ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸೀತಾದೇವಿ, ರಾಮದೇವರಮೂರ್ತಿ ವಿಗ್ರಹವನ್ನು ಮಂಗಳವಾದ್ಯದೊಂದಿಗೆ ಸುಬ್ಬರಾಯಛತ್ರ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ವೇದಘೋಷ ಪಠಣ ಮಾಡಿ ಸೀತಾದೇವಿ, ರಘುನಂದನ ರಾಮದೇವರನ್ನು ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಕಲ್ಯಾಣೋತ್ಸವದ ಸೇವಾರ್ಥದಾರರಾದ ಗೀತಾ ನಾರಾಯಣಮೂರ್ತಿ ಕುಟುಂಬ ವಧು ವರರಾದ ಸೀತೆ, ರಾಮದೇವರ ಪರವಾಗಿ ವಿವಿಧ ಮಂಗಳ ಶಾಸ್ತ್ರದಲ್ಲಿ ಭಾಗಿಯಾಗಿದ್ದರು.
ವಶಿಷ್ಟ ಗೋತ್ರದ ಶ್ರೀರಾಮ, ಗೌತಮಗೋತ್ರದ ಸೀತಾದೇವಿ ವಂಶದ ಸಮಗ್ರ ಮಾಹಿತಿ ಹೇಳಿ ನಿಶ್ಚಿತಾರ್ಥ ನೆರವೇರಿಸಲಾಯಿತು. ವಧು, ವರಪೂಜೆ, ಕಾಶಿಯಾತ್ರೆ, ನೇತ್ರೋನ್ಮಮಿಲನದೊಂದಿಗೆಜೀರಿಗೆ ಬೆಲ್ಲ ಹಾಕಿ ನಿರೀಕ್ಷಣೆ ಮಾಡಲಾಯಿತು.ಮಹಾಗಣಪತಿ ಪೂಜೆ, ಅಂಕುರಾರ್ಪಣೆ, ದೇವತಾನಾಂದಿ, ನವಗ್ರಹ ಪೂಜೆ, ಕಳಸಸ್ಥಾಪನೆ, ಲಾಜಾ ಹೋಮ, ವೈಶ್ಯಕರ್ಮಣ ಹೋಮ, ನವಗ್ರಹ ಹೋಮ, ಕನ್ಯಾವರಣ, ವರಪೂಜೆ, ಫಲ ಪೂಜೆ, ಫಲತಾಂಬೂಲ ಬದಲಾವಣೆ, ಸ್ತಂಭ ಮೂಹೂರ್ತ, ವಿಳ್ಳೆಶಾಸ್ತ್ರ, ಬಳೆಶಾಸ್ತ್ರ, ಭತ್ತದ ಶಾಸ್ತ್ರ ಸೇರಿದಂತೆ ಹಲವು ಶುಭಲಗ್ನ ಕಾರ್ಯಕ್ರಮ ನಡೆದವು. ಕನ್ಯಾದಾನ ಮಾಡಿ ಮಹಾಸಂಕಲ್ಪ, ಕಂಕಣಧಾರಣೆ, ಮಾಂಗಲ್ಯಧಾರಣೆ ಜರುಗಿತು.
ಈ ವೇಳೆ ಸಮಿತಿ ನಿರ್ದೇಶಕರು, ವಿಪ್ರ ವೃಂದ ಗಣ್ಯರು ಇದ್ದರು.
ಕಿಕ್ಕೇರಿಯಲ್ಲಿ ವಿಪ್ರ ಬಾಂಧವ ಸೇವಾ ಸಮಿತಿ ಆಶ್ರಯದಲ್ಲಿ ಸೀತಾರಾಮ ಕಲ್ಯಾಣಮಹೋತ್ಸವಕ್ಕೆ ಫಲತಾಂಬೂಲವನ್ನು ಹಿಡಿದು ಸಾಗುತ್ತಿರುವ ವಿಪ್ರ ವೃಂದದವರು.