ಶಿವಮೊಗ್ಗ: ಸರ್ಜಿ ಫೌಂಡೇಶನ್ ಮತ್ತು ಸ್ಪರ್ಧಾ ಲೈನ್ಸ್ ಸಂಸ್ಥೆಗಳು ಜಂಟಿಯಾಗಿ ನೈಋತ್ಯ ಪದವೀಧರರ ಕ್ಷೇತ್ರಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ಕೊಡಗು, ಉಡುಪಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮೇ.11ರಂದು "ಸರ್ಜಿ ಸ್ಕಾಲರ್ಶಿಪ್ ಟೆಸ್ಟ್ " ಎಂಬ ಶೀರ್ಷಿಕೆಯ ಅಡಿಯಲ್ಲಿ ಸ್ಕಾಲರ್ಶಿಪ್ ಟೆಸ್ಟ್ ನಡೆಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆಎಎಸ್ ಪರೀಕ್ಷೆ ಬರೆದು ರಾಜ್ಯ ಸೇವೆಗೆ ಸೇರಬೇಕು. ಅಥವಾ ಬ್ಯಾಂಕಿಂಗ್ ಪರೀಕ್ಷೆ ಬರೆದು ಉತ್ತಮ ಸಂಬಳದ ಜಾಬ್ ಪಡೆಯಬೇಕು. ಇನ್ನಷ್ಟು ಶ್ರಮ ಪಡೆದು ಆರ್ಆರ್ಬಿ, ಎಸ್ಎಸ್ಸಿ ಪರೀಕ್ಷೆ ಬರೆದು ಯಾವುದಾದರೂ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಬೇಕು. ಇಂತಹ ಕನಸು ಹೊತ್ತ ಮನಸ್ಸುಗಳ ಸಂಖ್ಯೆ ರಾಜ್ಯದಲ್ಲಿ ಕಡಿಮೆ ಏನಿಲ್ಲ. ಪ್ರತಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಗಳಲ್ಲಿ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳ ದಂಡು ರಾಜ್ಯದ ಪ್ರತಿ ಕೇಂದ್ರಗಳಲ್ಲೂ ತುಂಬಿಯೇ ಇರುತ್ತವೆ. ಆದರೆ ಕೆಲವರಿಗೆ, ಬಡತನ ಹಿನ್ನೆಲೆಯ ಉದ್ಯೋಗ ಆಕಾಂಕ್ಷಿಗಳಿಗೆ ಪರೀಕ್ಷೆ ತರಬೇತಿ ಕೇಂದ್ರಗಳು ಕೇಳುವ ಶುಲ್ಕ ಬರಿಸಲು ಸಾಧ್ಯವಾಗದೇ, ಇತ್ತ ಸ್ವಯಂ ಮಾರ್ಗದರ್ಶನವು ಸಾಲದೇ ಸಮಸ್ಯೆ ಎದುರಿಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ ಎಂದರು.ಈ ಪರೀಕ್ಷೆ ಬರೆಯಲು ರಾಜ್ಯದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದವರಾಗಿರಬೇಕು. ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರು. (ಪ್ರಸ್ತುತ ಕೊನೆಯ ವರ್ಷ/ಸೆಮಿಸ್ಟರ್ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು )ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ಕೊಡಗು, ಉಡುಪಿ ಮತ್ತು ದಾವಣಗೆರೆ ಜಿಲ್ಲೆಯವರಾಗಿರಬೇಕು ಎಂದು ತಿಳಿಸಿದರು. ಸ್ಕಾಲರ್ಶಿಪ್ ಟೆಸ್ಟ್ ನಿಂದ ಹಲವು ಲಾಭಗಳಿವೆ :
ಐಎಎಸ್/ ಕೆಎಎಸ್ ಪರೀಕ್ಷಾ ಪೂರ್ವ ಸಿದ್ಧತಾ ತಯಾರಿಕೆಗೆ 11 ತಿಂಗಳು ನಿರಂತರ ಆನ್ಲೈನ್ ಕೋರ್ಸ್ ಉಚಿತವಾಗಿ ನೀಡಲಾಗುವುದು. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಳಲ್ಲಿಯೂ ತರಗತಿಗಳು ನಡೆಯಲಿದೆ. ನುರಿತ ಮಾರ್ಗದರ್ಶಕರಿಂದ ಪರಿಕ್ಷೆಯ ಕುರಿತು ಮಾರ್ಗದರ್ಶನ ದೊರೆಯಲಿದೆ. ವಾರಕ್ಕೊಮ್ಮೆ ಟೆಸ್ಟ್ ಸರಣಿ ನಡೆಸಲಾಗುತ್ತದೆ. ಐ.ಎ.ಎಸ್, ಕೆ.ಎ.ಎಸ್ ಮತ್ತು ಐ.ಪಿ.ಎಸ್ ಅಧಿಕಾರಿಗಳಿಂದ ಮೋಟಿವೇಷನ್ ಸೆಶನ್, ಕಲಿಯುವ ಕಾರ್ಯತಂತ್ರಗಳು, ಪ್ರಮುಖ ವಿಷಯಗಳ ಪ್ರಚಲಿತ ಘಟನೆ ಮತ್ತು ಮಾಸಿಕ ನಿಯತಕಾಲಿಕೆಗಳ ಉಪನ್ಯಾಸ ನೀಡಲಾಗುವುದು ಎಂದು ವಿವರಿಸಿದರು.ಒಬ್ಬ ವಿದ್ಯಾರ್ಥಿಗೆ ಈ ತರಬೇತಿ ನೀಡಲು ಸುಮಾರು 1,25,000 ಖರ್ಚಾಗಲಿದ್ದು, ಸುಮಾರು 100 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ಸರ್ಜಿ ಫೌಂಡೇಶನ್ ಭರಿಸಲಿದ್ದೆ. ನೈರುತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.ಪರೀಕ್ಷಾ ನೋಂದಣಿಗೆ ಮೇ 9 ಕಡೆದಿನವಾಗಿದ್ದು, ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಅಥವಾ ಪರೀಕ್ಷಾ ನೋಂದಣಿಗೆ ಮೊ.ಸಂ.7204747789 ಈ ನಂಬರ್ ಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕಿ ನಮಿತಾ ಧನಂಜಯ ಸರ್ಜಿ, ಸ್ಪರ್ಧಾ ಲೈನ್ಸ್ ನ ರಿಜಿನಲ್ ಔಟ್ ರೀಚ್ ಹೆಡ್ ಗೌರಿ ಶಂಕರ್, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ವಿಜಯ್ ಮಾಯೆರ್, ಮುರುಳಿಧರ್ ರಾವ್ ಕುಲಕರ್ಣಿ, ಅನಿಲ್ ಕುಮಾರ್ ಉಪಸ್ಥಿತರಿದ್ದರು.