ಭಟ್ಕಳ:
ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದಲೇ ತೆಂಗಿನಗುಂಡಿಯ ಬೀಚ್ ರಸ್ತೆಗೆ ಹಾಕಲಾದ ವೀರ ಸಾವರ್ಕರ್ ನಾಮಫಲಕ ಮತ್ತು ಭಗವಾಧ್ವಜ ತೆರವುಗೊಳಿಸಲಾಗಿದೆ. ಬಹುಸಂಖ್ಯಾತ ಹಿಂದೂಗಳನ್ನು ದ್ವೇಷಿಸಿ ಅಲ್ಪಸಂಖ್ಯಾತರ ತುಷ್ಟೀಕರಣವೇ ಕಾಂಗ್ರೆಸ್ ನೀತಿಯಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.ಪಟ್ಟಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳನ್ನು ದ್ವೇಷಿಸಿ, ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದೇ ಕೆಲಸವಾಗಿದೆ. ಅಧಿಕಾರಕ್ಕೆ ಬಂದ ದಿನದಿಂದ ಹಿಂದೂಗಳ ಮೇಲೆ ವಿನಾಕಾರಣ ದ್ವೇಷ ಮಾಡುತ್ತಿರುವ ಮುಖ್ಯಮಂತ್ರಿಗಳು ಮಂಡ್ಯದ ಕೆರೆಗೋಡಿನಲ್ಲಿ ಹನುಮಧ್ವಜ ತೆರವುಗೊಳಿಸಿದರೆ, ಭಟ್ಕಳದಲ್ಲಿ ಭಗವಾಧ್ವಜ ಹಾಗೂ ವೀರ ಸಾವರ್ಕರ್ ಕಟ್ಟೆ ಧ್ವಂಸಗೊಳಿಸಿದರು. ಇದು ಒಂದಕ್ಕೊಂದು ಪೂರಕವಾಗಿದ್ದು ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕೂ ಇದೆ ಎಂದು ಕಿಡಿಕಾರಿದರು.ಅಯೋಧ್ಯೆ ರಾಮಮಂದಿರದ ಉದ್ಘಾಟನೆಯ ಯಶಸ್ಸನ್ನು ಸಹಿಸಲಾಗದೇ ಈ ಕೃತ್ಯ ಎಸಗಲಾಗಿದೆ. ೩೦ ವರ್ಷಗಳಿಂದ ಇದ್ದ ಹನುಮಧ್ವಜ ತೆರವುಗೊಳಿಸಿರುವ ರೀತಿಯಲ್ಲಿಯೇ ಭಟ್ಕಳದ ತೆಂಗಿನಗುಂಡಿಯಲ್ಲೂ ನಡೆದಿದೆ ಎಂದ ಅವರು, ನಮ್ಮ ಬೇಡಿಕೆಯಂತೆ ಅನಧೀಕೃತ ನಾಮ ಫಲಕ ತೆರವುಗೊಳಿಸದೇ ಇದ್ದಲ್ಲಿ ಮತ್ತೆ ಪುನಃ ನಾಮ ಫಲಕ ಅಳವಡಿಸುವುದು ಶತಸಿದ್ಧ. ಯಾರೇ ಆಗಲಿ ಇದಕ್ಕೆ ಅಡ್ಡಿಪಡಿಸಿದರೆ, ಕಿತ್ತು ಹಾಕಿದರೆ ಎಲ್ಲೆಡೆ ವೀರ ಸಾವರ್ಕರ್ ನಾಮ ಫಲಕ ಅಳವಡಿಸುತ್ತೇವೆ. ತಾಕತ್ತಿದ್ದರೆ ತಡೆಯಿರಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.ಕಾಂಗ್ರೆಸ್ಸಿನ ಹಿಂದೂ ವಿರೋಧಿ ನೀತಿಯನ್ನು ಹಿಂದೂ ಸಮಾಜ ಬಲವಾಗಿ ಖಂಡಿಸುತ್ತದೆ. ದೇಶ ತುಂಡಾಗುವುದನ್ನು ವಿರೋಧಿಸಿದ್ದ ಸಾವರ್ಕರ್ ಅವರನ್ನು ಕಾಂಗ್ರೆಸ್ ವಿನಾಕಾರಣ ವಿರೋಧಿಸುತ್ತಿದೆ ಎಂದು ಹರಿಪ್ರಕಾಶ ಕೋಣೆಮನೆ ಹೇಳಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತಕ್ಕೆ ಬಂದ ಬಳಿಕ ಹಿಂದೂಗಳ ಮೇಲೆ, ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುವುದು, ಹಳೇ ಪ್ರಕರಣ ಕೆದಕುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕಾರ್ಯ ಮಾಡುತ್ತಿದೆ. ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡುವ ಮೂಲಕ ಅವರನ್ನು ಹೋರಾಟದಿಂದ ಹಿಮ್ಮೆಟ್ಟಿಸುವ ಕಾರ್ಯ ಮಾಡಿದರೆ ಹುಷಾರ್ ಎಂದ ಅವರು, ಭಟ್ಕಳದಲ್ಲಿ ಸಾವರ್ಕರ್ ಕಟ್ಟೆ ಒಡೆದು ಹಾಕಿದ ಬಗ್ಗೆ ಪ್ರತಿ ಮಂಡಳ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ರಾಜ್ಯ ಬಿಜೆಪಿ ಈ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದು ರಾಜ್ಯ ಸರ್ಕಾರಕ್ಕೆ ಹಿಂದೂಗಳ ತಂಟೆಗೆ ಬರದಿರಿ ಎಂದು ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರಿಪ್ರಕಾಶ ಕೋಣೆಮನೆ, ರಾಷ್ಟ್ರೀಯ ನಾಯಕರ ಪ್ರತಿಮೆ, ಕಟ್ಟೆ ಕಟ್ಟಲು ಎಲ್ಲರಿಗೂ ಅವಕಾಶವಿದೆ. ತೆಂಗಿನಗುಂಡಿಯಲ್ಲಿ ಭಗವಾಧ್ವಜದ ಕಟ್ಟೆ ಮತ್ತು ವೀರ ಸಾವರ್ಕರ್ ನಾಮಫಲಕ ದ್ವೇಷಪೂರಿತವಾಗಿ ತೆಗೆದು ಹಾಕಲಾಗಿದ್ದು ಪರವಾನಗಿ ಇಲ್ಲದೇ ಜಿಲ್ಲೆ, ರಾಜ್ಯದಲ್ಲಿ ನೂರಾರು ಪ್ರತಿಮೆ, ಕಟ್ಟೆ, ನಾಮಫಲಕಗಳಿವೆ. ಇಂತಹವುಗಳು ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.ತೆಂಗಿನಗುಂಡಿಯಲ್ಲಿ ತೆರವುಗೊಳಿಸಿದ ಸ್ಥಳದಲ್ಲೇ ಭಗವಾಧ್ವಜದ ಕಟ್ಟೆ ಮತ್ತು ವೀರ ಸಾವರ್ಕರ್ ನಾಮಫಲಕ ಹಾಕಲು ಅವಕಾಶ ಕೊಡಬೇಕು. ಇಲ್ಲದಿದ್ದಲ್ಲಿ ಸರ್ಕಾರ ಎಲ್ಲ ಅನಧಿಕೃತ ಕಟ್ಟೆ ಮತ್ತು ನಾಮಫಲಕ ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.ಮಾಜಿ ಶಾಸಕ ಸುನೀಲ ನಾಯ್ಕ, ಜಿಲ್ಲಾ ಬಿಜೆಪಿ ಮುಖಂಡ ಗೋವಿಂದ ನಾಯ್ಕ, ಈಶ್ವರ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಡಿಗ, ರವಿ ನಾಯ್ಕ ಜಾಲಿ,ಭಾಸ್ಕರ ದೈಮನೆ ಮುಂತಾದವರಿದ್ದರು.