ದೊಡ್ಡಬಳ್ಳಾಪುರ: ಡಾ.ಅನುಪಮಾ ನಿರಂಜನ ಅವರು ಕನ್ನಡದ ಅತ್ಯಂತ ಜನಪ್ರಿಯ ಲೇಖಕಿ, ಪ್ರಸಿದ್ಧ ವೈದ್ಯೆ ಮತ್ತು ಜನಪರ ಚಿಂತಕರಾಗಿದ್ದರು ಎಂದು ನಿವೃತ್ತ ಉಪನ್ಯಾಸಕಿ ಕೆ.ಎಸ್.ಪ್ರಭಾ ತಿಳಿಸಿದರು.
ವೈಜ್ಞಾನಿಕ ಜ್ಞಾನವನ್ನು ಸರಳ ಕನ್ನಡದಲ್ಲಿ ಜನಸಾಮಾನ್ಯರಿಗೆ ದಾಟಿಸುವ ಮೂಲಕ "ವೈದ್ಯ ಸಾಹಿತ್ಯ " ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದರು. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಬರವಣಿಗೆಯನ್ನು ಅಷ್ಟೇ ಗಂಭೀರವಾಗಿ ತೊಡಗಿಸಿಕೊಂಡರು. ಇವರ ಕಾದಂಬರಿಗಳಲ್ಲಿ ಹೆಣ್ಣಿನ ಸಮಸ್ಯೆಗಳು, ಸಾಮಾಜಿಕ ಆಳ-ಅಗಲಗಳು ಹಾಗೂ ಕೌಟುಂಬಿಕ ಸಂಬಂಧಗಳ ಚಿತ್ರಣ ಹೆಚ್ಚಾಗಿ ಕಂಡುಬರುತ್ತದೆ ಎಂದರು.
ಅನುಪಮ ನಿರಂಜನ ಅವರ ಎಳೆ ಕಾದಂಬರಿ ಕುರಿತು ಮಾತನಾಡಿದ ಲೇಖಕಿ ವಸುಂದರರೆಡ್ಡಿ, "ಎಳೆ'''''''' ಕಾದಂಬರಿ ನೇಕಾರರ ಬದುಕನ್ನು ಕುರಿತ ಕಥಾ ವಸ್ತುವಾಗಿದೆ. ನೇಕಾರರ ಬದುಕು ಮತ್ತು ಸಾಮಾಜಿಕ ವಾಸ್ತವತೆಯನ್ನು ಅತ್ಯಂತ ನೈಜವಾಗಿ ಬಿಂಬಿಸುತ್ತದೆ. ಶಿವನೂರು ಎಂಬ ಪ್ರಾದೇಶಿಕ ಹಿನ್ನೆಲೆಯಲ್ಲಿ ನಡೆಯುವ ಈ ಕಥೆಯಲ್ಲಿ, ಬಂಡವಾಳಶಾಹಿಗಳ ದಬ್ಬಾಳಿಕೆ ಹಾಗೂ ಶೋಷಣೆಯ ವಿರುದ್ಧ ಕಾರ್ಮಿಕರು ಹೇಗೆ ಜಾಗೃತರಾಗುತ್ತಾರೆ. ಶೋಷಣೆಯ ನಡುವೆಯೂ ಹೆಣ್ಣೊಬ್ಬಳ. ಧೈರ್ಯ, ಆತ್ಮವಿಶ್ವಾಸ ಮತ್ತು ಆಕೆಯ ವೈಚಾರಿಕ ಪ್ರಜ್ಞೆಗೆ ಈ ಕಾದಂಬರಿಯಲ್ಲಿ ಧ್ವನಿ ನೀಡಲಾಗಿದೆ. ಕೌಟುಂಬಿಕ ವಿಚಾರಗಳ ಎಳೆಯನ್ನು ಒಳಗೊಂಡಿರುವ ಈ ಕೃತಿ ಮಾನವ ಸಂಬಂಧಗಳ ಏರಿಳಿತಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತದೆ ಎಂದರು.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಸಾಹಿತ್ಯ ಕೃತಿಗಳ ಓದು ಮಾನವನ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಆಗುತ್ತದೆ. ಸೃಜನಶೀಲತೆ ಮತ್ತು ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ. ದೈನಂದಿನ ಒತ್ತಡವನ್ನು ಕಡಿಮೆ ಮಾಡಿ, ಮಾನಸಿಕ ನೆಮ್ಮದಿಯನ್ನು ನೀಡುತ್ತದೆ ಎಂದರು.
18ಕೆಡಿಬಿಪಿ1-