ಮತದಾನದ ಗೌಪ್ಯತೆ, ಇವಿಎಂ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಿ: ಕುಮಾರ್ ರಮಣಿಕಾಂತ್

KannadaprabhaNewsNetwork |  
Published : Mar 23, 2026, 02:00 AM IST
ಕ್ಯಾಪ್ಷನ22ಕೆಡಿವಿಜಿ36 ದಾವಣಗೆರೆಯಲ್ಲಿ ಕೇಂದ್ರ  ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕರಾದ ಕುಮಾರ್ ರಮಣಿಕಾಂತ್  ನೊಡೆಲ್ ಅಧಿಕಾರಿಗಳು, ಎಸ್.ಎಸ್.ಟಿ., ಎಫ್.ಎಸ್.ಟಿ ತಂಡಗಳಿಗೆ ಮಾರ್ಗದರ್ಶನ ನೀಡಿದರು. | Kannada Prabha

ಸಾರಾಂಶ

ಮುಂಬರುವ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಮತದಾನದ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳು ಆಗದಂತೆ ತಾಂತ್ರಿಕ ಮತ್ತು ಆಡಳಿತಾತ್ಮಕ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕ ಕುಮಾರ್ ರಮಣಿಕಾಂತ್ ಸೂಚಿಸಿದ್ದಾರೆ.

- ವಿವಿಪ್ಯಾಟ್ ಯಂತ್ರಗಳ ಮೇಲೆ ಬೆಳಕು ಬೀಳದಿರಲಿ । ಬಿಎಲ್‌ಒಗಳು ಎಲ್ಲ ಸಿದ್ಧತೆ ಪರಿಶೀಲಿಸಬೇಕು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಂಬರುವ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಮತದಾನದ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳು ಆಗದಂತೆ ತಾಂತ್ರಿಕ ಮತ್ತು ಆಡಳಿತಾತ್ಮಕ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕ ಕುಮಾರ್ ರಮಣಿಕಾಂತ್ ಸೂಚಿಸಿದರು.

ಭಾನುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ನೊಡೆಲ್ ಅಧಿಕಾರಿಗಳು, ಎಸ್.ಎಸ್.ಟಿ., ಎಫ್.ಎಸ್.ಟಿ. ತಂಡಗಳಿಗೆ ಮಾರ್ಗದರ್ಶನ ನೀಡಿ ಅವರು ಮಾತನಾಡಿದರು.

ಉಪ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮತದಾನದ ಗೌಪ್ಯತೆಗೆ ಧಕ್ಕೆ ಬರಬಾರದು. ವಿಶೇಷವಾಗಿ ಶಾಲಾ ಕೊಠಡಿಗಳಲ್ಲಿ ಕಿಟಕಿಗಳ ಮೂಲಕ ಹೊರಗಿನವರು ಮತದಾನವನ್ನು ಗಮನಿಸದಂತೆ ಮತಗಟ್ಟೆಗಳನ್ನು ವ್ಯವಸ್ಥಿತವಾಗಿ ನಿರ್ಮಿಸಬೇಕು. ವಿವಿಪ್ಯಾಟ್ ಯಂತ್ರಗಳು ಬೆಳಕಿಗೆ ಹೆಚ್ಚು ಸಂವೇದನಾಶೀಲವಾಗಿರುತ್ತವೆ. ಹೀಗಾಗಿ, ಮಷೀನ್‌ಗಳ ಮೇಲೆ ನೇರವಾಗಿ ತೀವ್ರವಾದ ಬೆಳಕು ಬೀಳದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು.

ಮತದಾನದ ಹಿಂದಿನ ದಿನವೇ ಬಿಎಲ್‌ಒಗಳು ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಬೇಕು. ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಯು ಯಂತ್ರಗಳ ನಿರ್ವಹಣೆ ಬಗ್ಗೆ ಸ್ಪಷ್ಟ ತರಬೇತಿ ಪಡೆದಿರಬೇಕು. ಈಗಾಗಲೇ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ತೃಪ್ತಿ ಇದೆ. ಈ ಸಣ್ಣಪುಟ್ಟ ತಾಂತ್ರಿಕ ಅಂಶಗಳ ಬಗ್ಗೆ ಗಮನಹರಿಸಿದರೆ ಚುನಾವಣೆ ಅತ್ಯಂತ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಈ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರೀಕರೂ ಪತ್ರಕರ್ತನಂತೆ ಗಮನಿಸುತ್ತಿರುತ್ತಾರೆ. ಆದ್ದರಿಂದ ನಿಯೋಜಿತ ಅಧಿಕಾರಿಗಳು ಮತ್ತು ತಂಡಗಳು ಮುಂದಿನ 15 ದಿನಗಳ ಕಾಲ ಅತ್ಯಂತ ಜಾಗರೂಕತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಇದು ಉಪ ಚುನಾವಣೆ ಆಗಿರುವುದರಿಂದ ಇಡೀ ದೇಶ, ರಾಜ್ಯ, ಮಾಧ್ಯಮ ಹಾಗೂ ಸಾರ್ವಜನಿಕರು ದಾವಣಗೆರೆಯ ಚುನಾವಣಾ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹಳೆಯ ಅನುಭವಗಳಿದ್ದರೂ ಈ ಬಾರಿ ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದರು.

ಪ್ರಸ್ತುತ ಪ್ರತಿಯೊಬ್ಬ ಸಾರ್ವಜನಿಕರ ಬಳಿ ಮೊಬೈಲ್ ಇರುವುದರಿಂದ, ತಪಾಸಣೆ ಮತ್ತು ಅಧಿಕಾರಿಗಳ ಚಲನವಲನಗಳನ್ನು ದಾಖಲಿಸಲಾಗುತ್ತದೆ. ಹೀಗಾಗಿ, ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಚುನಾವಣಾ ಕಾರ್ಯದಲ್ಲಿ ಸಮಯದ ಶಿಸ್ತು ಅತ್ಯಂತ ಮುಖ್ಯ. ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಇಡೀ ಪ್ರಕ್ರಿಯೆ ಸುಗಮವಾಗಿ ನಡೆಯಲು ಸಾಧ್ಯ , ಚುನಾವಣಾ ಕಾರ್ಯದಲ್ಲಿ ಯಾವುದೇ ಲೋಪದೋಷ ಆಗದಂತೆ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಜವಾಬ್ದಾರಿಯಿಂದ ವರ್ತಿಸಬೇಕು, ಜಿಲ್ಲಾಡಳಿತ ಚುನಾವಣಾ ಅಧಿಕಾರಿಗಳ ಮತ್ತು ಸಿಬ್ಬಂದಿ ನೆರವಿಗೆ ಸಿದ್ಧವಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ, ಫ್ಲೈಯಿಂಗ್ ಸ್ಕ್ವಾಡ್ **(FST)**, ಜಿಎಸ್‌ಟಿ **(GST)**, ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡ **(SST)** ಹಾಗೂ ವಿಡಿಯೋ ವೀಕ್ಷಣೆ ತಂಡಗಳ **(VVT)** ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್‌.ಟಿ.ಶೇಖರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಿತ್ತೆ ಮಾದವ ವಿಠಲ ರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.

- - -

(ಬಾಕ್ಸ್‌)

* ವಾಹನಗಳ ತಪಾಸಣೆ ನಡೆಸಿ ಸಮಯ ದಾಖಲಿಸಿ: ಡಿಸಿ ಚೆಕ್- ಪೋಸ್ಟ್‌ಗಳಲ್ಲಿ ಸಂಚರಿಸುವ ಪ್ರತಿ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಸಮಯವನ್ನು ದಾಖಲಿಸಬೇಕು. ಇದು ಯಾವುದೇ ಅಕ್ರಮ ನಗದು ಅಥವಾ ಮದ್ಯ ವಶಪಡಿಸಿಕೊಂಡ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಪ್ರಬಲ ಸಾಕ್ಷಿಯಾಗಿ ಸಹಕಾರಿಯಾಗಲಿದೆ. ಜಿಲ್ಲಾದ್ಯಂತ ಸ್ಥಾಪಿಸಲಾಗಿರುವ ಎಸ್.ಎಸ್.ಟಿ. (SST) ಚೆಕ್-ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಲೈವ್ ಸ್ಟ್ರೀಮಿಂಗ್ ಮೂಲಕ ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ಡಿಸಿ ಗಂಗಾಧರ ಸ್ವಾಮಿ ತಿಳಿಸಿದರು.

- - -

-22ಕೆಡಿವಿಜಿ36:

ದಾವಣಗೆರೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕರಾದ ಕುಮಾರ್ ರಮಣಿಕಾಂತ್ ನೊಡೆಲ್ ಅಧಿಕಾರಿಗಳು, ಎಸ್.ಎಸ್.ಟಿ., ಎಫ್.ಎಸ್.ಟಿ. ತಂಡಗಳಿಗೆ ಮಾರ್ಗದರ್ಶನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯುವ ನೀರಿಗೆ ಕಾಡಿನಲ್ಲಿ ಜನರ ಪರದಾಟ
ತ್ರಿವೇಂಡ್ರಮ್‌ನಲ್ಲಿ 7ನೇ ಇಂಡಿಯನ್ ಓಪನ್‌ 400 ಮೀಟರ್ ಓಟ: ಮಂಡ್ಯದ ವಿಜಯಕುಮಾರಿಗೆ ಬೆಳ್ಳಿ ಪದಕ