ಕನ್ನಡಪ್ರಭ ವಾರ್ತೆ ತರೀಕೆರೆ
ಜಮಾ ಅತೆ ಇಸ್ಲಾಮಿ ಹಿಂದ್ ತರೀಕೆರೆ ಘಟಕ ವತಿಯಿಂದ ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ ಅವರ ಹುಟ್ಟಿದ ತಿಂಗಳು ಈದ್ ಮೀಲಾದ್ ಆಚರಣೆ ಪ್ರಯುಕ್ತ ಪಟ್ಟಣದಲ್ಲಿ ಸೆ.3ರಿಂದ 14ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೀರತ್ ಅಭಿಯಾನದ ಸಂಚಾಲಕ ಶೇಖ್ ಜಾವೀದ್ ಹೇಳಿದರು.ಜಮಾ ಅತೆ ಇಸ್ಲಾಮಿ ಹಿಂದ್ ತರೀಕೆರೆ ಘಟಕ ವತಿಯಿಂದ ಪಟ್ಟಣದ ಅರಮನೆ ಹೋಟೆಲ್ನಲ್ಲಿ ಏರ್ಪಾಡಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ನ್ಯಾಯ ಮತ್ತು ಮಾನವೀಯ ಸಂದೇಶಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸೀರತ್ ಅಭಿಯಾನದ ಮೂಲಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಆರೋಗ್ಯ ಪೂರ್ಣ ಸಮಾಜ ಪ್ರತಿಯೊಬ್ಬರ ಆತ್ಮದ ಬೇಡಿಕೆಯಾಗಿದೆ, ಅಭಿಯಾನದಲ್ಲಿ ವಿವಿಧ ಸಮಾಜ ಸೇವಾ ಚಟುವಟಿಕೆಗಳನ್ನು ಮತ್ತು ಸಮಾಜದಲ್ಲಿನ ದ್ವೇಷ ಹೋಗಲಾಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು, ಸೀರತ್ ಅಭಿಯಾನದ ಪ್ರಯುಕ್ತ ಹಣ್ಣು ಹಂಪಲು ವಿತರಣೆ, ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಜಮಾ ಅತೆ ಇಸ್ಲಾಮಿ ಹಿಂದ್ ಮುಖಂಡರು, ಪುರಸಭೆ ಸದಸ್ಯ ಅದಿಲ್ ಪಾಷ ಮಾತನಾಡಿ, ರಾಷ್ಟ್ರದಲ್ಲಿ ಅಸಮಾನತೆ ಹೋಗಲಾಡಿಸಲು ಅನೇಕ ಪ್ರಯತ್ನ ನಡೆಯುತ್ತಿದೆ, ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ ಅವರ ಹುಟ್ಟಿದ ತಿಂಗಳು ಈದ್ ಮೀಲಾದ್ ಆಚರಣೆ ಪ್ರಯುಕ್ತ ಸೀರತ್ ಅಭಿಯಾನ ರಾಜ್ಯವ್ಯಾಪಿ ನಡೆಯುತ್ತಿದೆ, ಸೆ.11ರಂದು ಸಂಜೆ 7.15ಕ್ಕೆ ಪಟ್ಟಣದ ಹೋಟೆಲ್ ಅರಮನೆಯಲ್ಲಿ ಜನಾಬ್ ಅಕ್ಬರ್ ಅಲಿ ಉಡುಪಿ ಅವರಿಂದ ಸೀರತ್ ಪ್ರವಚನ, ಮುಖ್ಯ ಅತಿಥಿಗಳಾಗಿ ಚೆನ್ನಗಿರಿ ತಾಲೂಕು ಪಾಂಡೋಮಟ್ಟಿ ವಿರಕ್ತ ಮಠ ಶ್ರೀ ಗುರು ಬಸವ ಸ್ವಾಮೀಜಿ ಭಾಗವಹಿಸಲಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಪ್ರಭಂದ ಸ್ಪರ್ಧೆ ಇದ್ದು, ವಿಜೇತರಿಗೆ ಸೀರತ್ ಪ್ರವಚನ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು, ಪ್ರಬಂಧಗಳನ್ನು ಕನ್ನಡ ಅಥವಾ ಇಂಗ್ಲೀಷ್ ಬಾಷೆಯಲ್ಲಿ ಬರೆಯಬಹುದು. ಇದು ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಾಗಿದೆ ಎಂದು ಹೇಳಿದರು.
ಜಮಾ ಆತೆ ಇಸ್ಲಾಮಿ ಹಿಂದ್ ತರೀಕೆರೆ ಘಟಕದ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಮೇರಾಜ್ ಮಸೀದಿ ಅಧ್ಯಕ್ಷ ಸರ್ಮದ್ ಉಲ್ಲಾ ಖಾನ್ ಮಾತನಾಡಿದರು.ಎಸ್ಐಒ ತರೀಕೆರೆ ಘಟಕದ ಅಧ್ಯಕ್ಷ ಸೈಯದ್ ಅಬ್ದುರ್ ರಹಮಾನ್, ಜಮಾ ಅತೆ ಇಸ್ಲಾಮಿ ಹಿಂದ್ ತರೀಕೆರೆ ಘಟಕದ ಮುಖಂಡರು ಹಾಜರಿದ್ದರು.