ಎರಡನೆ ಹಂತದ ಬೂದು ನಿರ್ವಹಣೆ ಕಾಮಗಾರಿ ಆರಂಭ

KannadaprabhaNewsNetwork |  
Published : May 18, 2025, 01:33 AM IST
ಹರಪನಹಳ್ಳಿ: ಕಂಚಿಕೆರೆ ಗ್ರಾ.ಪಂಯಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿ ಸರ್ವೇ ಕಾರ್ಯದಲ್ಲಿ ತೊಡಗಿರುವ ನರೇಗಾ ಸಿಬ್ಬಂದಿ. | Kannada Prabha

ಸಾರಾಂಶ

ಗ್ರಾಪಂ ಮಟ್ಟದಲ್ಲಿ ನರೇಗಾ ಯೋಜನೆಯಡಿ ಬೂದು ನೀರು ನಿರ್ವಹಣೆ ಕಾಮಗಾರಿ ಎರಡನೆ ಹಂತದಲ್ಲಿ ಮತ್ತೆ ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಗ್ರಾಪಂ ಮಟ್ಟದಲ್ಲಿ ನರೇಗಾ ಯೋಜನೆಯಡಿ ಬೂದು ನೀರು ನಿರ್ವಹಣೆ ಕಾಮಗಾರಿ ಎರಡನೆ ಹಂತದಲ್ಲಿ ಮತ್ತೆ ಆರಂಭಿಸಲಾಗಿದೆ ಎಂದು ತಾಪಂ ಇಒ ವೈ.ಎಚ್. ಚಂದ್ರಶೇಖರ್ ಹೇಳಿದರು.

ತಾಲೂಕಿನ ಕಂಚಿಕೆರೆ ಗ್ರಾಪಂನಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿ ಕುರಿತು ಸರ್ವೇ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೊದಲ ಹಂತದಲ್ಲಿ ಚಿಗಟೇರಿ ಹಾಗೂ ಹಲುವಾಗಲು ಗ್ರಾಮ ಆಯ್ಕೆ ಮಾಡಲಾಗಿತ್ತು, ಅವು ಈಗ ಪ್ರಗತಿ ಹಂತದಲ್ಲಿವೆ, ಎರಡನೇ ಹಂತದಲ್ಲಿ ಗುಂಡಗತ್ತಿ ಹಾಗೂ ಕಂಚಿಕೆರೆ ಗ್ರಾಮ ಆಯ್ಕೆ ಮಾಡಲಾಗಿದೆ, ಪ್ರಾರಂಭದಲ್ಲಿ ಗ್ರಾಮದ ಮಾಹಿತಿ ಸಂಗ್ರಹಿಸಿ ಡಿಪಿಆರ್ ತಯಾರಿಕೆಗೆ ಮನೆ ಮನೆ ಸರ್ವೇ ನಡೆಸಿ ಗ್ರಾಮದ ಸುತ್ತಲೂ ಚರಂಡಿಗಳಿಂದ ಹರಿಯುವ ಬೂದು ನೀರನ್ನು ಹೊರಗಡೆ ಕಳಹಿಸುವಾಗ ಸ್ವಚ್ಛಗೊಳಿಸಿ ಕೆರೆ,ನದಿ ಸೇರಿದಂತೆ ಇತರೆ ಜಲ ಸಂಗ್ರಹಣಾ ಸ್ಥಳಗಳಿಗೆ ಹರಿಯಲು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಬೂದು ನೀರು ಉತ್ಪಾದನೆಯಾಗುವ ಮನೆಗಳಿಂದ ಜಲಮೂಲ ಸೇರುವವರೆಗೆ ಸಿಸಿ ಚರಂಡಿ, ಸೆಟ್ಲರ್ ಟ್ಯಾಂಕ್, ವೆಟ್ ಲ್ಯಾಂಡ್, ಬಚ್ಚಲು ಗುಂಡಿ, ಸಮುದಾಯ ಇಂಗುಗುಂಡಿ ಸೇರಿದಂತೆ ಇತರೆ ಘಟಕ ನಿರ್ಮಿಸಲಾಗುತ್ತದೆ. ದ್ರವ ತ್ಯಾಜ್ಯ ವೈಜ್ಞಾನಿಕ ಮತ್ತು ತಾಂತ್ರಿಕ ಮಾದರಿಯಲ್ಲಿ ಸಂಸ್ಕರಿಸಲು ಕಾಮಗಾರಿ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಗ್ರಾಮಗಳು ನೈರ್ಮಲ್ಯಗೊಂಡು ರೋಗಗಳು ಸಹ ದೂರವಾಗಲಿವೆ ಎಂದರು.

ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ್ ಯು.ಎಚ್. ಮಾತನಾಡಿ ಬೂದು ನೀರು ನಿರ್ವಹಣೆ ಕಾಮಗಾರಿಯಿಂದ ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ,ಪರಿಸರ ಹಾಗೂ ಉತ್ತಮ ಸಮಾಜ ನಿರ್ಮಾಣಗೊಳ್ಳಲಿದೆ ಎಂದರು.

ಹಿಂದೆ ಜನರು ಬಚ್ಚಲು ನೀರು, ಬಟ್ಟೆ ತೊಳೆದ ನೀರು ಹಾಗೂ ಪಾತ್ರೆ ತೊಳೆದ ನೀರನ್ನು ಚರಂಡಿಗಳಿಗೆ ಬಿಡುತ್ತಿದ್ದರು. ಇದರಿಂದ ಚರಂಡಿಗಳು ತುಂಬಿ ರೋಗಗಳ ತಾಣವಾಗುತ್ತಿತ್ತು. ನಂತರ ಬೂದು ನೀರು ನದಿ ಸೇರಿದಂತೆ ನದಿ ನೀರಿನ ಮಾಲಿನ್ಯಕ್ಕೆ ಕಾರಣವಾಗುತ್ತಿತ್ತು. ಮನರೇಗಾದಡಿಯಲ್ಲಿ ನೈರ್ಮಲ್ಯ ಕಾಪಾಡುವ ಹಾಗೂ ಜನರ ಜೀವನ ಮಟ್ಟ ಸುಧಾರಿಸುವ ಉದ್ದೇಶದಿಂದ ಪ್ರತಿ ಗ್ರಾಪಂಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಬೂದು ನೀರು ಎಲ್ಲೆಂದರಲ್ಲಿ ನಿಂತು ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆದು ನೀರಿನ ವೈಜ್ಞಾನಿಕ ನಿರ್ವಹಣೆ ಮಾಡುವ ಉದ್ದೇಶದಿಂದ ಬೂದು ನೀರು ನಿರ್ವಹಣಾ ಘಟಕ ನಿರ್ಮಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕಂಚಿಕೆರೆ ಗ್ರಾಪಂ ಅಧ್ಯಕ್ಷೆ ನೀಲಮ್ಮ, ದಿಶಾ ಕಮಿಟಿಯ ಸದಸ್ಯ ರೆಡ್ಡಿ ಶಾಂತಕುಮಾರ್, ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಐಇಸಿ ಸಂಯೋಜಕ ಕೆ. ವಸಿಗೇರಪ್ಪ ಚಾಗನೂರು, ಪಿಡಿಒ ದುರುಗಪ್ಪ ಸೇರಿದಂತೆ ತಾಪಂ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು
ಸಮಸ್ಯೆ ಬಗೆ ಹರಿಸದಿದ್ದರೇ ತೀವ್ರ ಹೋರಾಟ