ಸಣ್ಣ ಭಾಷೆ ಉಳಿಸಿ ಬೆಳೆಸಿ: ಸದಾನಂದ ಗೌಡ ಕರೆ

KannadaprabhaNewsNetwork |  
Published : Mar 01, 2025, 01:01 AM IST
ಚಿತ್ರ : 28ಎಂಡಿಕೆ4 : ಅಕಾಡೆಮಿ ವತಿಯಿಂದ 2022 ಮತ್ತು 2023 ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜದಲ್ಲಿ 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ, ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಬಿಡುಗಡೆ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಕೊಡವ, ಅರೆಭಾಷಿಕರು ಸೇರಿದಂತೆ ಹಲವು ಸಣ್ಣ ಸಣ್ಣ ಭಾಷಿಕ ಸಮಾಜದವರು ಬದುಕಿನ ಬಂಡಿ ಸಾಗಿಸುತ್ತಿದ್ದು, ಎಲ್ಲ ಸಣ್ಣ ಸಣ್ಣ ಭಾಷಿಕರೂ ಕೊಡಗಿನ ಇತಿಹಾಸ ತಿಳಿದು, ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಕರೆ ನೀಡಿದ್ದಾರೆ.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜದಲ್ಲಿ ಶುಕ್ರವಾರ ನಡೆದ 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ, ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಜಾತಿ, ಭಾಷೆ ಮೇಲೆ ಸಂಘರ್ಷ ಮಾಡದೆ ಸಾಮರಸ್ಯದ ಬದುಕು ಕಾಣಬೇಕಿದೆ. ಎಲ್ಲರೂ ಒಂದಾಗಿ ಸಾಗಬೇಕಿದೆ. ಯಾವುದೇ ಸಣ್ಣ ಭಾಷೆಯಾದರೂ ಅದು ಉಳಿಯಬೇಕು. ಮಕ್ಕಳಿಗೆ ಅರೆಭಾಷೆ ಜೊತೆಗೆ ನಾಡಿನ ಭಾಷೆ ಕನ್ನಡ ಹಾಗೆಯೇ ಸಂಪನ್ಮೂಲ ಭಾಷೆಯಾದ ಇಂಗ್ಲಿಷ್ ಭಾಷೆ ಕಲಿಸೋಣ. ಆದರೆ ಮನೆಯಲ್ಲಿ ಅರೆಭಾಷೆ ಕಲಿಸುವಂತಾಗಬೇಕು ಮತ್ತು ಮಾತನಾಡುವಂತಾಗಬೇಕು. ಅರೆಭಾಷೆ ಕಲೆ, ಸಂಸ್ಕೃತಿ, ಸಾಹಿತ್ಯ, ಆಚಾರ-ವಿಚಾರಗಳನ್ನು ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.ಯಾವುದೇ ಮಾತೃ ಭಾಷೆ ಕಡೆಗಣಿಸಿದರೆ ಸಂಸ್ಕೃತಿ, ಸಂಪ್ರದಾಯಗಳು ಕ್ಷೀಣಿಸುತ್ತವೆ. ರಾಷ್ಟ್ರದಲ್ಲಿ 174 ಭಾಷೆಗಳು ಈಗಾಗಲೇ ಅಪಾಯದಲ್ಲಿದ್ದು, 101 ಭಾಷೆಗಳು ತೀರ ಅಪಾಯದಲ್ಲಿವೆ. 71 ಭಾಷೆಗಳು ನಶಿಸಿಹೋಗಿವೆ ಎಂದು ಹೇಳಿದರು.

ಕೊಡಗಿನ ಸಂಸ್ಕೃತಿ ಉಳಿವಿನಲ್ಲಿ ಅರೆಭಾಷಿಕರ ಶ್ರಮ:ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ನಾಡಿನಲ್ಲಿ ಕೊಡಗು ಜಿಲ್ಲೆ ತನ್ನದೇ ಆದ ವೈಶಿಷ್ಯತೆ ಹೊಂದಿದೆ. ಕೊಡಗು ಜಿಲ್ಲೆಯಲ್ಲಿ ಕೊಡವ ಮತ್ತು ಅರೆಭಾಷೆ ಸೇರಿದಂತೆ ಹಲವು ಸಣ್ಣ ಭಾಷಿಕರು ಇರುವುದು ಒಂದು ರೀತಿ ವೈಶಿಷ್ಟ್ಯವೇ ಸರಿ. ಅರೆಭಾಷಿಗ ಜನಾಂಗದಲ್ಲಿರುವ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳು ಉಳಿಯಬೇಕು. ಸಂಸ್ಕೃತಿ, ಕಲೆಗಳು, ಪರಂಪರೆ ಉಳಿದಲ್ಲಿ ಕೊಡಗು ಜಿಲ್ಲೆ ಉಳಿಯಲು ಸಾಧ್ಯ. ಕೊಡಗಿನ ಸಂಸ್ಕೃತಿ, ಆಚಾರ-ವಿಚಾರಗಳು ಉಳಿಸುವಲ್ಲಿ ಅರೆಭಾಷಿಕರ ಶ್ರಮವಿದೆ ಎಂಬುದನ್ನು ಮರೆಯುವಂತಿಲ್ಲ ಎಂದರು.ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಅಕಾಡೆಮಿ ಒಂದು ಹೆಮ್ಮರವಾಗಿದೆ. ಅರೆಭಾಷೆ ಅಕಾಡೆಮಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.ಶಿಕ್ಷಣ ತಜ್ಞ ಮತ್ತು ಚಿಂತಕ ಪ್ರೊ.ಕೆ.ಇ. ರಾಧಾಕೃಷ್ಣ ಮಾತನಾಡಿ, ನನ್ನ ಮನೆಯ ಭಾಷೆ ತುಳು ಆಗಿದ್ದು, ಕಲಿತದ್ದು ಅರೆಭಾಷೆಯಾಗಿದೆ. ಉಪ ಭಾಷೆ ಹಾಗೂ ಉಪ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಅಕಾಡೆಮಿ ಚಟುವಟಿಕೆಗಳು ವಿಶಾಲವಾಗಿರಬೇಕು. ಎಲ್ಲರೂ ಒಂದಾಗಿ ನಡೆಯಬೇಕು. ಅಮರ ಸುಳ್ಯದ ಕುರಿತು ಸ್ಮಾರಕ ನಿರ್ಮಾಣವಾಗಬೇಕು ಎಂದರು.ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಹಿರಿಯರಿಗೆ ಸನ್ಮಾನಿಸಿದಲ್ಲಿ ಯುವ ಜನರಿಗೆ ಸ್ಫೂರ್ತಿಯಾಗುತ್ತದೆ. ಎಲ್ಲರೂ ಪಕ್ಷಾತೀತವಾಗಿ ಒಂದಾಗಬೇಕು. ಎಲ್ಲರಿಗೂ ಸ್ಫೂರ್ತಿಯಾಗಬೇಕು. ನಾಡಿನಲ್ಲಿ ಹಿಂದಿ ಭಾಷೆ ಹೇರಿಕೆ ಮಾಡುತ್ತಿದ್ದು, ಮಾತೃ ಭಾಷೆಯನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಬಡವರ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.

ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಅಕಾಡೆಮಿ ಚಟುವಟಿಕೆಗೆ ಇನ್ನಷ್ಟು ಅಗತ್ಯ ಸಹಕಾರ ನೀಡುವಂತಾಗಬೇಕು. ಸಮಾಜದಲ್ಲಿ ಉತ್ತಮ ಕೆಲಸ ಮಾಡುವವರನ್ನು ಗುರುತಿಸುತಿರುವುದು ಶ್ಲಾಘನೀಯ. ಅರೆಭಾಷೆ ಅಕಾಡೆಮಿ ಸ್ಥಾಪನೆ ಉದ್ದೇಶ ಇಂತಹ ಕಾರ್ಯಕ್ರಮಗಳ ಮೂಲಕ ಸಾರ್ಥಕವಾಗಿದೆ ಎಂದು ಅಭಿಪ್ರಾಯಪಟ್ಟರು.ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ಸಣ್ಣ ಸಣ್ಣ ಭಾಷೆಗಳನ್ನು ಸಹ ಉಳಿಸಿ, ಬೆಳೆಸಬೇಕು, ಭಾಷೆ ಉಳಿದಾಗ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.ಅಲ್ಟ್ರಾ ಬಯೋಕೆಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ತೇನನ ರಾಜೇಶ್ ಮಾತನಾಡಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು, ಆಚಾರ-ವಿಚಾರಗಳು, ಸಂಪ್ರದಾಯಗಳ ಬಗ್ಗೆ ಎಲ್ಲೆಡೆ ಮಾಹಿತಿ ನೀಡುವಂತಾಗಬೇಕು ಎಂದು ಕರೆ ನೀಡಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಅಕಾಡೆಮಿ ಅಧ್ಯಕ್ಷನಾದ ನಂತರ ಮೊದಲ ಸಭೆಯಲ್ಲಿ 12 ಸಂಶೋಧನಾ ಹೊತ್ತಿಗೆ ತರಲು ನಿರ್ಧರಿಸಲಾಯಿತು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 8 ಸಂಶೋಧನಾ ಪ್ರಬಂಧಗಳು, 8 ಅರೆಭಾಷೆ ಕೃತಿಗಳನ್ನು ಲೋಕಾರ್ಪಣೆ ಮಾಡಿರುವುದು ವಿಶೇಷವಾಗಿದೆ. ಹಾಗೆಯೇ ಅರೆಭಾಷೆ ಕೃತಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗಿದೆ. ಹಾಗೆಯೇ ಅರೆಭಾಷೆ ಮಾತನಾಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇತರ ಫಲಾನುಭವಿಗಳಿಗೆ ಸಾಂಸ್ಕೃತಿಕ ಮತ್ತು ವಾದ್ಯ ಪರಿಕರಗಳನ್ನು ವಿತರಿಸಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.ಶಿಕ್ಷಣ ಮತ್ತು ವೈದ್ಯಕೀಯ ಸೇವೆಗೆ 2022ನೇ ಗೌರವ ಪ್ರಶಸ್ತಿ ಪಡೆದ ಡಾ.ಕೆ.ವಿ.ಚಿದಾನಂದ ಮಾತನಾಡಿ, ಅರೆಭಾಷಿಕ ಹೆಣ್ಣು ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಒಂದು ಲಕ್ಷ ವರೆಗೆ ಶಿಷ್ಯ ವೇತನ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.ಸನ್ಮಾನ ಕಾರ್ಯಕ್ರಮ

2022ನೇ ಗೌರವ ಪ್ರಶಸ್ತಿ ಪಡೆದ ಡಾ.ಕಾವೇರಿಮನೆ ಭೋಜಪ್ಪ (ಸಂಶೋಧನೆ ಮತ್ತು ಅರೆಭಾಷೆ ಸಾಹಿತ್ಯ ಕ್ಷೇತ್ರ), ಡಾ.ಕೆ.ವಿ.ಚಿದಾನಂದ (ಶಿಕ್ಷಣ ಮತ್ತು ವೈದ್ಯಕೀಯ ಸೇವೆಗೆ), ತುಂತಜೆ ವೆಂಕಟೇಶ್ (ಗಣೇಶ್) (ಅರೆಭಾಷೆ ಮತ್ತು ಸಂಸ್ಕೃತಿ ಸೇವೆ) ಹಾಗೂ 2023ನೇ ಗೌರವ ಪ್ರಶಸ್ತಿ ಪಡೆದ ಕುಯಿಂತೋಡು ದಾಮೋದರ (ಅರೆಭಾಷೆ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆ), ಎ.ಕೆ.ಹಿಮಕರ (ಅರೆಭಾಷೆ ಅಧ್ಯಯನ ಮತ್ತು ಸಂಶೋಧನೆ) ಮತ್ತು ಕೂಡಕಂಡಿ ಕಾವೇರಮ್ಮ ಸೋಮಣ್ಣ (ಅರೆಭಾಷೆ ಸಾಧಕಿ ಮತ್ತು ಕಲಾ ಪೋಷಕರು) ಅವರನ್ನು ಸನ್ಮಾನಿಸಲಾಯಿತು.ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಪರಿಚಯವನ್ನು ಚಂದ್ರಾವತಿ ಬಡ್ಡಡ್ಕ ನಿರ್ವಹಿಸಿದರು. ಗೌರವ ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಅಕಾಡೆಮಿ ಸದಸ್ಯರಾದ ಲತಾ ಪ್ರಸಾದ್ ಕುದ್ಪಾಜೆ, ಡಾ.ಎನ್.ಎ.ಜ್ಞಾನೇಶ್, ಮೋಹನ ಪೊನ್ನಚನ, ತೇಜಕುಮಾರ್ ಕುಡೆಕಲ್ಲು, ಲೋಕೇಶ್ ಊರುಬೈಲು, ಸಂದೀಪ್ ಪುಳಕಂಡ ನಿರ್ವಹಿಸಿದರು.ವಾದ್ಯ ಪರಿಕರಗಳ ವಿತರಣೆ ಪಟ್ಟಿಯನ್ನು ಅಕಾಡೆಮಿ ಸದಸ್ಯರಾದ ಗೋಪಾಲ್ ಪೆರಾಜೆ ನಿರ್ವಹಿಸಿದರು. ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ, ವಿನೋದ್ ಮೂಡಗದ್ದೆ, ಪಿ.ಎಸ್.ಕಾರ್ಯಪ್ಪ, ಕುದುಪಜೆ ಕೆ.ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಇತರರು ಇದ್ದರು. ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೆರಾಲು ಸ್ವಾಗತಿಸಿದರು. ಆರತಿ ಪುರುಷೋತ್ತಮ ಪ್ರಾರ್ಥಿಸಿದರು. ಬೇಬಿ ವಿದ್ಯಾ ಹಾಗೂ ಕೆ.ಟಿ.ವಿಶ್ವನಾಥ ನಿರೂಪಿಸಿದರು. ರಿಜಿಸ್ಟಾçರ್ ಚಿನ್ನಸ್ವಾಮಿ ವಂದಿಸಿದರು. ಸುಳ್ಯದ ಆರತಿ ಪುರುಷೋತ್ತಮ ಮತ್ತು ಬಳಗದವರಿಂದ ಅರೆಭಾಷೆ ಹಾಡುಗಳ ರಸಮಂಜರಿ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''