ಜೂ.೩೦ರಿಂದ ಮಂಡ್ಯ ಮೆಡಿಕಲ್ ಕಾಲೇಜು ಉಳಿಸಿ ಅಭಿಯಾನ

KannadaprabhaNewsNetwork | Published : Jun 19, 2025 11:49 PM

ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ೧೮ ಎಕರೆ ಭೂಮಿಯನ್ನು ಉಳಿಸಲು ಜೂ.೩೦ರಿಂದ ಜಾಗೃತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾಲೇಜಿಗೆ ಸೇರಿದ ಜಾಗದಲ್ಲಿ ನೆಲೆಸಿರುವ ನಿವಾಸಿಗಳನ್ನು ಕೆರೆಯಂಗಳದಲ್ಲಿ ನಿರ್ಮಿಸಿರುವ ಮನೆಗಳಿಗೆ ಸ್ಥಳಾಂತರ ಮಾಡುವ ಮೂಲಕ ಕಾಲೇಜು ಮತ್ತು ಆಸ್ಪತ್ರೆ ಅಭಿವೃದ್ಧಿಗೆ ಕೈಜೋಡಿಸಬೇಕೆನ್ನುವುದು ಈ ಅಭಿಯಾನದ ಉದ್ದೇಶ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ೧೮ ಎಕರೆ ಭೂಮಿಯನ್ನು ಉಳಿಸಲು ಜೂ.೩೦ರಿಂದ ಜಾಗೃತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಕರವೇ (ಎಚ್.ಶಿವರಾಮೇಗೌಡ ಬಣ) ಅಧ್ಯಕ್ಷ ಎಚ್.ಡಿ.ಜಯರಾಂ ತಿಳಿಸಿದರು.

ಕಾಲೇಜಿಗೆ ಸೇರಿದ ಜಾಗದಲ್ಲಿ ನೆಲೆಸಿರುವ ನಿವಾಸಿಗಳನ್ನು ಕೆರೆಯಂಗಳದಲ್ಲಿ ನಿರ್ಮಿಸಿರುವ ಮನೆಗಳಿಗೆ ಸ್ಥಳಾಂತರ ಮಾಡುವ ಮೂಲಕ ಕಾಲೇಜು ಮತ್ತು ಆಸ್ಪತ್ರೆ ಅಭಿವೃದ್ಧಿಗೆ ಕೈಜೋಡಿಸಬೇಕೆನ್ನುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಮಿಳು ನಿವಾಸಿಗಳಿಗೆ ನಾಲ್ಕು ಬಾರಿ ಮನೆ ನಿರ್ಮಿಸಿಕೊಟ್ಟರೂ ಅಲ್ಲಿಗೆ ತೆರಳದೆ ಕಾಲೇಜು ಮತ್ತು ಆಸ್ಪತ್ರೆ ಅಭಿವೃದ್ಧಿಗೆ ಪ್ರಮುಖ ಅಡ್ಡಿಯಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ತಮಿಳು ನಿವಾಸಿಗಳು ಸವಾಲೊಡ್ಡುತ್ತಾ ಬಂದಿದ್ದು ಈ ವಿಷಯದಲ್ಲಿ ಕನ್ನಡಿಗರನ್ನು ಜಾಗೃತಗೊಳಿಸಲಾಗುವುದು. ಮೊದಲ ಹಂತದಲ್ಲಿ ನಗರದ ೩ ವಾರ್ಡ್‌ಗಳಲ್ಲಿ ಬೈಕ್ ಮತ್ತು ತೆರೆದ ವಾಹನದ ಮೂಲಕಕ ತೆರಳಿ ಒಂದು ಲಕ್ಷ ಕರಪತ್ರ ಹಂಚಿ ಮೆಡಿಕಲ್ ಕಾಲೇಜು ಅಭಿವೃದ್ಧಿಗೆ ಕೈಜೋಡಿಸುವಂತೆ ಕನ್ನಡಿಗರಲ್ಲಿ ಮನವಿ ಮಾಡಲಾಗುವುದು. ನಗರದಾದ್ಯಂತ ಪೋಸ್ಟರ್ ಹಾಗೂ ಸ್ಟಿಕ್ಕರ್‌ಗಳನ್ನು ಅಳವಡಿಸಿ ಮೆಡಿಕಲ್ ಕಾಲೇಜು ಆಸ್ಪತ್ರೆ ವಿಸ್ತರಣೆ ಅಭಿವೃದ್ಧಿಯ ಮಹತ್ವ ತಿಳಿಸಲಾಗುವುದು ಎಂದರು.

ಎರಡನೇ ಹಂತದಲ್ಲಿ ಮಂಡ್ಯ ಗ್ರಾಮಾಂತರ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸಲಾಗುವುದು. ಈ ನಡುವೆ ತಮಿಳು ಕಾಲೋನಿ ನಿವಾಸಿಗಳಿಗೆ ನಿರ್ಮಿಸಿದ ಮನೆಗಳನ್ನು ಅನ್ಯರ ಪಾಲು ಮಾಡಿ ತಮಿಳು ಕಾಲೋನಿ ನಿವಾಸಿಗಳನ್ನು ಆಸ್ಪತ್ರೆ ಜಾಗದಲ್ಲೇ ಉಳಿಸುವ ಓಟ್ ಬ್ಯಾಂಕ್ ರಾಜಕಾರಣ ಮಾಡುವ ಪ್ರಯತ್ನವೂ ಸಾಗಿದೆ. ಇದರ ಭಾಗವಾಗಿ ಬುಧವಾರ ಕೆರೆಯಂಗಳದ ತಮಿಳು ನಿವಾಸಿಗಳ ಮನೆಗಳಿಗೆ ಅಕ್ರಮ ಪ್ರವೇಶ ನಡೆಸಿ ವಶಕ್ಕೆ ಪಡೆಯುವ ಪ್ರಯತ್ನ ನಡೆಸಲಾಗಿದೆ. ಜಿಲ್ಲೆಯ ಅಭಿವೃದ್ಧಿಯ ದೂರದೃಷ್ಟಿಯಿಲ್ಲದ ರಾಜಕೀಯ ನಾಯಕರಿಂದ ಅಸಿಟೇಟ್ ಕಾರ್ಖಾನೆಗೆ ಸೇರಿದ ೧೨೫ ಎಕರೆ ಖಾಸಗಿಯವರ ಪಾಲಾಗುವಂತಾಯಿತು ಎಂದು ದೂಷಿಸಿದರು.

ಈಗ ಮೆಡಿಕಲ್ ಕಾಲೇಜಿಗೆ ಸೇರಿದ ಜಾಗವನ್ನು ಖಾಸಗಿಯವರ ಪಾಲಾಗಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಜಿಲ್ಲೆಯ ಜನರು ಅವಕಾಶ ನೀಡದೆ ಅಭಿವೃದ್ಧಿ ದೃಷ್ಟಿಯಿಂದ ರಾಜಕೀಯ ಪಕ್ಷಗಳು ಸಂಘಟನೆಗಳು ಈ ಆಂದೋಲನಕ್ಕೆ ಕೈಜೋಡಿಸಬೇಕಿದೆ. ಟ್ರಾಮಾಕೇರ್, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಹೃದ್ರೋಗ ಆಸ್ಪತ್ರೆ ಸ್ಥಾಪನೆಯಿಂದ ಜಿಲ್ಲೆಯ ೩೦ ಲಕ್ಷ ಜನರಿಗೆ ಅನುಕೂಲವಾಗಲಿದೆ. ನಗರ ಪ್ರಮುಖ ಜಿಲ್ಲಾ ಕೇಂದ್ರವಾಆಗಿ ರೂಪುಗೊಳ್ಳಲಿದೆ. ಈಗಾಗಲೇ ಸ್ಥಳಾವಕಾಶದ ಕೊರತೆಯಿಂದ ೧೦೦ ಹಾಸಿಗೆ ಸಾಮರ್ಥ್ಯದ ತಾಯಿ-ಮಕ್ಕಳ ಆಸ್ಪತ್ರೆ ಬಿ.ಹೊಸೂರು ಕಾಲೋನಿಗೆ ಸ್ಥಳಾಂತರಗೊಂಡಿದೆ. ಆಸ್ಪತ್ರೆ ಅಭಿವೃದ್ಧಿಗೆ ಬಂದ ಹಣವೂ ವಾಪಸಾಗಿದೆ. ಇದನ್ನು ಜಿಲ್ಲೆಯ ಜನಪ್ರತಿನಿಧಿಗಳು ಅರಿತು ಆಸ್ಪತ್ರೆ ಅಭಿವೃದ್ಧಿಗೆ ನೆರವಾಗಬೇಕು ಎಂದರು.