ಕೋಟ: ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟು ಬಹುಮುಖ್ಯವಾದ ಪಾತ್ರ ವಹಿಸಲಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ್ ಹೇಳಿದರು. ಸಾಸ್ತಾನದ ಪಾಂಡೇಶ್ವರ ಬಿಲ್ಲವ ಯುವ ವೇದಿಕೆ ಮೂಡಹಡು ಆಶ್ರಯದಲ್ಲಿ ನೋಟ್ ಬುಕ್ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸಮಾಜದ ಋಣ ತಿರಿಸಲು ಹಲವು ದಾರಿಗಳಿವೆ. ಅದರಲ್ಲಿ ಶೈಕ್ಷಣಿಕ ಕ್ಷೇತ್ರಗಳಿಗೆ ಒಂದಿಷ್ಟು ಸಹಾಯಹಸ್ತ ಚಾಚಿದರೆ ಆ ವಿದ್ಯಾರ್ಥಿ ಬದುಕು ಹಸನಾಗುವುದರಲ್ಲಿ ಅನುಮಾನವೇ ಇಲ. ಈ ದಿಸೆಯಲ್ಲಿ ಸಮುದಾಯಗಳು ಸಾಮಾಜಿಕ ಬದ್ಧತೆ ಪ್ರದರ್ಶಿಸುವ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒಲವು ತೊರಬೇಕು ಎಂದರು. ಈ ಸಂದರ್ಭ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಾದ ಶ್ರೀಶಾ, ವನೀಶಾ, ಪ್ರಥಮ, ಪ್ರತ್ವೀನ್ ಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಿಲ್ಲವ ಸಮಯದಾಯದ ೨೧೦ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ಗಳನ್ನು ವಿತರಿಸಲಾಯಿತು.
ಬಿಲ್ಲವ ಯುವ ವೇದಿಕೆಯ ಕಾರ್ಯಾಧ್ಯಕ್ಷ ಸುರೇಶ್ ಪೂಜಾರಿ ಪಾಂಡೇಶ್ವರ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಇದರ ಸೀಮಾ ವಿಜಯ್ ಪೂಜಾರಿ ಹಾಗೂ ಉಷಾ ಗಣೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.