ಗದಗ: ನಗರದ ವೀರನಾರಾಯಣ ದೇವಸ್ಥಾನದ ಹತ್ತಿರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಜಿಲ್ಲಾಧಿಕಾರಿ ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ರವಿ ಗುಂಜೀಕರ ಅವರ ನಿವೃತ್ತಿ ಅಂಗವಾಗಿ, ಅವರು ಪ್ರಾಥಮಿಕ ಶಿಕ್ಷಣ ಪೂರೈಸಿದ ಸರ್ಕಾರಿ ಹಿರಿಯ ಕನ್ನಡ ಗಂಡುಮಕ್ಕಳ ಶಾಲೆ ನಂ. 2ರ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು.
ಹಿರಿಯರಾದ ಜಿ.ಎಸ್. ಹಿರೇಮಠ ಮಾತನಾಡಿ, ಇಲ್ಲಿ ಹೆಣ್ಣಮಕ್ಕಳ ಹಾಗೂ ಗಂಡುಮಕ್ಕಳ ಶಾಲೆಗಳು ಪ್ರತ್ಯೇಕವಾಗಿ ನಡೆಯುತ್ತಿದ್ದು, ಎರಡೂ ಬಡಮಕ್ಕಳ ಶಾಲೆಗಳಾಗಿವೆ. ರವಿ ಗುಂಜೀಕರ ಅವರು ಎರಡೂ ಶಾಲೆಗಳ ಅಭಿವೃದ್ಧಿಗೂ ನೆರವಾಗಬೇಕು ಎಂದು ಮನವಿ ಮಾಡಿದರು.
ಶಾಲಾ ಶಿಕ್ಷಕರ ಸಂಘಟನೆಗಳು ಹಾಗೂ ಗಂಡುಮಕ್ಕಳ ಸರ್ಕಾರಿ ಶಾಲೆ ನಂ. 2ರ ವತಿಯಿಂದ ನಿವೃತ್ತಿಗೊಂಡ ರವಿ ಗುಂಜೀಕರ ಹಾಗೂ ನೂತನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳಾರಿ ಅವರನ್ನು ಸನ್ಮಾನಿಸಲಾಯಿತು.ರವಿ ಗುಂಜೀಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಾಂದಸಾಬ ಕೊಟ್ಟೂರ ಹಾಗೂ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಗರಸಭೆ ಸದಸ್ಯೆ ಶ್ರೀಮತಿ ಮುಲ್ಲಾ, ಅರುಣಕುಮಾರ ಚವ್ಹಾಣ, ವಿ.ಎಂ. ಹಿರೇಮಠ, ಗ್ರಾಮೀಣ ಬಿಇಒ ನಡುವಿನಮನಿ, ಕಾಸಿಮ್ಸಾಬ್ ತಹಶೀಲ್ದಾರ, ಆರ್.ವಿ. ಸಂಕಣ್ಣವರ, ಉಮೇಶ ಹಿರೇಮಠ, ಸುರೇಶ ಕೊಪ್ಪದ, ಶಿವಯೋಗಿ ಬಂಡಿ, ಶಾಲೆಯ ಪ್ರಧಾನ ಶಿಕ್ಷಕಿ ಎಫ್.ಎ. ದಲಬಂಜನ, ಪಿ.ಎ. ಕಣಾಜ, ಐ.ಕೆ. ಕಮ್ಮಾರ ಹಾಗೂ ರವಿ ಗುಂಜೀಕರ ಅಭಿಮಾನಿಗಳು ಹಾಜರಿದ್ದರು.