೂ ಕಮಲ ಪಾಳಯ ಶಕ್ತಿಪ್ರದರ್ಶನ ಮೂಲಕ ಕೈ ಪಕ್ಷಕ್ಕೆ ಠಕ್ಕರ್ ನೀಡುವ ಸುಳಿವು ನೀಡಿದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಮುನ್ನೆಲೆಗೆ ಕಂಡು ಬರಲಿಲ್ಲ. ಬದಲಿಗೆ ರಾಜ್ಯ ನಾಯಕರು ಹಾಗೂ ಸ್ಥಳೀಯವಾಗಿ ಸಚಿವ ಸಂತೋಷ್‌ ಲಾಡ್ ಹಾಗೂ ಶಾಸಕ ಜನಾರ್ದನ ರೆಡ್ಡಿ ಹೆಚ್ಚು ಗಮನ ಸೆಳೆದರು.

ಸಂಡೂರು ಚುನಾವಣೆ ಲಾಡ್‌-ರೆಡ್ಡಿ ನಡುವಿನ ಸಮರ ಎಂದೇ ವ್ಯಾಖ್ಯಾನಿಸಲಾಯಿತು. ಎರಡು ಪಕ್ಷಗಳ ಬಹಿರಂಗ ಪ್ರಚಾರ ಅಂತ್ಯಗೊಂಡಿದೆಯಾದರೂ ಮನೆಮನೆ ತೆರಳಿ ಪ್ರಚಾರ ನಡೆಸಬಹುದಾಗಿದೆ. ಹೊರ ಜಿಲ್ಲೆಗಳಿಂದ ಆಗಮಿಸಿದ್ದ ನಾಯಕರು ಸಂಡೂರು ತೊರೆಯುತ್ತಿದ್ದು, ಸ್ಥಳೀಯ ನಾಯಕರು ಮುಂದಿನ ಹಂತದ ಚುನಾವಣಾ "ಕಾರ್ಯ "ಕ್ಕೆ ಮುಂದಾಗಲಿದ್ದಾರೆ.

ಚುನಾವಣಾ ಮುನ್ನದ ದಿನದ ಚಟುವಟಿಕೆಗೆ ಎರಡು ಪಕ್ಷಗಳು ಸಕ್ರಿಯಗೊಂಡಿವೆ. ಸದ್ದುಗದ್ದಲದಿಂದ ಕೂಡಿದ್ದ ಗಣಿನಾಡು ಸಂಡೂರಿನ ರಾಜಕೀಯ ಚಟುವಟಿಕೆಯ ಬಹಿರಂಗ ಆರ್ಭಟಕ್ಕೆ ಮೌನಾವರಿಸಿದೆ.

Share this article