ಸಂಡೂರು: ಪಟ್ಟಣದ ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ (ಎಸ್.ಪಿ.ಎಸ್. ಬ್ಯಾಂಕ್) ೨೦೨೩-೨೪ನೇ ಆರ್ಥಿಕ ವರ್ಷದಲ್ಲಿ ₹೨.೫೪ ಕೋಟಿ ಲಾಭ ಗಳಿಸಿ, ಆದಾಯ ತೆರಿಗೆ ಪಾವತಿ ನಂತರ ₹೨.೦೭ ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್. ನಾಗರಾಜ ತಿಳಿಸಿದರು.ಪಟ್ಟಣದ ರತ್ನದೀಪ ಸಭಾಂಗಣದಲ್ಲಿ ಶನಿವಾರ ನಡೆದ ಎಸ್.ಪಿ.ಎಸ್ ಬ್ಯಾಂಕಿನ ೨೭ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕಿನ ಉಪಾಧ್ಯಕ್ಷ ಸಿ. ರವಿಶಂಕರ್ ಷೇರುದಾರರಿಗೆ ಶೇ.೧೫ ಲಾಭಾಂಶ ಘೋಷಿಸಿದರು. ನಿರ್ದೇಶಕ ಮಯೂರ್ ಅಂಕಮನಾಳ್ ಲೆಕ್ಕ ಪರಿಶೋಧಕರ ಮತ್ತು ಆಂತರಿಕ ಲೆಕ್ಕ ಪರಿಶೋಧಕರ ನೇಮಕ ಕುರಿತು ವಿವರಿಸಿದರು.
ಸುಮಿತ್ರಾ ಹಾಲಂಬಿಯವರು ೨೦೨೪-೨೫ನೇ ಸಾಲಿಗಾಗಿ ನಿರ್ದೇಶಕ ಮಂಡಳಿ ರೂಪಿಸಿದ ವಾರ್ಷಿಕ ಕಾರ್ಯಾಚರಣೆ ಕುರಿತು ತಿಳಿಸಿದರು. ಅಂಕಮನಾಳ್ ಸಿದ್ದಪ್ಪನವರು ೨೦೨೩-೨೪ನೇ ಸಾಲಿನಲ್ಲಿ ಸೇರಿಸಲ್ಪಟ್ಟ ಹಾಗೂ ಸಮಾಪನೆಗೊಂಡ ಸದಸ್ಯತ್ವಗಳ ಬಗ್ಗೆ ವಿವರಿಸಿದರು.ಜಿ.ಎಂ. ಮಂಜುಳಾ ೨೦೨೪-೨೫ನೇ ಸಾಲಿನ ಬ್ಯಾಂಕಿನ ವಾರ್ಷಿಕ ಬಜೆಟ್ ಕುರಿತು ವಿವರಿಸಿ, ಸದಸ್ಯರಿಂದ ಅನುಮೋದನೆ ಪಡೆದುಕೊಂಡರು. ಬ್ಯಾಂಕಿನ ಅನುಪಾಲನಾ ವರದಿ ಕುರಿತು ಬ್ಯಾಂಕಿನ ವ್ಯವಸ್ಥಾಪಕ ಕೆ.ಪ್ರಕಾಶ್ ತಿಳಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ರೇಣುಕಾ ಲೆಕ್ಕ ಪರಿಶೋಧಕರ ವರದಿ ಹಾಗೂ ಲೆಕ್ಕ ಪರಿಶೋಧಿತ ಲೆಕ್ಕಗಳ ಪರಿಗಣನೆ ಕುರಿತು ವಿವರಿಸಿದರು.
ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಕೆ.ವೀರಪ್ಪ, ಎಚ್.ವೀರೇಶ್, ಬಿ.ಗಂಗಮ್ಮ, ಜೆ.ಜೈಭಾಸ್ಕರ, ಅಧಿಕಾರಿಗಳಾದ ಎ.ಕುಮಾರ್, ವಿಜಯಲಕ್ಷ್ಮಿ, ಎಂ.ರಾಮಚಂದ್ರ, ಸಿಬ್ಬಂದಿ ಎ.ಪೂಜಾ, ಮಹದೇವಪ್ಪ ಕರೂರ, ಜಿ.ವಿಶ್ವನಾಥ, ಎಂ.ಜಗದೀಶ ಉಪಸ್ಥಿತರಿದ್ದರು.
ಸಂಡೂರಿನ ರತ್ನದೀಪ ಸಭಾಂಗಣದಲ್ಲಿ ಶನಿವಾರ ನಡೆದ ಸಂಡೂರು ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ನಾಗರಾಜ ಮಾತನಾಡಿದರು.