ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡರೆ ಭವಿಷ್ಯದ ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.ನಗರದ ಬೈಪಾಸ್ ರಸ್ತೆಯಲ್ಲಿರುವ ಎಸ್.ಆರ್.ಪ್ರೈಮ್ ನರ್ಚರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳು ಬಾಲ್ಯದಿಂದಲೇ ಮತದಾನದ ಹಕ್ಕಿನ ಬಗ್ಗೆ ತಿಳಿದುಕೊಳ್ಳಬೇಕು. ಸಮರ್ಪಕ ಅಭ್ಯರ್ಥಿಗಳನ್ನು ಗುರುತಿಸುವಂತಹ ಕೆಲಸ ಮಾಡಿದರೆ ಸದೃಢ ಸರ್ಕಾರ ಲಭ್ಯವಾಗಲಿದೆ. ಸಮಾಜದಲ್ಲಿ ಬಡವರ, ಹಿಂದುಳಿದ ಪರವಾಗಿ ಸರ್ಕಾರಗಳು ಕಾರ್ಯನಿರ್ವಹಿಸಲಿವೆ. ಹೀಗಾಗಿ ಭವಿಷ್ಯದಲ್ಲಿ ಮತದಾನಕ್ಕೆ ತೆರಳಲು ಮುನ್ನ ಅರಿವು ಹೊಂದುವುದು ಮುಖ್ಯ ಎಂದರು.ಸುಖಾಸುಮ್ಮನೆ ಮತದಾನ ಮಾಡದೇ ಗುಣಮಟ್ಟದ ಆಡಳಿತ ನೀಡುವವರಿಗೆ ಮತ ಚಲಾಯಿಸಬೇಕು. ಆ ನಿಟ್ಟಿನಲ್ಲಿ ಶಾಲೆ ವಿದ್ಯಾರ್ಥಿಗಳ ಚುನಾವಣೆಯಲ್ಲಿ ಇವಿಎಂ ಮಿಷನ್ನೊಂದಿಗೆ ವಿಶೇಷವಾಗಿ ನಾಯಕತ್ವ ಗುರುತಿಸಲು ಮುಂದಾಗಿರುವುದು ಉತ್ತಮ ಸಂಗತಿ ಎಂದು ತಿಳಿಸಿದರು.ಮಕ್ಕಳು ಉನ್ನತ ಸ್ಥಾನಕ್ಕೆ ತೆರಳಲು ಶಾಲೆಯಲ್ಲಿ ಶಿಕ್ಷಕರು ಹಾಗೂ ಮನೆಯಲ್ಲಿ ಪಾಲಕರ ಸಹಕಾರ ಬಹುಮುಖ್ಯ. ಆ ಸಾಲಿನಲ್ಲಿ ನರ್ಚರ್ ಶಾಲೆ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.ವೈಯಕ್ತಿಕ ಜೀವನದ ವಿದ್ಯಾಭ್ಯಾಸದಲ್ಲಿ ನಾವು ಸೋತಿದ್ದೇವೆ. ಆದರೆ, ಛಲಬಿಡದೇ ಎದುರಿಸಿದ ಪರಿಣಾಮ ವಿವಿಧ ಹುದ್ದೆ ಗಳನ್ನು ಅಲಂಕರಿಸಲು ಕಾರಣವಾಗಿದೆ. ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಬಾರದು. ದೃಢ ನಿರ್ಧಾರದಿಂದ ಮುನ್ನುಗ್ಗಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು.ಶಾಲೆ ಪ್ರಾಂಶುಪಾಲರಾದ ಸುಪ್ರಿಯಾ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಘ ಸ್ಥಾಪಿಸುವ ನಿಟ್ಟಿನಲ್ಲಿ ವಿಶೇಷವಾಗಿ ಇವಿಎಂ ಮಿಷನ್ ಮೂಲಕ ನಾಯಕತ್ವವನ್ನು ಆಯ್ಕೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 200 ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಶಾಲಾ ಚುನಾವಣೆಯಲ್ಲಿ ಭಾಗವಹಿಸಿ ಮತಯಾಚಿಸಿದ್ದಾರೆ ಎಂದರು.ಅಂತಿಮವಾಗಿ ಶಾಲೆ ನಾಯಕತ್ವದ ಬಾಲಕರ ವಿಭಾಗಕ್ಕೆ ಕಣಿಸ್ಕ್ ಗುಳ್ಳುಲಿ, ಬಾಲಕಿಯರ ವಿಭಾಗಕ್ಕೆ ಕೆ.ಜೆ.ಚೈತ್ರ ಹಾಗೂ ಸಹಾಯಕರಾಗಿ ನಿಹಾಲ್ ಸಿ.ಶೆಟ್ಟಿ, ರೀವ ಜೈನ್ ಆಯ್ಕೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಶಾಲೆ ಉಪ ಪ್ರಾಂಶುಪಾಲೆ ನಜಮೂಸ್, ವ್ಯವಸ್ಥಾಪಕ ರಾಕೇಶ್ಶೆಟ್ಟಿ, ಪ್ರೀತೇಶ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
28 ಕೆಸಿಕೆಎಂ 1ಚಿಕ್ಕಮಗೂರಿನ ಬೈಪಾಸ್ ರಸ್ತೆಯ ಎಸ್.ಆರ್.ಪ್ರೈಮ್ ನರ್ಚರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಪ್ರಾಂಶುಪಾಲರಾದ ಸುಪ್ರಿಯಾ, ನಜಮೂಸ್, ರಾಕೇಶ್ ಶೆಟ್ಟಿ, ಪ್ರೀತೇಶ್ ಇದ್ದರು.