ಶಾಲಾ ಪ್ರಾರಂಭೋತ್ಸವ ಸಂಭ್ರಮ: ಮತ್ತೆ ಚಿಣ್ಣರ ಚಿಲಿಪಿಲಿ

KannadaprabhaNewsNetwork | Published : May 30, 2025 12:07 AM
ಶಾಲೆ ಮತ್ತೆ ಪ್ರಾರಂಭಗೊಂಡ ಹಿನ್ನೆಲೆ ಮಕ್ಕಳು ಬೇಸಿಗೆ ರಜೆ ಕಳೆದು ಮೊದಲ ದಿನವಾದ ಗುರುವಾರ, ತಮ್ಮ ತಮ್ಮ ಶಾಲೆಗಳತ್ತ ಆಗಮಿಸಿದರು.
Follow Us

ಕನ್ನಡಪ್ರಭ ವಾರ್ತೆ ಹೊಸಪೇಟೆ

ಶಾಲೆ ಮತ್ತೆ ಪ್ರಾರಂಭಗೊಂಡ ಹಿನ್ನೆಲೆ ಮಕ್ಕಳು ಬೇಸಿಗೆ ರಜೆ ಕಳೆದು ಮೊದಲ ದಿನವಾದ ಗುರುವಾರ, ತಮ್ಮ ತಮ್ಮ ಶಾಲೆಗಳತ್ತ ಆಗಮಿಸಿದರು. ಈ ವೇಳೆ ಶಿಕ್ಷಕರು ಹೂ ಗುಚ್ಚ ನೀಡಿ, ಬಿಸ್ಕೇಟ್‌ಗಳನ್ನು ನೀಡಿ ಬರಮಾಡಿಕೊಂಡರು. ಮಕ್ಕಳ ಮೊಗದಲ್ಲೂ ಮಂದಹಾಸ ಮೂಡಿತು.

ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವದ ಸಂಭ್ರಮ ಮನೆ ಮಾಡಿತ್ತು. ಸ್ವತಃ ಶಿಕ್ಷಕರೇ ಮಕ್ಕಳಿಗೆ ಭವ್ಯ ಸ್ವಾಗತ ನೀಡಿದರು. ಇನ್ನೂ ಹಳ್ಳಿ, ತಾಂಡಾಗಳ ಶಾಲೆಗಳಲ್ಲಿ ತೆಂಗಿನ ಗರಿಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಕೆಲ ಕಡೆ ಬಾಳೆ ಕಂಬಗಳಿಂದಲೂ ಅಲಂಕರಿಸಲಾಗಿತ್ತು. ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಸೇರಿ ಮಕ್ಕಳನ್ನು ಬರಮಾಡಿಕೊಂಡರು.

ಪ್ರಭಾತ್‌ ಪೇರಿ:

ಶಾಲಾ ಪ್ರಾರಂಭೋತ್ಸವದ ಹಿನ್ನೆಲೆ ನಗರ, ಪಟ್ಟಣ, ಹಳ್ಳಿ, ತಾಂಡಾಗಳಲ್ಲಿ ಶಿಕ್ಷಕರು, ಮಕ್ಕಳು ಸೇರಿ ಪ್ರಭಾತ್‌ ಪೇರಿ ನಡೆಸಿದರು. ಶಾಲೆ ಪ್ರಾರಂಭವಾಗಿದ್ದು, ಮಕ್ಕಳು ಮನೆಗಳಲ್ಲಿ ಉಳಿದುಕೊಳ್ಳದೇ ಶಾಲೆಗಳಿಗೆ ಆಗಮಿಸಬೇಕು ಎಂದು ಶಿಕ್ಷಕರು, ಮಕ್ಕಳು ಕೋರಿದರು. ಪ್ರಭಾತ್ ಪೇರಿಯಲ್ಲಿ ಕೆಲ ಕಡೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಪಂ ಸದಸ್ಯರು ಕೂಡ ಭಾಗವಹಿಸಿದ್ದರು.

ಶೇ.65ರಷ್ಟು ಹಾಜರಾತಿ:

ವಿಜಯನಗರ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮೊದಲ ದಿನ ಶೇ.65 ಹಾಜರಾತಿ ದಾಖಲಾಗಿತ್ತು. ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಆಗಮಿಸಲಿ ಎಂದು ಪ್ರಭಾತ್‌ ಪೇರಿ ನಡೆಸಲಾಯಿತು. ಆದರೆ, ಬೇರೆ ಊರುಗಳಿಗೆ ಮಕ್ಕಳು ತೆರಳಿದ್ದರಿಂದ ಹಾಜರಾತಿ ಹೆಚ್ಚಳ ಮಾಡುವುದು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ ವಿಜಯನಗರ ಡಿಡಿಪಿಐ ವೆಂಕಟೇಶ ರಾಮಚಂದಪ್ಪ.

ಶಾಲೆಗಳು ಪ್ರಾರಂಭಗೊಂಡ ಹಿನ್ನೆಲೆ ಈಗ ಶಾಲಾ ಆವರಣಗಳಲ್ಲಿ ಮಕ್ಕಳ ಕಲರವ ಕೂಡ ಕಂಡು ಬಂದಿತು. ಮಳೆಗಾಲ ಆರಂಭಗೊಂಡಿರುವ ಹಿನ್ನೆಲೆ ಶಿಥಿಲ ಕಟ್ಟಡ ಹಾಗು ಸೋರುತ್ತಿರುವ ಕೊಠಡಿ ಗುರುತಿಸಿ ಮುನ್ನೆಚ್ಚರಿಕಾ ಕ್ರಮವಹಿಸಲು ಕೂಡ ಈಗಾಗಲೇ ಜಿಲ್ಲಾಡಳಿತ ಕೂಡ ಸೂಚನೆ ನೀಡಿದೆ. ಹಾಗಾಗಿ ಆಯಾ ಶಾಲಾ ಶಿಕ್ಷಕರು ಎಚ್ಚರ ವಹಿಸಬೇಕು ಎಂದು ಆಯಾ ಎಸ್‌ಡಿಎಂಸಿಗಳು ಕೂಡ ಸಭೆಗಳಲ್ಲಿ ಚರ್ಚಿಸಿವೆ. ಈಗಾಗಲೇ ಸೋರುತ್ತಿರುವ ಕೊಠಡಿಗಳ ದುರಸ್ತಿಗಾಗಿ ಆಯಾ ಬಿಇಒ ಕಚೇರಿಗಳಿಗೂ ಮುಖ್ಯ ಶಿಕ್ಷಕರು ಕೂಡ ಪ್ರಸ್ತಾವನೆ ಸಲ್ಲಿಸಿದ್ದಾರೆ. ಶಾಲೆಗಳಲ್ಲಿ ಸೋರುತ್ತಿರುವ ಕೊಠಡಿಗಳ ಸಮಸ್ಯೆಗಳಿಗೂ ಬೇಗ ಪರಿಹಾರ ದೊರೆಯಲಿ ಎಂಬುದು ಪಾಲಕರ ಆಗ್ರಹವಾಗಿದೆ.