ಧಾರ್ಮಿಕ ಸಮಾರಂಭ । ಆದಿಲಕ್ಷ್ಮಿ ಅಮ್ಮನ ಜಾತ್ರೆ
ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಆವಿಷ್ಕಾರ ಹಾಗೂ ಬೆಳವಣಿಗೆಗಳು ಮನುಷ್ಯನಿಗೆ ಎಷ್ಟು ಪೂರಕವೋ ಅಷ್ಟೇ ಮಾರಕವಾಗಿ ಪರಿಣಮಿಸುತ್ತಿವೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಸುಕ್ಷೇತ್ರ ಆದಿಹಳ್ಳಿ ಆದಿಲಕ್ಷ್ಮಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ನಡೆದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆಯ ಬೆಳಕು ಮನುಕುಲದ ಬೆಳವಣಿಗೆಗೆ ಎಷ್ಟು ಬೆಳಕು ಚೆಲ್ಲಿದೆಯೋ ಮುಂದಿನ ದಿನಗಳಲ್ಲಿ ಇದೇ ಬೆಳಕು ಮನುಷ್ಯನ ಅವನತಿಗೂ ಕಾರಣವಾಗಬಹುದು ಎಂಬುದನ್ನು ಮನುಷ್ಯ ಅರಿತು ನಡೆಯಬೇಕಿದೆ ಎಂದು ಎಚ್ಚರಿಸಿದರು.ವಿಜ್ಞಾನದ ಬೆಳಕಿನಿಂದ ಮನದ ಅಜ್ಞಾನವನ್ನು ತೊಲಗಿಸಲು ಸಾಧ್ಯವಿಲ್ಲ. ಮನದ ಅಜ್ಞಾನ ತೊಲಗಬೇಕಾದರೆ ಸಂಸ್ಕಾರವೆಂಬ ದಿವ್ಯ ಜ್ಯೋತಿ ಮನ ಮನೆಗಳಲ್ಲಿ ಬೆಳಗಬೇಕು. ಆ ರೀತಿಯ ಜ್ಯೋತಿ ಬೆಳಗಲು ಈ ರೀತಿಯ ಜಾತ್ರಾ ಮಹೋತ್ಸವಗಳು, ಹಬ್ಬಗಳು ಪ್ರೇರಣೆ ನೀಡುತ್ತವೆ ಎಂದು ಕಿವಿಮಾತು ಹೇಳಿದರು.
ಸ್ವಾಮೀಜಿ ಆಶಯದಂತೆ ಅದಿಹಳ್ಳಿ ಶಾಖಾ ಮಠವನ್ನು ಧಾರ್ಮಿಕ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸಿರುವುದರ ಜತೆಗೆ ಮುಂದಿನ ದಿನಗಳಲ್ಲಿ ಸಮಾಜಮುಖಿಯಾದ ಮತ್ತಷ್ಟು ಸೇವೆಗಳನ್ನು ಇಲ್ಲಿ ಶ್ರೀ ಮಠವು ಕೈಗೊಳ್ಳುವ ಸಂಕಲ್ಪ ಹೊಂದಿದ್ದು ಪ್ರಸ್ತುತ ಜಗದ್ಗುರುಗಳಾದ ಡಾ.ನಿರ್ಮಲಾನಂದನಾಥ ಸ್ವಾಮಿಜಿ ಸಹ ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಹಾದಿಯಲ್ಲಿ ಗ್ರಾಮವು ಧಾರ್ಮಿಕ ಕೇಂದ್ರದ ಜತೆಗೆ ಜನಪರ ಸೇವೆ ಮೂಲಕ ಸೇವ ಕೇಂದ್ರವಾಗಿ ಮಾರ್ಪಡುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಮಲ್ಲೇಶ್ ಗೌಡ, ಆದಿಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ, ದಯಾನಂದ ಸ್ವಾಮೀಜಿ, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ಇದ್ದರು.ಅರಸೀಕೆರೆ ತಾಲೂಕಿನ ಆದಿಹಳ್ಳಿ ಆದಿಲಕ್ಷ್ಮಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.