ಹೈನುಗಾರಿಕೆ ನಿರ್ವಹಣೆಗೆ ವೈಜ್ಞಾನಿಕ ಜ್ಞಾನ ಅವಶ್ಯ: ಡಾ.ಬಸವರಾಜ ಅವಟಿ

KannadaprabhaNewsNetwork |  
Published : Oct 09, 2024, 01:36 AM IST
ಚಿತ್ರ 7ಬಿಡಿಆರ್57 | Kannada Prabha

ಸಾರಾಂಶ

ಪಶು ವಿಶ್ವವಿದ್ಯಾಲಯವು ರಾಜ್ಯಾದ್ಯಂತ ತನ್ನ ಸಂಸ್ಥೆಗಳ ಮುಖಾಂತರ ವಿವಿಧ ರೀತಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು, ಅವುಗಳನ್ನು ರೈತರ ಮನೆ ಬಾಗಿಲಿಗೆ ಮುಟ್ಟಿಸಲು ಶ್ರಮವಹಿಸುತ್ತಿದೆ

ಕನ್ನಡಪ್ರಭ ವಾರ್ತೆ ಬೀದರ್

ಪಶು ವಿಶ್ವವಿದ್ಯಾಲಯವು ರಾಜ್ಯಾದ್ಯಂತ ತನ್ನ ಸಂಸ್ಥೆಗಳ ಮುಖಾಂತರ ವಿವಿಧ ರೀತಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು, ಅವುಗಳನ್ನು ರೈತರ ಮನೆ ಬಾಗಿಲಿಗೆ ಮುಟ್ಟಿಸಲು ಶ್ರಮವಹಿಸುತ್ತಿದೆ ಎಂದು ಪಶು ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಬಸವರಾಜ ಅವಟಿ ನುಡಿದರು.

ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‌ನ ಪ್ರಾಣಿ ಆಹಾರ ವಿಜ್ಞಾನ ವಿಭಾಗದಿಂದ ಹೈನು ರಾಸುಗಳ ಉತ್ತಮ ಆರೋಗ್ಯ ಮತ್ತು ಉತ್ಪಾದನೆಗಾಗಿ ವೈಜ್ಞಾನಿಕ ಆಹಾರ ಪದ್ಧತಿಗಳು ಎಂಬ ಶಿರ್ಷಿಕೆಯಲ್ಲಿ ನಡೆದ ಎರಡು ದಿನಗಳ ತರಬೇತಿ ಶಿಬಿರದಲ್ಲಿ ಮಾತನಾಡಿ, ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಹೆಚ್ಚಿನ ಮಟ್ಟದಲ್ಲಿ ವೈಜ್ಞಾನಿಕ ಮಾಹಿತಿ ಪಡೆದರೆ ಉತ್ತಮ ಜೀವನ ನಿರ್ವಹಿಸಲು ಸಾಧ್ಯ ಎಂದು ಹೇಳಿದರು.

ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಅವರು ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ಪದ್ಧತಿಗಳ ಮೂಲಕ ಸಮಗ್ರ ಕೃಷಿ ಮತ್ತು ಸುಸ್ಥಿರ ಹೈನುಗಾರಿಕೆಯಿಂದ ರೈತರು ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದರು. ಪಶುವೈದ್ಯಕೀಯ ಮಹಾವಿದ್ಯಾಲಯದ ಡಿನ್ ಡಾ.ಎಂ.ಕೆ.ತಾಂದಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ರೀತಿ ತರಬೇತಿ ಕಾರ್ಯಕ್ರಮಗಳು ಮಹಾವಿದ್ಯಾಲಯದ ಆವರಣದಲ್ಲಿ ನಡೆಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.

ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಪಿ ಭತಮೂರ್ಗೆ ಚಾಲನೆ ನೀಡಿ, ರೈತರು ತರಬೇತಿ ಪ್ರಯೋಜನ ಪಡೆದು ಹೈನುಗಾರಿಕೆಯಲ್ಲಿ ವೃದ್ಧಿಗೊಳಿಸಿ, ಬೀದರ್‌ನಲ್ಲಿ ಹಾಲಿನ ಕ್ಷೀರ ಕ್ರಾಂತಿಯಾಗಲಿ ಎಂದರು. ತರಬೇತಿಯಲ್ಲಿ ಬೀದರ್‌ ಜಿಲ್ಲೆಯ ಸುಮಾರು 45 ರೈತರು ಭಾಗವಹಿಸಿ, ಹೈನುಗಾರಿಕೆಯಲ್ಲಿನ ಇತ್ತೀಚಿನ ತಂತ್ರಜ್ಞಾನಗಳು, ರಸಮೇವು ತಯಾರಿಕೆ, ಪಶು ಆಹಾರ ತಯಾರಿಕೆ, ಪಶು ಆಹಾರದ ಗುಣಮಟ್ಟ ಪರೀಕ್ಷೆ ಮತ್ತು ಇನ್ನಿತರ ವೈಜ್ಞಾನಿಕ ಮಾಹಿತಿ ಮತ್ತು ಪ್ರಾತ್ಯಕ್ಷಿತೆಯನ್ನು ನುರಿತ ತಜ್ಞರಿಂದ ಪಡೆದುಕೊಂಡರು.

ತರಬೇತಿ ಸಂಯೋಜಕರಾದ ಡಾ.ಗಿರಿಧರ್ ಕೆ.ಎಸ್ ಮತ್ತು ಸಹ ಸಂಯೋಜಕರಾದ ಡಾ.ರವೀಂದ್ರ ಬಿ.ಡಿ, ಡಾ.ಪ್ರಕಾಶ ರಾಥೋಡ್, ಡಾ.ಕೊಟ್ರೇಶ ಪ್ರಸಾದ್‌ ಹಾಗೂ ಇನ್ನಿತರ ಪಶುವೈದ್ಯಕೀಯ ಮಹಾವಿದ್ಯಾಲಯದ ತಜ್ಞರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ