ಸಾಂಸ್ಕೃತಿಕ ಅಸ್ಮಿತೆಯ ಅಭಿಜಾತ ಕಲಾವಿದೆ ಸರೋಜಾದೇವಿ; ತ.ನ.ಪ್ರಭುದೇವ್

KannadaprabhaNewsNetwork |  
Published : Jul 17, 2025, 12:37 AM IST
ದೊಡ್ಡಬಳ್ಳಾಪುರದಲ್ಲಿ ಹಿರಿಯ ನಟಿ ಬಿ.ಸರೋಜಾದೇವಿ, ರಂಗಕರ್ಮಿ ಜವಾಜಿ ಸೀತಾರಾಮ್‌ ನುಡಿನಮನ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಹಿರಿಯ ರಂಗ ಕಲಾವಿದ ಜವಾಜಿ ಸೀತಾರಾಂ ಅವರು ತಮ್ಮ ಸರಳ- ಸಜ್ಜನಿಕೆಯ ವ್ಯಕ್ತಿತ್ವದಿಂದ ಎಲ್ಲ ಜನರಿಗೂ ಹತ್ತಿರವಾದವರು. ದಶಕಗಳ ಕಾಲ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪಾತ್ರ ನಿರ್ವಹಣೆ, ನಾಟಕ ನಿರ್ದೇಶನಗಳನ್ನು ಮಾಡಿದ್ದಾರೆ. ಹೊಸ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದ ಅವರು, ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್‌ ಪಕ್ಷದ ನಿಷ್ಠ ಕಾರ್ಯಕರ್ತರಾಗಿ ಪಕ್ಷದ ಸಮಗ್ರ ಅಭಿವೃದ್ಧಿ, ಅಭ್ಯುದಯವನ್ನು ಗುರಿಯಾಗಿಸಿಕೊಂಡು ಅನೇಕ ಚಟುವಟಿಕೆಗಳಲ್ಲಿ ನಿರತರಾಗಿದ್ದರು .

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಸೋಮವಾರ ನಿಧನರಾದ ಹಿರಿಯ ಚಿತ್ರನಟಿ ಪದ್ಮಭೂಷಣ ಬಿ.ಸರೋಜಾದೇವಿ ಹಾಗೂ ಇತ್ತೀಚೆಗೆ ನಿಧನರಾದ ಹಿರಿಯ ರಂಗ ಕಲಾವಿದ ಜವಾಜಿ ಸೀತಾರಾಮ್‌ ನುಡಿನಮನ ಕಾರ್ಯಕ್ರಮ ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಮಂಗಳವಾರ ಸಂಜೆ ನಡೆಯಿತು.

ಉಭಯ ಕಲಾಚೇತನಗಳ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಮೂಲಕ ಸಂತಾಪ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ನಾಡು ಕಂಡ ಅಭಿಜಾತ ಕಲಾ ಚೇತನಗಳಲ್ಲಿ ಬಿ.ಸರೋಜಾದೇವಿ ಅವರಿಗೆ ಅಗ್ರಮಾನ್ಯ ಸ್ಥಾನವಿದೆ. ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವಾಗಿದ್ದ ಅವರು, 7 ದಶಕಗಳ ಕಾಲ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಹಾಗೂ ಹಿಂದಿ ಚಲನಚಿತ್ರಗಳಲ್ಲೂ ತಮ್ಮ ಕಲಾಪ್ರೌಢಿಮೆಯನ್ನು ಮೆರೆದಿರುವ ಅವರು, ವೃತ್ತಿ ಹಾಗೂ ವ್ಯಕ್ತಿಗತ ಬದುಕಿನಲ್ಲಿ ಘನತೆಯನ್ನು ಉಳಿಸಿಕೊಂಡು ಹೊಸಪೀಳಿಗೆಗೆ ಮಾದರಿ ಎನಿಸಿದ್ದಾರೆ ಎಂದರು.

ಸದಭಿರುಚಿಯ ಚಿತ್ರಗಳ ಮೂಲಕ ಕಲಾರಸಿಕರನ್ನು ಮಂತ್ರಮುಗ್ಧಗೊಳಿಸುವ ಅನೇಕ ಸಾರ್ಥಕ ಪಾತ್ರಗಳನ್ನು ಅವರು ನಿರ್ವಹಿಸಿದ್ದಾರೆ. ಕಿತ್ತೂರು ಚೆನ್ನಮ್ಮ ಸೇರಿದಂತೆ ಹಲವು ಐತಿಹಾಸಿಕ ಪಾತ್ರಗಳು, ಶ್ರೀನಿವಾಸ ಕಲ್ಯಾಣದಂತಹ ಚಿತ್ರಗಳಲ್ಲಿ ನಿರ್ವಹಿಸಿದ ಪೌರಾಣಿಕ ಪಾತ್ರಗಳು ಅನನ್ಯ. ಸಾಮಾಜಿಕ ಪಾತ್ರಗಳಲ್ಲಿ ಮಾದರಿ ವ್ಯಕ್ತಿತ್ವದ ಕುರುಹುಗಳನ್ನು ಅವರು ಬಿಟ್ಟುಹೋಗಿದ್ದಾರೆ ಎಂದರು.

ಸರಳ- ಸಜ್ಜನಿಕೆಯ ಜವಾಜಿ:

ಹಿರಿಯ ರಂಗ ಕಲಾವಿದ ಜವಾಜಿ ಸೀತಾರಾಂ ಅವರು ತಮ್ಮ ಸರಳ- ಸಜ್ಜನಿಕೆಯ ವ್ಯಕ್ತಿತ್ವದಿಂದ ಎಲ್ಲ ಜನರಿಗೂ ಹತ್ತಿರವಾದವರು. ದಶಕಗಳ ಕಾಲ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪಾತ್ರ ನಿರ್ವಹಣೆ, ನಾಟಕ ನಿರ್ದೇಶನಗಳನ್ನು ಮಾಡಿದ್ದಾರೆ. ಹೊಸ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದ ಅವರು, ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್‌ ಪಕ್ಷದ ನಿಷ್ಠ ಕಾರ್ಯಕರ್ತರಾಗಿ ಪಕ್ಷದ ಸಮಗ್ರ ಅಭಿವೃದ್ಧಿ, ಅಭ್ಯುದಯವನ್ನು ಗುರಿಯಾಗಿಸಿಕೊಂಡು ಅನೇಕ ಚಟುವಟಿಕೆಗಳಲ್ಲಿ ನಿರತರಾಗಿದ್ದರು ಎಂದು ಸ್ಮರಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್, ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹದೇವ್, ಜಿಲ್ಲಾ ಶಿವರಾಜ್‌ಕುಮಾರ್‌ ಕನ್ನಡ ಸೇನಾ ಸಮಿತಿಯ ಡಿ.ಸಿ.ಚೌಡರಾಜು, ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಸ್ಕೌಟ್‌ ಮತ್ತು ಗೈಡ್ಸ್‌ ಸಹಾಯಕ ಆಯುಕ್ತ ವೆಂಕಟರಾಜು, ಅಭಿನೇತ್ರಿ ಸಾಂಸ್ಕೃತಿಕ ಸಂಘದ ಎಚ್.ಎಸ್.ರೇವತಿ, ಅನಂತರಾಮ್, ಕಸಬಾ ಹೋಬಳಿ ಕಸಾಪದ ಜಿ.ಸುರೇಶ್, ಕಾಂಗ್ರೆಸ್‌ ಯುವ ಘಟಕದ ಜವಾಜಿ ರಾಜೇಶ್, ಪತ್ರಕರ್ತ ಕೃಷ್ಣಪ್ರಸಾದ್, ಕನ್ನಡ ಕಾರ್ಯಕರ್ತ ಸೂರಿ ಮತ್ತಿತರರು ಭಾಗವಹಿಸಿದ್ದರು.

PREV

Latest Stories

ಲಾಸ್ಟ್‌ ಬೆಂಚ್‌ ಇಲ್ಲದ ರಾಜ್ಯದ ಮೊದಲ ಶಾಲೆ ಯಲ್ಬುರ್ಗಾದಲ್ಲಿ
ರೈತರು ಜನಸಾಮಾನ್ಯರೊಂದಿಗೆ ಸ್ಪಂದಿಸಿ ಸರ್ವೇ ಕಾರ್ಯ ನಡೆಸಲು ಮನವಿ
ವೈಜ್ಞಾನಿಕ ಪ್ರಕಟಣೆಗಳಲ್ಲಿ ಭಾರತ ಯುಕೆ, ಜಪಾನಿಗಿಂತ ಮುಂದು