ಕುಷ್ಟಗಿ:ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದರ ಮೂಲಕ ಸ್ತ್ರೀಯರ ಶಿಕ್ಷಣಕ್ಕಾಗಿ ಹಗಲಿರಳು ಶ್ರಮಿಸಿದ ತಾಯಿ ಅಕ್ಷರದವ್ವ ಈ ದೇಶದ ಮೊದಲ ಶಾಲಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಎಂದು ಶೈಕ್ಷಣಿಕ ಚಿಂತಕ ಶರಣಪ್ಪ ತೆಮ್ಮಿನಾಳ ಹೇಳಿದರು.
ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀಯರು ಕೂಡಾ ಪುರುಷರಷ್ಟೇ ಸಾಧನೆಯ ಶಿಖರವನ್ನು ಏರಬಲ್ಲರು ಎನ್ನುವುದನ್ನು ಸಾಬೀತುಪಡಿಸುವುದರೊಂದಿಗೆ ಅಂದಿನ ಕಾಲಘಟ್ಟದಲ್ಲಿ ಶಿಕ್ಷಣದಿಂದ ವಂಚಿತರಾದ ಮಹಿಳೆಯರಿಗೆ ಉಚಿತ ಶಿಕ್ಷಣ ಕೊಡುವ ಮೂಲಕ ಭಾರತದ ಆಧುನಿಕತೆಯ ಶಿಕ್ಷಣದ ವ್ಯವಸ್ಥೆಯಲ್ಲಿ ತನ್ನದೇ ಆದ ಹೆಗ್ಗುರುತನ್ನು ಮೂಡಿಸಿದ ಮಹಾತಾಯಿಯಾಗಿದ್ದಾರೆ ಎಂದು ತಿಳಿಸಿದರು.
ಹತ್ತಾರು ಮಹಿಳಾ ಸಾಧಕಿಯರ ಬಗ್ಗೆ ದೃಷ್ಟಾಂತ ತಿಳಿಸುವ ಮೂಲಕ ಸಾಧಿಸಲು ಸತತ ಪ್ರಯತ್ನವಿರಬೇಕು ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಹಿರೇಮನಿ, ಮುಖ್ಯೋಪಾಧ್ಯಾಯ ಅನ್ನಪೂರ್ಣ ತಾಳಕೇರಿ, ಶಿಕ್ಷಕಿ ಜಹಾನ ಆರಾ, ಪುಷ್ಪಾ ಶಾಖಾಪುರ ಇದ್ದರು. ನಾಲ್ಕನೇ ತರಗತಿಯ ದೀಕ್ಷಾ ಹಾಗೂ ಸಾನ್ವಿಕಾ ಸಾವಿತ್ರಿಬಾಯಿ ಪುಲೆ ಅವರ ವೇಷಭೂಷಣಗಳನ್ನ ಧರಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.