ಕನ್ನಡಪ್ರಭ ವಾರ್ತೆ ಬೇಲೂರು
ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಆರಂಭಗೊಂಡ ಈ ರಥಯಾತ್ರೆ ಶಿವಮೊಗ್ಗ, ಚಿಕ್ಕಮಗಳೂರು ಮಾರ್ಗವಾಗಿ ಹಾಸನ ಜಿಲ್ಲೆಗೆ ಆಗಮಿಸಿ ಎಂದು ಪಟ್ಟಣದ ಮುಖ್ಯರಸ್ತೆಯಲ್ಲಿ ಶೋಭಾಯಾತ್ರೆ ಪ್ರಾರಂಭಗೊಂಡಿದ್ದು, ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ದೇಶದಾದ್ಯಂತ ಸುಮಾರು 50,000 ಗ್ರಾಮಗಳನ್ನು ಸಂಚರಿಸಿ 3,50,000 ಕಿಲೋಮೀಟರ್ ಯಾತ್ರೆ ಪೂರ್ಣಗೊಳಿಸಿರುವ ಈ ರಥವು ಭಕ್ತರಲ್ಲಿ ವಿಶೇಷ ಭಾವನೆ ಮೂಡಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಪದ್ಮನಾಭ ಪೈ ಅವರು, ಈ ಪ್ರೇಮ ಪ್ರವಾಹಿನಿ ರಥವು ಸಾಮಾನ್ಯ ರಥವಲ್ಲ, ಸ್ವಾಮಿಯೇ ಬೇಲೂರಿಗೆ ಆಗಮಿಸಿದಂತೆಯೇ ಭಾವಿಸಬೇಕು. ದೇಶಾದ್ಯಂತ ಐದು ರಥಗಳು ಸಂಚರಿಸುತ್ತಿದ್ದು, ಅವುಗಳಲ್ಲಿ ಒಂದು ರಥ ಇಂದು ಬೇಲೂರಿಗೆ ಬಂದಿದೆ. ಭಕ್ತರ ಉತ್ಸಾಹ ಹಾಗೂ ಭಾವನಾತ್ಮಕ ಸ್ವಾಗತ ನೋಡುವುದು ಸಂತೋಷ ತಂದಿದೆ. ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಸ್ವಾಮಿಯವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.ಸತ್ಯಸಾಯಿ ಸೇವಾ ಸಂಸ್ಥೆಗಳ ಹಾಸನ ಜಿಲ್ಲಾ ಉಪಾಧ್ಯಕ್ಷ ಹಾಗೂ ಸತ್ಯಸಾಯಿ ಟ್ರಸ್ಟ್ ಅಧ್ಯಕ್ಷ ಇಂದ್ರೇಶ್ ಅವರು ಮಾತನಾಡಿ, ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಾರ್ವಜನಿಕರು, ಮಾಧ್ಯಮಗಳು ಹಾಗೂ ಪೊಲೀಸ್ ಇಲಾಖೆಯವರು ಉತ್ತಮ ಸಹಕಾರ ನೀಡಿದ್ದಾರೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ನಮ್ಮ ಭಾಗ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಸೇವಾ ಸಂಯೋಜಕಿಯಾದ ಪ್ರಿಯಾ ಪೈ, ರಾಜ್ಯ ಪುರುಷ ಸೇವಾ ಸಂಯೋಜಕರಾದ ಪ್ರಭಾಕರ್ ಬೀರಾದರ್ ಹಾಗೂ ಜಿಲ್ಲಾಧ್ಯಕ್ಷರಾದ ಡಾ. ನಾಗರಾಜ್, ಬಾಳೆಹಣ್ಣು ರಮೇಶ್ ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.