ಕುಕನೂರು: ಮಕ್ಕಳ ಕಲಿಕೆ ಗುಣಮಟ್ಟ ಹೆಚ್ಚಿಸಲು ವಿಜ್ಞಾನ ವಸ್ತು ಪ್ರದರ್ಶನ ಸಹಾಯಕವಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್ ಹೇಳಿದರು.
ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ಮಕ್ಕಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಷಯವಾರು ತಲ್ಲೀನರಾಗಿ ವಿಷಯ ಮಂಡನೆ ಮಾಡಬೇಕು.ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳಲ್ಲಿ ಕಲಿಕೆ ಗುಣಮಟ್ಟ ಹೆಚ್ಚಿಸುತ್ತವೆ ಎಂದರು.
ಮಕ್ಕಳು ಹಗಲಿನಲ್ಲಿ ಯಾರಾದರೂ ನಕ್ಷತ್ರ ಕಂಡಿದ್ದೀರಾ ಎಂದು ಪ್ರಶ್ನಿಸಿದರು.ಅವರ ಪ್ರಶ್ನೆಗೆ ಚಾಕಚಕೀತರಾದ ಮಕ್ಕಳು ಉತ್ತರಿಸದೆ ಮೌನ ವಹಿಸಿದರು. ಸೂರ್ಯನೂ ಕೂಡಾ ಹಗಲಲ್ಲಿ ಕಾಣುವ ನಕ್ಷತ್ರ ಎಂದು ಹೇಳಿದರು.ವಿದ್ಯಾರ್ಥಿಗಳು ವೈಜ್ಞಾನಿಕ ಪರಿಕಲ್ಪನೆ ಪ್ರಾಯೋಗಿಕವಾಗಿ ಅನ್ವೇಷಿಸಲು ಮತ್ತು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ, ಇದು ಸೃಜನಶೀಲತೆ, ಸಮಸ್ಯೆ ಪರಿಹರಿಸುವ ಕೌಶಲ್ಯ ಉತ್ತೇಜಿಸುತ್ತದೆ ಹಾಗೂ ಪಠ್ಯಪುಸ್ತಕಗಳಾಚೆಗೆ ಆಳವಾದ ತಿಳಿವಳಿಕೆ ಬೆಳೆಸಲು ಸಹಾಯ ಮಾಡುತ್ತದೆ, ಇಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಪ್ರಾಜೆಕ್ಟ್ ಮಾಡಿ ವಿಜ್ಞಾನದ ಆಸಕ್ತಿದಾಯಕ ಪ್ರಪಂಚ ಪ್ರದರ್ಶಿಸುತ್ತಾರೆ ಎಂದು ಹೇಳಿದರು.
ಮುನಿರಾಬಾದ್ ಡಯಟ್ ಪ್ರಾಂಶುಪಾಲ ಎಲ್.ಡಿ ಜೋಷಿ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳ ಸೃಜನಶೀಲತೆ ಹೆಚ್ಚುತ್ತದೆ. ಅವರಲ್ಲಿರುವ ನಾವಿನ್ಯತೆ ಪ್ರದರ್ಶನ ರೂಪದಲ್ಲಿ ಪ್ರತಿಭೆಯಾಗಿ ಅರಳುತ್ತದೆ ಎಂದರು.ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಶ್ವಂತರಾಜ್ ಜೈನ ಮಾತನಾಡಿ, ಮಕ್ಕಳು ನಾನಾ ವಿಜ್ಞಾನ ವಸ್ತು ಪ್ರದರ್ಶನಕ್ಕೆ ನೀಡಿದ್ದಾರೆ. ಆ ಮಕ್ಕಳ ಕೌಶಲ್ಯ ಹಾಗೂ ಶಿಕ್ಷಕರ ತರಬೇತಿ ನಿಜಕ್ಕೂ ಶ್ಲಾಘನೀಯ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರೇ ಭದ್ರ ಬುನಾದಿ.ಅದಕ್ಕೆ ಪೂರಕವಾದ ಪ್ರೋತ್ಸಾಹ ಪಾಲಕರು ಸಹ ನೀಡಬೇಕಾಗುತ್ತದೆ.ವಿಜ್ಞಾನವಸ್ತು ಪ್ರದರ್ಶನ ಮಕ್ಕಳ ಮನಸ್ಸಿನಲ್ಲಿ ಹೊಸತನ ನೀಡುತ್ತದೆ. ಇನ್ನೂ ಹೆಚ್ಚು ಹೆಚ್ಚಿಗೆ ವಿಷಯಗಳ ಮೇಲೆ ಪ್ರದರ್ಶನ ಆಗಬೇಕು. ಸಾರ್ವಜನಿಕ ವಲಯದಲ್ಲಿ ಸಹ ವಿಜ್ಞಾನದ ಬಗ್ಗೆ ಕೌತುಕ ವಸ್ತು ಪ್ರದರ್ಶನದಿಂದ ಮೂಡಬೇಕು ಎಂದರು.
ಮುಖ್ಯ ಶಿಕ್ಷಕ ರಾಜಶೇಖರ ಹೊಸ್ಮನಿ, ಹೇಮಣ್ಣ ಕವಲೂರ, ಬಸವರಾಜ ಮೇಟಿ, ಜಗದೀಶ ಬಳಿಗಾರ, ಸುರೇಶ ಮಾದಿನೂರ, ಶರಣಪ್ಪ ಅರಕೇರಿ, ಶರಣಪ್ಪ ಮುತ್ತಾಳ, ದೊಡ್ಡಪ್ಪ ಭಾವಿಕಟ್ಟಿ, ನವೀನ್ ನವಲೆ, ರವಿ ನಾಲ್ವಾಡ, ಬಿ.ಎಂ. ಸವದತ್ತಿ, ರೇವಣಪ್ಪ ಅಬ್ಬಿಗೇರಿ, ರಾಜಣ್ಣ ಬಳ್ಳಿ, ಬಸವರಾಜ ಮೇಟಿ, ಮಲ್ಲಿಕಾರ್ಜುನ, ವೇಂಕಟೇಶಗೌಡ್ರ, ವೀರಯ್ಯ ಉಳ್ಳಾಗಡ್ಡಿ, ಅನ್ವರ್ ಪಾಷಾ, ಪ್ರಭು ಬುಕ್ಕಟಗಾರ, ಪವನ್ ಕುಲಕರ್ಣಿ, ಡಯಟ್ ಅಧಿಕಾರಿಗಳು, ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕಿಯರು, ಪಾಲಕರು, ವಿದ್ಯಾರ್ಥಿಗಳಿದ್ದರು.