ಗ್ರಾಮಗಳಿಗೆ ದೇವಸ್ಥಾನದಂತೆ ಶಾಲೆಗಳು ಮುಖ್ಯ

KannadaprabhaNewsNetwork |  
Published : Jul 13, 2025, 01:19 AM IST
೧೨ಶಿರಾ೧: ಶಿರಾ ನತಾಲೂಕಿನ ತಾವರೆಕೆರೆ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ನೂತನ ಹೈಟೆಕ್ ಕೊಠಡಿಗಳ ನಿರ್ಮಾಣಕ್ಕೆ ಸಂಸದ ಗೋವಿಂದ ಕಾರಜೋಳ ಹಾಗೂ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಒಂದು ಊರಿಗೆ ದೇವಸ್ಥಾನ ಎಷ್ಟು ಮುಖ್ಯವೋ, ಶಾಲೆಯೂ ಅಷ್ಟೇ ಮುಖ್ಯ. ಕಳೆದ ನಾಲ್ಕೂವರೆ ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ಇದುವರೆಗೂ ೫ ಸರ್ಕಾರಿ ಶಾಲೆಗಳನ್ನು ಎಲ್ಲಾ ಮೂಲಭೂತ ಸೌಕರ್ಯದೊಂದಿಗೆ ಹೈಟೆಕ್ ಮಾದರಿಯಲ್ಲಿ ನಿರ್ಮಿಸುವ ಪ್ರಯತ್ನ ಮಾಡಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಒಂದು ಊರಿಗೆ ದೇವಸ್ಥಾನ ಎಷ್ಟು ಮುಖ್ಯವೋ, ಶಾಲೆಯೂ ಅಷ್ಟೇ ಮುಖ್ಯ. ಕಳೆದ ನಾಲ್ಕೂವರೆ ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ಇದುವರೆಗೂ ೫ ಸರ್ಕಾರಿ ಶಾಲೆಗಳನ್ನು ಎಲ್ಲಾ ಮೂಲಭೂತ ಸೌಕರ್ಯದೊಂದಿಗೆ ಹೈಟೆಕ್ ಮಾದರಿಯಲ್ಲಿ ನಿರ್ಮಿಸುವ ಪ್ರಯತ್ನ ಮಾಡಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು. ಅವರು ಶನಿವಾರ ತಾಲೂಕಿನ ಗೌಡಗೆರೆ ಹೋಬಳಿಯ ತಾವರೆಕೆರೆ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯನ್ನು ೧ ಕೋಟಿ ವೆಚ್ಚದಲ್ಲಿ ನೂತನ ಹೈಟೆಕ್ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಮ್ಮ ಸರ್ಕಾರಿ ಶಾಲೆಗಳನ್ನು ನಾವು ದೇವಸ್ಥಾನಕ್ಕಿಂತ ಪ್ರಾಮುಖ್ಯತೆ ಕೊಟ್ಟು ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಒಂದು ಗ್ರಾಮ ಪಂಚಾಯಿತಿಗೆ ಒಂದರಂತೆ ಸರ್ಕಾರಿ ಶಾಲೆಯನ್ನು ಹೈಟೆಕ್ ಮಾದರಿಯಲ್ಲಿ ರೂಪಿಸುವುದೇ ನನ್ನ ಗುರಿಯಾಗಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ ಬಂದು ೭೫ ವರ್ಷಗಳಾದರೂ ಉತ್ತಮ ಶಾಲೆ ಕೊಠಡಿಗಳಿಲ್ಲ. ನಾವು ಕೇವಲ ಕೊಠಡಿ ಕಟ್ಟಿದರೆ ಸಾಲದು ಎಲ್ಲ ಸೌಲಭ್ಯ ಇರುವ ಶಾಲೆಯನ್ನು ನಿರ್ಮಿಸಬೇಕು ಎಂದರು. ಸಂಸದರಾದ ಗೋವಿಂದ ಎಂ.ಕಾರಜೋಳ ಅವರು ಮಾತನಾಡಿ, ಬಡವರ ಮಕ್ಕಳು ಓದುವ ಸರಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಬೇಕು. ಸುಂದರವಾದ ಕಟ್ಟಡವಿರಬೇಕು. ವಿದ್ಯಾದಾನ ಶ್ರೇಷ್ಠದಾನ ಎಂಬುದನ್ನು ಮನಗಂಡು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ೫ ಹೋಬಳಿಗಳಲ್ಲಿ ೫ ಸರಕಾರಿ ಶಾಲೆಗಳನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಿರುವುದು ಶ್ಲಾಘನೀಯ. ಅವರು ಮಾಡಿರುವ ಕೆಲಸ ರಾಜ್ಯಕ್ಕೆ ಮಾದರಿಯಾಗಿದೆ. ನನ್ನ ೩೦ ವರ್ಷದ ಅನುಭನದಲ್ಲಿ ಸರಕಾರದ ಅನುದಾನಕ್ಕೆ ಜೊತೆಗೆ ತಮ್ಮ ಸ್ವಂತ ಹಣವನ್ನು ಹಾಕಿ ಅಭಿವೃದ್ಧಿ ಮಾಡುತ್ತಿರುವುದು ಇವರೊಬ್ಬರೇ. ಇದೇ ರೀತಿ ರಾಜ್ಯದ ಎಲ್ಲಾ ಜನಪ್ರತಿನಿಧಿಗಳು ಸರಕಾರಿ ಶಾಲೆಗಳಿಗೆ ಕೈಜೋಡಿಸಬೇಕಿದೆ ಎಂದರು.

ಮುಖಂಡ ಚಂಗಾವರ ಮಾರಣ್ಣ ಅವರು ಮಾತನಾಡಿ, ಖಾಸಗಿ ಕಟ್ಟಿ ಬೆಳೆಸಿ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಂತೆ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಶಾಲೆಗಳನ್ನು ನಿರ್ಮಿಸುತ್ತಿದ್ದಾರೆ. ಪ್ರತಿ ಪಂಚಾಯಿತಿಯಲ್ಲಿ ಹೈಟೆಕ್ ಶಾಲೆ ತೆರೆಯುತ್ತಾರೆ. ಇದೇ ರೀತಿ ರಾಜ್ಯದಲ್ಲಿ ಎಲ್ಲರೂ ಶಾಲೆ ಅಭಿವೃದ್ಧಿಯಾದರೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಹುದು. ಚಿದಾನಂದ ಗೌಡ ಅವರು ಶಿಕ್ಷಣ ಮಂತ್ರಿಗಳಾಗಬೇಕು ಎಂದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಸತ್ಯಭಾಮ, ಉಪಾಧ್ಯಕ್ಷ ರಾಮಕೃಷ್ಣಪ್ಪ, ಪಿಡಿಒಓ ನಾಗರಾಜ್, ಬಿಇಒ ಕೃಷ್ಣಪ್ಪ, ಶ್ರೀನಿವಾಸ್, ಗ್ರಾಪಂ ಸದಸ್ಯರುಗಳಾದ ಸ್ನೇಹಪ್ರಿಯ ಶಿವು, ಎಸ್ ಡಿಎಂಸಿ ಅಧ್ಯಕ್ಷ ಶರಾವತಿ, ಮುಖ್ಯೋಪಾಧ್ಯಾಯ ವಿನೋದ ಸತ್ಯನಾರಾಯಣ, ಹನುಮಂತರಾಜು, ನಾಗಭೂಷಣ್, ಈರಣ್ಣ ಪಟೇಲ್, ಗಿರಿಧರ್, ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಶಿವಕುಮಾರ್, ನಟರಾಜ್ ಸಂತೆಪೇಟೆ, ಗೌಡಪ್ಪ, ನೇರಲಗುಡ್ಡ ಶಿವಕುಮಾರ್, ಗೋಪಿಕುಂಟೆ ಕುಮಾರ ಮಾಸ್ಟರ್ ಸೇರಿದಂತೆ ಹಲವರು ಹಾಜರಿದ್ದರು. ಕೋಟ್‌...

ನಾನು ಇತ್ತೀಚೆಗೆ ಅಮೇರಿಕಾಕ್ಕೆ ಭೇಟಿ ನೀಡಿದ್ದೆ. ಅಮೆರಿಕದಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿಗೆ ಡಿಮ್ಯಾಂಡ್ ಇದೆ. ಅಲ್ಲಿ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ಇದೆ. ಅದೇ ರೀತಿ ನಮ್ಮಲ್ಲೂ ಸರಕಾರಿ ಶಾಲೆಗಳಿಗೆ ಡಿಮ್ಯಾಂಡ್ ಬರಬೇಕು. ನಾವು ಕತ್ತಲೆಯಲ್ಲಿ ಇರುವವರನ್ನು ಬೆಳಕಿಗೆ ತರಬೇಕಿದೆ. ಉಚಿತ ಯೋಜನೆಗಳನ್ನು ಕೊಟ್ಟು ಜನರನ್ನು ದಾರಿ ತಪ್ಪಿಸಬಾರದು. - ಚಿದಾನಂದಗೌಡ, ವಿಧಾನ ಪರಿಷತ್‌ ಸದಸ್ಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!
ರಾಜ್ಯದ 15 ಜಿಲ್ಲೆಗಳಲ್ಲಿ ಅಕಾಲಿಕ ಮಳೆ : ಮಾರ್ಚ್ 25 ರವರೆಗೆ ಅಬ್ಬರಿಸಲಿದೆ