ಇಂದಿನಿಂದ ಶಾಲೆಗಳು ಶುರು, ಸಿದ್ಧತೆ ಪೂರ್ಣ

KannadaprabhaNewsNetwork |  
Published : Jun 01, 2026, 02:00 AM IST
ಗದಗ ನಗರದ ವಿದ್ಯಾದಾನ ಸಮಿತಿ ಶಿಕ್ಷಣ ಸಂಸ್ಥೆಯ ಮೇಲ್ಛಾವಣಿಗೆ ಹಾರಿ ಹೋಗಿರುವುದು.  | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಶಿಕ್ಷಕರು ಅಂಗನವಾಡಿಗಳಿಂದ ಮಕ್ಕಳಪಟ್ಟಿ ಪಡೆದು ಮನೆ, ಮನೆ ಭೇಟಿ ಅಭಿಯಾನ ನಡೆಸುತ್ತಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ಜೂ. 1ರಿಂದ ಶಾಲಾ ಶಿಕ್ಷಣ ಇಲಾಖೆಯು ಹೊಸ ಶೈಕ್ಷಣಿಕ ವರ್ಷವನ್ನು ಅಧಿಕೃತವಾಗಿ ಆರಂಭಿಸುತ್ತಿದೆ. ಈ ಬಾರಿ ಉತ್ತಮ ಕಲಿಕೆ, ಉಜ್ವಲ ಭವಿಷ್ಯ ಎಂಬ ವಿದ್ಯಾರ್ಥಿ ಕೇಂದ್ರಿತ ಧ್ಯೇಯವಾಕ್ಯದೊಂದಿಗೆ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಲ್ಲಿ ವಿಭಿನ್ನವಾಗಿ ಶಾಲಾ ಪ್ರಾರಂಭೋತ್ಸವ ಆಚರಿಸಲಾಗುತ್ತಿದ್ದು, ಜಿಲ್ಲಾದ್ಯಂತ ಶಾಲೆಗಳಿಗೆ ಮಕ್ಕಳ ಸ್ವಾಗತಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.

ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 1123 ಶಾಲೆಗಳಿದ್ದು, ಅವುಗಳಲ್ಲಿ 701 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಗಳಿವೆ. ಇನ್ನುಳಿದವುಗಳಲ್ಲಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿವೆ. ಪ್ರತಿಯೊಂದು ಶಾಲೆಗಳಲ್ಲಿ ಈಗಾಗಲೇ ಕಳೆದ ನಾಲ್ಕೈದು ದಿನಗಳಿಂದಲೇ ಕೊಠಡಿಗಳ ಸ್ವಚ್ಛತೆ ಮತ್ತು ಮೊದಲ ದಿನವೇ ಶಾಲೆಗೆ ಆಗಮಿಸುವ ಮಕ್ಕಳಿಗೆ ವಿಶೇಷ ಸ್ವಾಗತ ಕೋರಲು ಇಲಾಖೆ ಮತ್ತು ಆಯಾ ಶಾಲಾ ಮುಖ್ಯೋಪಾಧ್ಯಾಯರು ವಿಶೇಷ ಕಾಳಜಿ ವಹಿಸಿ ಕಾರ್ಯಕ್ರಮ ರೂಪಿಸಿದ್ದಾರೆ.

ದಾಖಲಾತಿ ಅಭಿಯಾನ: ​ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಶಿಕ್ಷಕರು ಅಂಗನವಾಡಿಗಳಿಂದ ಮಕ್ಕಳಪಟ್ಟಿ ಪಡೆದು ಮನೆ, ಮನೆ ಭೇಟಿ ಅಭಿಯಾನ ನಡೆಸುತ್ತಿದ್ದಾರೆ. ಹೊಸದಾಗಿ ಪ್ರವೇಶ ಪಡೆಯುವ ಮಕ್ಕಳಿಗೆ ಎಸ್‌ಡಿಎಂಸಿ ಹಾಗೂ ದಾನಿಗಳ ನೆರವಿನಿಂದ ₹1000 ಠೇವಣಿ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಉಚಿತ ಶಾಲಾ ಬ್ಯಾಗ್, ಹೆಚ್ಚುವರಿ ಸಮವಸ್ತ್ರ, ನೋಟ್‌ಬುಕ್ ಹಾಗೂ ಪೆನ್ಸಿಲ್ ಒಳಗೊಂಡ ಕಿಟ್‌ಗಳನ್ನು ಮೊದಲ ದಿನವೇ ವಿತರಿಸಿ, ಮಕ್ಕಳ ಸ್ವಾಗತಕ್ಕೆ ಈ ಬಾರಿ ವಿನೂತನ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೇಲ್ವಿಚಾರಣೆ: ​ಶಾಲಾ ತಯಾರಿ, ಸೇತುಬಂಧ ಅನುಷ್ಠಾನ, ಶಾಲಾ ಪಂಚಾಂಗ ಹಾಗೂ ಸುರಕ್ಷತೆಯನ್ನು ಪರಿಶೀಲಿಸಲು ಜಿಲ್ಲಾ ಹಂತದಲ್ಲಿ ಆರು ಮಿಂಚಿನ ಸಂಚಾರ ತಂಡಗಳು ಕಾರ್ಯ ನಿರ್ವಹಿಸಿದ್ದು, ಈ ತಂಡಗಳು ಪ್ರತಿದಿನ ತಾಲೂಕುವಾರು ನಿಗದಿಪಡಿಸಿದ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಪಾಲಕರನ್ನು ಕೂಡಾ ಶಾಲೆಗೆ ಕರೆಸಿ ಅವರಿಂದಲೂ ತಯಾರಿಯ ಪರಿಶೀಲನೆ ನಡೆಸಲಾಗಿದೆ.ಕೊಠಡಿಗೆ ಹಾನಿ

ಜಿಲ್ಲಾದ್ಯಂತ ಇತ್ತೀಚೆಗೆ ಸುರಿದ ಮುಂಗಾರು ಪೂರ್ವ ಭಾರೀ ಮತ್ತು ಬಿರುಗಾಳಿಗೆ 10 ಶಾಲೆಗಳು ಹಾನಿಗೊಳಗಾಗಿವೆ. ಗದಗದಲ್ಲಿ 4 ಹಾಗೂ ರೋಣದಲ್ಲಿ 6 ಶಾಲೆಗಳಿಗೆ ಹಾನಿಯಾಗಿದ್ದು, ಅವುಗಳ ದುರಸ್ತಿಗೆ ಇಲಾಖೆ ವಿಶೇಷ ಕ್ರಮ ತೆಗೆದುಕೊಳ್ಳಬೇಕಿದೆ. ಸದ್ಯಕ್ಕೆ ಅಕ್ಕಪಕ್ಕದ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಇದೆ. ಆದರೆ ಕೂಡಲೇ ಅವುಗಳ ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ.

ಉಜ್ವಲ ಭಾರತ: ​ರಾಜ್ಯ ಡಿಎಸ್‌ಇಆರ್‌ಟಿ ಸಂಸ್ಥೆಯು ನೀಡಿದ ಸಾಮರ್ಥ್ಯ ಆಧರಿತ ಕಲಿಕಾ ಫಲಗಳ ಪಟ್ಟಿಯಂತೆ ವರ್ಷದ ಮೊದಲ ದಿನದಿಂದಲೇ ಬೋಧನೆ ಆರಂಭಿಸಲು ಸೂಚಿಸಲಾಗಿದೆ. ಪಾರದರ್ಶಕತೆಗಾಗಿ ಶಿಕ್ಷಕರು ಕರ್ತವ್ಯ ಆ್ಯಪ್ ಮೂಲಕ ಆನ್‌ಲೈನ್ ಲೋಕೇಶನ್ ಹಾಗೂ ಮುಖಚರ್ಯೆ ಆಧರಿತ ಹಾಜರಾತಿ ನಮೂದಿಸುವುದು ಕಡ್ಡಾಯವಾಗಿದೆ. ಇಲಾಖೆಯು ನನ್ನ ಶಾಲೆ ನನ್ನ ಜವಾಬ್ದಾರಿ ಕಾರ್ಯಕ್ರಮದ ಮೂಲಕ ಹಳೆಯ ವಿದ್ಯಾರ್ಥಿಗಳು ಮತ್ತು ಸಮುದಾಯ ಶಾಲಾ ಅಭಿವೃದ್ಧಿಗೆ ಕೈಜೋಡಿಸಲು ವಿನಂತಿಸಲಾಗಿದೆ. ಇಂದಿನ ಉತ್ತಮ ಕಲಿಕೆ, ನಾಳೆಯ ಉಜ್ವಲ ಭಾರತ ನಿರ್ಮಾಣದ ಅಡಿಪಾಯವಾಗಿದೆ ಎಂದು ಡಿಡಿಪಿಐ ಆರ್.ಎಸ್. ಬುರುಡಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವಣ್ಣನ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಷಡ್ಯಂತ್ರ
ಭಾರತ ಏಕತೆ, ಶಾಂತಿಯ ಸುಂದರ ತೋಟ: ಡಾ. ಅನ್ನದಾನೀಶ್ವರ ಶ್ರೀ