ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಅಗತ್ಯ ಸೌಲಭ್ಯ ಕಲ್ಪಿಸಿ, ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಲು ನೆರವಾಗುವ ದೃಷ್ಠಿಯಲ್ಲಿ ವಿಶೇಷ ಚೇತನರಿಗೆ ಮೂರು ಚಕ್ರದ ಸ್ಕೂಟರ್ ನೀಡಲಾಗುತ್ತಿದ್ದು, ಇದರ ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳುವಂತೆ ಶಾಸಕ ಎ.ಮಂಜು ಸಲಹೆ ನೀಡಿದರು.
ನಾನು ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ತೇಜೂರು ಗೇಟ್ನಿಂದ ಕೆರೆ ಏರಿಯ ಕಾಂಕ್ರಿಟ್ ರಸ್ತೆ ಮಾಡಿಸಿಕೊಟ್ಟಿದ್ದೆ, ಈಗ ತೇಜೂರು ಗ್ರಾಮದಿಂದ ಟಿ.ಮಾಯಗೋಡನಹಳ್ಳಿ ಗೇಟ್ ತನಕ ಕಾಂಕ್ರೀಟ್ ರಸ್ತೆಗೆ ೧.೫ ಕೋಟಿ ರು. ಅನುದಾನ ನೀಡಲಾಗಿದೆ ಎಂದು ತಿಳಿಸಿ, ಈ ಬಗ್ಗೆ ಗ್ರಾಮಸ್ಥರು ನನಗೆ ಕೇಳಿರಲಿಲ್ಲ, ಆದರೆ ಅವರ ಅಗತ್ಯತೆಗೆ ಸ್ಪಂದಿಸಬೇಕಾದ್ದು ನಮ್ಮ ಕರ್ತವ್ಯವೆಂದು ತಿಳಿಸಿ, ಓಟು ನೀಡಿ ಗೆಲ್ಲಿಸಿದ್ದಾರೆ, ಇಷ್ಟು ಮಾಡದಿದ್ದರೆ ಹೇಗೆ ಎಂದು ಹಾಸ್ಯಭರಿತವಾಗಿ ನಗಾಡುತ್ತಾ ತಿಳಿಸಿದರು.
ದೇವಿಪುರ ಗ್ರಾ.ಪಂ. ಸದಸ್ಯೆ ಪವಿತ್ರ ಅವರ ಪತಿ ರಾಮು ಅವರು ದೇವಿಪುರ ಹಾಗೂ ಮಹದೇಶ್ವರ ಕಾಲೋನಿಯನ್ನು ಈ ಸ್ವತ್ತು ಮಾಡಿಸಿಕೊಳ್ಳಲು ಆಗುತ್ತಿಲ್ಲ, ಆದ್ದರಿಂದ ಕಂದಾಯ ಗ್ರಾಮವನ್ನಾಗಿ ಮಾಡಿಸಿ ಕೊಡಿ ಎಂದು ವಿನಂತಿಸಿದರು. ಶಾಸಕ ಎ.ಮಂಜು ಅವರು ತಾತನಹಳ್ಳಿ ಪಿಡಿಒ ಸವಿತಾ ಅವರಿಗೆ ಈ ಬಗ್ಗೆ ಅಗತ್ಯ ಕ್ರಮಕೈಗೊಂಡು, ಮುಂದಿನ ಬೆಳವಣಿಗೆ ಬಗ್ಗೆ ತಿಳಿಸುವಂತೆ ಸಲಹೆ ನೀಡಿದರು. ಟಿ.ಮಾಯಗೋಡನಹಳ್ಳಿ ಗ್ರಾಮಸ್ಥರು ಕೆರೆ ಏರಿಗೆ ತಡೆಗೋಡೆ ಸೇರಿದಂತೆ ಕೆಲವು ಸಮಸ್ಯೆ ಕುರಿತು ವಿನಂತಿಸಿಕೊಂಡರು.ತಾತನಹಳ್ಳಿ ಗ್ರಾ.ಪಂ.ಅಧ್ಯಕ್ಷ ಜಗದೀಶ್, ತಾ.ಪಂ. ಮಾಜಿ ಸದಸ್ಯ ಶಿವಸ್ವಾಮಿ, ತಾ.ಪಂ. ಇಒ ಗಿರೀಶ್, ತಾ.ಪಂ. ತಾಂತ್ರಿಕ ಅಧಿಕಾರಿ ಗೋಪಾಲ್, ಹರೀಶ್, ಪಿಡಿಒ ಸವಿತಾ, ಕಾರ್ಯದರ್ಶಿ ಗೀತಾ, ತೇಜೂರು ಶ್ರೀ ಸಿದ್ಧರಾಮೇಶ್ವರ ಮಠದ ಷಡಾಕ್ಷರಿ ಇತರರು ಇದ್ದರು.