ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ನಡೆದ ವಿಜ್ಞಾನ ಆಶುಭಾಷಣ ಸ್ಪರ್ಧೆ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ
ವಿಜ್ಞಾನವು ಇಂದಿನ ಎಲ್ಲಾ ಜೀವಿಗಳಿಗೆ ಅನಿವಾರ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಹೇಳಿದರು.
ತಾಲೂಕಿನ ಕೆರಿಮಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಶಿವನಗೌಡ ಪಾಟೀಲ ಮತ್ತು ಚನ್ನಬಸಮ್ಮ ಪಾಟೀಲ ಸ್ಮರಣಾರ್ಥ ದತ್ತಿ ನಿಧಿ ಯೋಜನೆಯ ಕ್ಲಸ್ಟರ್ ಮಟ್ಟದ 7ನೇ ತರಗತಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿಜ್ಞಾನ ಆಶುಭಾಷಣ ಸ್ಪರ್ಧೆ ಹಾಗೂ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಪ್ರತಿ ಹಂತದಲ್ಲಿಯೂ ವಿಜ್ಞಾನ ಮನುಷ್ಯನಿಗೆ ಅನಿವಾರ್ಯವಾಗಿದೆ. ವಿಜ್ಞಾನವಿಲ್ಲದೆ ಜೀವನ ನಡೆಸುವುದು ಸಹ ಮನುಷ್ಯ ಜೀವಿಗೆ ದುಸ್ತರವಾಗಿದೆ ಎಂದರು.ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಆರ್.ಎಸ್. ಪಾಟೀಲ ಮಾತನಾಡಿ, ಜಾತ್ಯತೀತವಾಗಿರುವ ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಸಹ ವಿಜ್ಞಾನದಲ್ಲಿ ಇಂದು ವಿಶ್ವವೇ ನಿಬ್ಬೆರಗಾಗಿ ನೋಡುವಂತಹ ಸಾಧನೆ ಮಾಡಿದೆ. ಮಕ್ಕಳು ಇಷ್ಟಪಟ್ಟು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಆಶುಭಾಶಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ವಿಜ್ಞಾನ ಬೆಳೆದು ಬಂದ ದಾರಿ ಕುರಿತು ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಲಾಯಿತು.