ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರವಿಜ್ಞಾನ, ವೈಚಾರಿಕತೆ ಎಂದರೆ ದೇವರ ವಿರುದ್ಧ ಅಲ್ಲ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ತಿಳಿಸಿದರು.
ಶನಿವಾರ ಪಟ್ಟಣದ ಡಿಸಿಎಂಸಿ ಶಾಲೆ ಆವರಣದಲ್ಲಿ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘ ಬೆಳ್ಳಿ ಹಬ್ಬದ ಪ್ರಯುಕ್ತ ಆಯೋಜನೆ ಮಾಡಿದ್ದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಪವಾಡಗಳ ರಹಸ್ಯ ಬಯಲು ಮಾಡಿ ಮಾತನಾಡಿದರು. ನಾವು ಕಂಡು ಹಿಡಿದ ಹೊಸ ಹೊಸ ತಂತ್ರಜ್ಞಾನಗಳು ಪ್ರತಿ ನಿತ್ಯ ಅಪ್ ಡೇಟ್ ಆಗುತ್ತಿವೆ. ಆದರೆ, ನಮ್ಮ ಮನಸ್ಸು ಮಾತ್ರ ಅಪ್ ಡೇಟ್ ಆಗುತ್ತಿಲ್ಲ. ಎಲ್ಲಾ ಕಡೆ ಮೌಢ್ಯದ ಡಂಗಲ್ ಕಾಣುತ್ತಿದ್ದೇವೆ. ದೇವರ ಬಗ್ಗೆ ನಂಬಿಕೆ ಇರಲಿ. ಆದರೆ, ಮೂಢನಂಬಿಕೆಗಳು ಬೇಡ. ಇನ್ನೊಬ್ಬರಿಗೆ ನೋವಾಗದಂತೆ ಮಾನವೀಯತೆಯಿಂದ ಬದುಕುವುದನ್ನು ಕಲಿಯೋಣ ಎಂದರು.ಮೌಢ್ಯತೆ ಎಂಬುದು ನಿಂತ ನೀರಾದರೆ, ವೈಚಾರಿಕತೆ ಹರಿವ ನೀರಿನಂತೆ. ಮನೆಯ ವಾಸ್ತು ನೋಡುವುದಕ್ಕಿಂತ ಮೊದಲು ಮನಸ್ಸಿನ ವಾಸ್ತುಗಳನ್ನು ಸರಿಪಡಿಸಿಕೊಳ್ಳಿ. ಪಂಚಾಂಗ ನೋಡಿ ಬದುಕುವುದಕ್ಕಿಂತ ನಮ್ಮ ಪಂಚ ಅಂಗಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ. ರಾಜೇಂದ್ರ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಮೂಢ ನಂಬಿಕೆಗಳ ವಿರುದ್ಧ ವಿಚಾರವಾದಿಗಳಾದ ಕೋವೂರ್, ನರಸಿಂಹಯ್ಯ ಹೋರಾಟ ಮಾಡಿದ್ದರು. ಈಗ ಹುಲಿಕಲ್ ನಟರಾಜ್ ಮೂಢ ನಂಬಿಕೆಗಳ ವಿರುದ್ದ ಹೋರಾಟ ಮಾಡುತ್ತ ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಜನರು ಮೌಢ್ಯದಿಂದ ಹೊರ ಬರಬೇಕಾಗಿದೆ. ಮೂಢ ನಂಬಿಕೆಗಳ ವಿರುದ್ಧ ಧ್ವನಿ ಎತ್ತಿದವರನ್ನು ದೇವರ ವಿರೋಧಿ ಎಂದು ಪಟ್ಟ ಭದ್ರಾ ಹಿತಾಸಕ್ತಿಗಳು ಪ್ರಚಾರ ಮಾಡುತ್ತಾರೆ. ಪ್ರತಿಯೊಬ್ಬರು ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಇಂತಹವರು ಜನರ ಮುಗ್ದತೆ ದುರಯೋಗಪಡೆದುಕೊಳ್ಳುತ್ತಿದ್ದಾರೆ. ಮಕ್ಕಳು ಹಾಗೂ ಮಹಿಳೆಯರು ಮಾನಸಿಕವಾಗಿ ಗಟ್ಟಿಯಾಗಬೇಕು ಎಂದು ಕರೆ ನೀಡಿದರು.ಸಭೆ ಅಧ್ಯಕ್ಷತೆ ವಹಿಸಿದ್ದ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲ ಸತೀಶ್ ಮಾತನಾಡಿ, ಹಲವಾರು ಮೂಢ ನಂಬಿಕೆಗಳು ನಮ್ಮ ಸಮಾಜದಲ್ಲಿ ಈಗಲೂ ಇದೆ. ಅನೇಕ ಸಂದರ್ಭದಲ್ಲಿ ನಂಬಿಕೆ ಹೆಸರಿನಲ್ಲಿ ಜನರನ್ನು ಶೋಷಣೆ ಮಾಡಲಾಗುತ್ತಿದೆ. ಹುಲಿಕಲ್ ನಟರಾಜ್ ಪವಾಡ ಬಯಲು ಮಾಡಿ ಮೂಢ ನಂಬಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮೂಢನಂಬಿಕೆಗಳನ್ನು ಕಡಿಮೆ ಮಾಡೋಣ ಎಂದರು.
ಸಭೆಯಲ್ಲಿ ಕರ್ನಾಟಕ ವೈಜ್ಞಾನಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಹೊಸೂರು ಸುರೇಶ್, ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್. ಶಾಂತಕುಮಾರ್, ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ, ಉಪಾಧ್ಯಕ್ಷ ಎಲ್.ಎಂ.ಸತೀಶ್, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಲೇಖಾ ವಸಂತ್, ಖಜಾಂಚಿ ಭಾರತಿ ಚಂದ್ರೇಗೌಡ, ಡಿಸಿಎಂಸಿ ಶಾಲೆ ಪ್ರಾಂಶುಪಾಲರಾದ ಪದ್ಮರಮೇಶ್, ಲೇಖಾ ವಸಂತ್, ಡಾಕಮ್ಮ ಇದ್ದರು.