ಪುತ್ತೂರು ಸವಣೂರಿನಲ್ಲಿ 30 ವರ್ಷಗಳ ಹಿಂದೆ ಎರಡು-ಮೂರು ಅಂಗಡಿಗಳು, ಸೊಸೈಟಿ-ಬ್ಯಾಂಕ್ ಬಿಟ್ಟರೆ ಬೇರೇನೂ ಸೌಲಭ್ಯ ಇರದ ಸಂದರ್ಭದಲ್ಲಿ ಸವಣೂರು ಸೀತಾರಾಮ ರೈಯವರು ಸವಣೂರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದರು. ಜೊತೆಗೆ ಸುಮಾರು 20 ಎಕ್ರೆ ವಿಸ್ತೀರ್ಣದ ಬೋರುಗುಡ್ಡ ಪ್ರದೇಶವಾಗಿದ್ದ ಜಾಗದಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಶಿಕ್ಷಣ ಕಾಶಿಯಾಗಿ ಪರಿವರ್ತಿಸಿ ಸವಣೂರಿನ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಗಣರಾಜ್ ಕುಂಬ್ಳೆ ಹೇಳಿದ್ದಾರೆ.ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ನಡೆದ ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲರಾದ ‘ಸಹಕಾರ ರತ್ನ’ ಸವಣೂರು ಸೀತಾರಾಮ ರೈ ಅವರ 79ನೇ ಹುಟ್ಟು ಹಬ್ಬ ಆಚರಣೆ, ಶಾಲಾ ಪ್ರಾರಂಭೋತ್ಸವ ಹಾಗೂ ಅಬಾಕಸ್ ತರಗತಿ ಉದ್ಘಾಟನೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭ ಉದ್ಘಾಟಿಸಿದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಮಾತನಾಡಿ, ವಿದ್ಯಾರ್ಥಿಗಳು ಅತ್ಯುತ್ತಮ ಕಲಿಕೆಗೆ ಗಮನ ನೀಡಬೇಕು, ಉತ್ತಮ ಗುರಿಯೊಂದಿಗೆ ಕಲಿಕೆ ಪಡೆದಾಗ ಮಾತ್ರ ಸಮಾಜದಲ್ಲಿ ಗೌರವ ಪ್ರಾಪ್ತವಾಗುತ್ತದೆ. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಎಲ್ಲಾ ರೀತಿಯಿಂದಲೂ ಉತ್ತಮ ಶಿಕ್ಷಣ, ಸಂಸ್ಕಾರವನ್ನು ನೀಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಸಾಧನೆಯನ್ನು ಮಾಡಬೇಕು, ತಮ್ಮ ಸಾಧನೆಗೆ ಬೆಂಬಲ ನೀಡುವವರನ್ನು ವಿದ್ಯಾರ್ಥಿಗಳು ಸ್ನೇಹಿತರಾಗಿ ಮಾಡಿಕೊಳ್ಳಬೇಕು ಎಂದರು.ಐಆರ್ಸಿಎಂಡಿ ಎಜ್ಯುಕೇಶನ್ ಸೆಂಟರ್ನ ಸಿ.ಇ.ಓ.ಪ್ರಪುಲ್ಲಾ ಗಣೇಶ್, ಸವಣೂರು ವಿದ್ಯಾರಶ್ಮಿ ಸಂಸ್ಥೆಯ ಟ್ರಸ್ಟಿ ಮಹೇಶ್ ರೈ ಸವಣೂರು, ಉದ್ಯಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ ಸಂತನುಕೃಷ್ಣ ಸ್ವಾಗತಿಸಿದರು. ಆಯಿಷತ್ ಹನಾ ನಿರೂಪಿಸಿದರು. ಕೃಪಾಲಿ ವಂದಿಸಿದರು.
ಇಂಗ್ಲೀಷ್ ಇಂಟರ್ನ್ಯಾಷನಲ್ ಒಲಂಪಿಯಾಡ್ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ, ಗೌರವಿಸಲಾಯಿತು. ಸವಣೂರು ಜಿನ ಬಸದಿ ಬಳಿಯಿಂದ ವಿದ್ಯಾರಶ್ಮಿ ವಿದ್ಯಾಲಯದ ತನಕ ಮೆರಣಿಗೆಯನ್ನು ಆಯೋಜಿಸಲಾಗಿತ್ತು. ಸವಣೂರು ಬಸದಿಯ ಅರ್ಚಕ ಶ್ರೇಯಾಂಸ ಕುಮಾರ್ ಇಂದ್ರ ತೆಂಗಿನಕಾಯಿ ಒಡೆಯುವ ಮೂಲಕ ಶುಭಹಾರೈಸಿದರು. ಸಹಕಾರರತ್ನ ಸೀತಾರಾಮ ರೈ ಅವರು ಮೆರಣಿಗೆಗೆ ಚಾಲನೆ ನೀಡಿದರು.