ಕನ್ನಡಪ್ರಭ ವಾರ್ತೆ ಉಡುಪಿ
ಪುತ್ತಿಗೆ ಶ್ರೀಗಳು ವಿದೇಶ ಪ್ರಯಾಣ, ಸಮುದ್ರೋಲ್ಲಂಘನೆ ಮಾಡಿದ್ದು ಶಾಸ್ತ್ರ ಉಲ್ಲಂಘನೆ ಎಂಬ ಕಾರಣಕ್ಕೆ ಅವರ 3ನೇ ಪರ್ಯಾಯೋತ್ಸವ, ಮೆರವಣಿಗೆ, ದರ್ಬಾರ್ ನಲ್ಲಿ ಇತರ ಸ್ವಾಮೀಜಿಗಳು ಭಾಗವಹಿಸಿರಲಿಲ್ಲ. ಕಳೆದ ಬಾರಿ ಭೀಮನಕಟ್ಟೆ ಮಠದ ಶ್ರೀ ರಘುಮಾನ್ಯ ತೀರ್ಥರು ಪುತ್ತಿಗೆ ಶ್ರೀಗಳಿಗೆ ಪೀಠಾರೋಹಣಕ್ಕೆ ಸಹಕರಿಸಿದ್ದರು.
ಈ ಬಾರಿಯೂ ಇತರ ಮಠಾಧೀಶರು ಪರ್ಯಾಯೋತ್ಸವದಲ್ಲಿ ಭಾಗವಹಿಸದೇ ಇರುವುದರಿಂದ ಪುತ್ತಿಗೆ ಶ್ರೀಗಳಿಗೆ ಪರ್ಯಾಯ ಅಧಿಕಾರ ಹಸ್ತಾಂತರ ಯಾರು ಮಾಡುತ್ತಾರೆ ಎಂಬ ಬಗ್ಗೆ ಭಕ್ತರಲ್ಲಿ ಆತಂಕ ಉಂಟಾಗಿತ್ತು. ಈ ಆತಂಕವನ್ನು ಅದಮಾರು ಶ್ರೀಗಳು ನಿರಾತಂಕಗೊಳಿಸಿದ್ದಾರೆ.ಈ ಬಾರಿಯೂ ಪುತ್ತಿಗೆ ಶ್ರೀಗಳ ಪರ್ಯಾಯೋತ್ಸವದ ಮೆರವಣಿಗೆಯಲ್ಲಿ, ದರ್ಬಾರಿನಲ್ಲಿ ಇತರ ಮಠಾಧೀಶರು ಭಾಗವಹಿಸಿರಲಿಲ್ಲ. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಪಟ್ಟ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ಆಗಮಿಸಿದ್ದರು.
ನಿರ್ಗಮನ ಪೀಠಾಧೀಶರು ಅಕ್ಷಯಪಾತ್ರೆ, ಕೃಷ್ಣಮಠದ ಕೀಲಿಕೈಗಳನ್ನು ನಿಯೋಜಿತ ಪೀಠಾದೀಶರಿಗೆ ಹಸ್ತಾಂತರಿಸಿ, ಸರ್ವಜ್ಞ ಪೀಠಾರೋಹಣ ಮಾಡಿಸಿ, ಕೃಷ್ಣನ ಪೂಜೆಯ ಅಧಿಕಾರ ಬಿಟ್ಟುಕೊಡುವುದು ಪದ್ಧತಿಯಾಗಿದೆ.
ಗುರುವಾರ ಮುಂಜಾನೆ ಪುತ್ತಿಗೆ ಶ್ರೀಗಳಿಗೆ ಅದಮಾರು ಶ್ರೀಗಳು ಅಕ್ಷಯಪಾತ್ರೆ ಹಸ್ತಾಂತರಿಸಿ, ಸರ್ವಜ್ಞ ಪೀಠಾರೋಹಣ ಮಾಡಿಸಿ, ಅಷ್ಟ ಮಠಗಳ ನಡುವೆ ಒಗ್ಗಟ್ಟಿನ ಹೊಸ ಭರವಸೆ ಮೂಡಿಸಿದ್ದಾರೆ.ಈ ಘಟನೆ ಕೃಷ್ಣನ ಇಚ್ಛೆ: ಪುತ್ತಿಗೆ ಶ್ರೀಅದಮಾರು ಶ್ರೀಗಳು ಬಂದು ಪರ್ಯಾಯ ಪೀಠದಲ್ಲಿ ಕುಳ್ಳಿರಿಸಿದ್ದು ನಮಗೆ ಅಚ್ಚರಿಯಾಗಿದೆ, ಇದು ಕೃಷ್ಣನ ಇಚ್ಛೆಯೇ ಆಗಿದೆ ಎಂದು ಪುತ್ತಿಗೆ ಶ್ರೀಗಳು ಸರ್ವಜ್ಞಪೀಠದಲ್ಲಿ ಕುಳಿತು ಹೇಳಿದರು.
ನಮ್ಮ ಪರ್ಯಾಯವನ್ನು ನಾವು ವಿಶ್ವ ಪರ್ಯಾಯ ಎಂದು ಘೋಷಿಸಿದ್ದೇವೆ. ಅದಕ್ಕೆ ಪೂರಕವಾಗಿ ವಿಶ್ವ ಎಂಬ ಹೆಸರನ್ನು ಹೊತ್ತಿರುವ ಶ್ರೀ ವಿಶ್ವಪ್ರಿಯ ತೀರ್ಥರೇ ಬಂದು ನಮ್ಮನ್ನು ಸರ್ವಜ್ಞ ಪೀಠಕ್ಕೇರಿಸಿದ್ದಾರೆ. ಕೃಷ್ಣನೇ ಈ ವಾತಾವರಣವನ್ನು ನಿರ್ಮಾಣ ಮಾಡಿದ್ದಾನೆ, ತಮ್ಮ ಪರ್ಯಾಯ ವಿಶ್ವಕ್ಕೆ ಪ್ರಿಯವಾಗುವ ಸಂದೇಶ ಇದು ಎಂದು ಹೇಳಿದರು.ಈ ಪರ್ಯಾಯದಿಂದ ವಿಶ್ವಕ್ಕೆ ಕ್ಷೇಮಾವಾಗಲಿ, ಭಾರತ ವಿಶ್ವ ಗುರುವಾಗಲಿ ಎಂದು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾರೈಸಿದರು.