ರಾಜ್ಯದ ಜಲಾಶಯಗಳ ಭದ್ರತೆ ಪರಿಶೀಲನೆ: ಡಿಕೆಶಿ

KannadaprabhaNewsNetwork |  
Published : Aug 22, 2024, 12:55 AM IST

ಸಾರಾಂಶ

ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಮುರಿದಿದ್ದರಿಂದ ಆಗಿರುವ ಅನಾಹುತದಿಂದ ಎಚ್ಚೆತ್ತುಕೊಂಡಿದ್ದು, ಇಡೀ ರಾಜ್ಯದ ಎಲ್ಲ ಜಲಾಶಯಗಳ ಭದ್ರತೆ ಪರಿಶೀಲನೆಗೆ ಸೂಚಿಸಲಾಗಿದೆ.

ತುಂಗಭದ್ರಾ ಜಲಾಶಯ ಗೇಟ್‌ ದುರಸ್ತಿಯಲ್ಲಿ ಎಂಜಿನಿಯರ್, ಕಾರ್ಮಿಕರ ಕಾರ್ಯ ಶ್ಲಾಘನೀಯ

ಕನ್ನಡಪ್ರಭ ವಾರ್ತೆ ಕೊಪ್ಪಳ

ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಮುರಿದಿದ್ದರಿಂದ ಆಗಿರುವ ಅನಾಹುತದಿಂದ ಎಚ್ಚೆತ್ತುಕೊಂಡಿದ್ದು, ಇಡೀ ರಾಜ್ಯದ ಎಲ್ಲ ಜಲಾಶಯಗಳ ಭದ್ರತೆ ಪರಿಶೀಲನೆಗೆ ಸೂಚಿಸಲಾಗಿದ್ದು, ಕಾಲಕಾಲಕ್ಕೆ ತಾಂತ್ರಿಕ ಸಮಿತಿ ನೀಡುವ ವರದಿ ಅನುಷ್ಠಾನ ಮಾಡಿ, ಜಲಾಶಯದ ಭದ್ರತೆ ಕಾಪಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದ್ದಾರೆ.

ತಾಲೂಕಿನ ಬಸಾಪುರ ಗ್ರಾಮದ ಬಳಿ ಇರುವ ವಿಮಾನ ತಂಗುದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯಕ್ಕೆ ಇನ್ನು 30 ವರ್ಷ ಆಯಸ್ಸು ಎನ್ನುವ ವಿಚಾರದ ಕುರಿತು ನಾನು ಉತ್ತರಿಸಲ್ಲ, ಉತ್ತರಿಸಲು ಜಲಾಶಯ ತಜ್ಞನೂ ಅಲ್ಲ. ಹೀಗಾಗಿ, ತಾಂತ್ರಿಕ ಸಮಿತಿ ನೀಡುವ ವರದಿಯನ್ನಾಧರಿಸಿ ಕ್ರಮ ವಹಿಸುತ್ತೇವೆ ಎಂದರು.

ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಮುರಿದಾಗ ಕರ್ನಾಟಕದತ್ತ ಇಡೀ ದೇಶವೇ ತಿರುಗಿ ನೋಡುತ್ತಿತ್ತು. ಆದರೆ, ನಮ್ಮ ಎಂಜಿನಿಯರ್ ಗಳು, ಕಾರ್ಮಿಕರು ಶಕ್ತಿಮೀರಿ ಕಾರ್ಯ ನಿರ್ವಹಿಸಿ, ಯಶಸ್ವಿಯಾಗಿ ನೀರು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ಹಯ್ಯ ನಾಯ್ಡು ಅವರ ಶ್ರಮವನ್ನು ನಾವು ಶ್ಲಾಘೀಸುತ್ತೇವೆ. ಎಂಜಿನಿಯರ್ ಮತ್ತು ಕಾರ್ಮಿಕರಿಗೆ ಸರ್ಕಾರ ಸೂಕ್ತ ಗೌರವ ಸಲ್ಲಿಸುತ್ತದೆ ಎಂದರು.

ಆದರೆ, ಈ ವಿಷಯದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡಲು ನೋಡಿದರು. ಆದರೆ, ನಾವು ಕೆಲಸ ಮಾಡುವುದನ್ನು ನೋಡಿದೆವು. ಸರ್ಕಾರ ಕೆಲಸದ ಕಡೆ ಗಮನ ನೀಡಿತು. ನಮ್ಮ ಸಚಿವರು, ಶಾಸಕರು ಹಗಲಿರಳು ಕೆಲಸ ಮಾಡಿ, ಬಹುದೊಡ್ಡ ವಿಪತ್ತನ್ನು ನಿಭಾಯಿಸಿದ್ದಾರೆ. ಟೀಕೆಗಳು ಸಾಯುತ್ತವೇ, ಕೆಲಸಗಳು ಉಳಿಯುತ್ತೇವೆ ಎಂದರು.

ಕುಷ್ಟಗಿಯಲ್ಲಿ ಸಿಎಂಗೆ ಅದ್ಧೂರಿ ಸ್ವಾಗತ:ಕುಷ್ಟಗಿ ಪಟ್ಟಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿ ಸನ್ಮಾನಿಸಿ ಗೌರವಿಸಿದರು.

ಆಲಮಟ್ಟಿಯ ಅಣೆಕಟ್ಟೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಕುಷ್ಟಗಿಯ ಅಗ್ನಿಶಾಮಕ ಠಾಣೆಯ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತ ಕೋರಿದರು. ಹೂಮಾಲೆ ಹಾಕಿ ಶಾಲು ಹೊದಿಸಿ ಸನ್ಮಾನ ಮಾಡಿದರು. ರೈತ ಸಂಘದ ಮುಖಂಡರು ಹಾಗೂ ಇತರರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಿಎಂ ಕಾರ್ಯಕರ್ತರತ್ತ ಕೈಬೀಸಿದರು.ಈ ಸಂದರ್ಭ ಯುವ ಕಾಂಗ್ರೆಸ್ ಮುಖಂಡ ದೊಡ್ಡಬಸನಗೌಡ ಬಯ್ಯಾಪುರ, ಲಾಡ್ಲೆಮಶಾಕ ದೋಟಿಹಾಳ, ವಿಜಯನಾಯಕ, ಹನಮೇಶ ಗುಮಗೇರಿ, ಸುರೇಶ ಕುಂಟನಗೌಡ್ರ, ಶಿವರಾಜ ಕಟ್ಟಿಮನಿ, ಮಹಾಂತೇಶ ಬಂಡೇರ, ಇಮಾಮಸಾಬ ಗರಡಿಮನಿ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ