ಕಾಫಿ ಬೆಳೆಗಾರರ ಹಿತರಕ್ಷಣೆಗೆ ಸಂಸದರು ಬದ್ಧ
ಸರ್ಫೇಸಿ ಕಾಯಿದೆ ಅನ್ವಯ ಕಾಫಿ ಬೆಳೆಗಾರರ ಹಿತರಕ್ಷಣೆ ಹೆಸರಲ್ಲಿ ಕಾಂಗ್ರೆಸ್ ವಕ್ತಾರ ಎಚ್.ಎಚ್.ದೇವರಾಜ್ ಆತ್ಮ ವಂಚನೆ ಹೇಳಿಕೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಲೇವಡಿ ಮಾಡಿದ್ದಾರೆ.ಬೆಳೆಗಾರರ ಕಾಫಿ ತೋಟಗಳು ಸಾಲ ಬಾಕಿಯಿಂದಾಗಿ ಹರಾಜಿಗೆ ಬಂದಾಗ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಕಾಫಿ ಬೆಳೆಗಾರ ರೈತರು ಮತ್ತು ಕಾಫಿ ಬೋರ್ಡ್ ಅಧ್ಯಕ್ಷ ದಿನೇಶ್ ನಿಯೋಗ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ್ ಭೇಟಿ ಮಾಡಿ ಸುಸ್ತಿ ಬಾಕಿದಾರರ ಸಾಲ ಒಮ್ಮೆ ತಿರುವಳಿ ಮಾಡುವಂತೆ (ಒನ್ ಟೈಮ್ ಸೆಟಲ್ ಮೆಂಟ್) ಮಾಡಿಕೊಂಡ ಮನವಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದಿದೆ.
ಯೋಜನೆಯಂತೆ ಹೆಚ್ಚುವರಿ ಅವಧಿ ಮತ್ತು ಶೇ.6ರಷ್ಟು ಬಡ್ಡಿದರದಲ್ಲಿ ಒಮ್ಮೆ ಪಾವತಿಸಲು ಅವಕಾಶವನ್ನು ಸರ್ಕಾರ ಕಲ್ಪಿಸಿತ್ತು. ಇದರಿಂದ 12 ರಿಂದ 20 ಸಾವಿರ ಕಾಫಿ ಬೆಳೆಗಾರ ರೈತರು ಈ ಅವಕಾಶ ಪಡೆದು ಸಾಲ ಮುಕ್ತತೆ ಮಾಡಿ ಕೊಂಡಿದ್ದಾರೆ. ಇದರಿಂದ ಕೆಲ ರೈತರಿಗೆ ಬಡ್ಡಿ ರಿಯಾಯಿತಿ ಆಗಿರುವುದನ್ನು ದೇವರಾಜ್ ಅವರು ಗಮನಿಸಿಲ್ಲ ಎಂದರು.ಮತ್ತೊಮ್ಮೆ ರೈತರು ಸಂಸದರನ್ನು ಭೇಟಿಯಾಗಿ ಸರ್ಫೇಸಿ ಕಾಯ್ದೆಯಲ್ಲಿನ ಆನ್ಲೈನ್ ವ್ಯವಸ್ಥೆ ತೆಗೆಯಬೇಕು. ಇಲ್ಲವಾದಲ್ಲಿ ವಿದೇಶದಲ್ಲಿರುವ ಕೆಲವು ಹಣವಂತರು ಬಡವರ ಭೂಮಿಯನ್ನು ಖರೀದಿಸುವ ತಂತ್ರ ಹೆಣೆಯುತ್ತಿದ್ದಾರೆ, ಆ ಹಿನ್ನೆಲೆಯಲ್ಲಿ ಸಂಸದರು ಹಿರಿಯರಾದ ದೇವೇಗೌಡರು ನಿಯೋಗದಲ್ಲಿ ತೆರಳಿ ಸರ್ಫೇಸಿ ಕಾಯ್ದೆಯಲ್ಲಿನ ಆನ್ಲೈನ್ ಕೈ ಬಿಡುವಂತೆ ಮನವಿಯನ್ನು ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಿ, ರೈತರಿಗೆ ಸಹಾಯ ಮಾಡುವ ಆಶ್ವಾಸನೆ ಪಡೆದಿದ್ದರು. ಈ ಮಧ್ಯೆ ಸಂಸದ ಪೂಜಾರಿ ತೆರಳಿ, ಕೆಲ ರೈತರಿಗೆ ಬ್ಯಾಂಕ್ ಅಧಿಕಾರಿಗಳ ಮೂಲಕ ರಿಯಾಯಿತಿ ದರದಲ್ಲಿ ಒಮ್ಮೆ ತಿರುವಳಿ ಅವಕಾಶ ಕಲ್ಪಿಸಲು ಸಂಸದರು ನೆರವಾಗಿದ್ದರು.
ಕಾಫಿ ಬೆಳೆಗಾರರ ಹಿತರಕ್ಷಣೆಗೆ ಸಂಸದರ ಬದ್ಧವಾಗಿದ್ದು, ಅಪಪ್ರಚಾರ ಮಾಡುವುದನ್ನು ಉದ್ಯೋಗ ಮಾಡಿಕೊಂಡಿರುವ ಕಾಂಗ್ರೆಸ್ ಮುಖಂಡರು, ಹೊಣೆಗೇಡಿ ಮಾತುಗಳನ್ನು ನಿಲ್ಲಿಸಿ, ಪರಿಹಾರ ಕ್ರಮಗಳ ಬಗ್ಗೆ ಸಲಹೆ ನೀಡುವತ್ತ ಗಮನಹರಿಸಿ ಎಂದು ಕಿವಿಮಾತು ಹೇಳಿದ್ದಾರೆ.
--ಫೋಟೋ--ಕಳೆದ ಮಾ.11ರಂದು ಮತ್ತೊಂದು ಬಾರಿ ಸಂಸದರ ನಿಯೋಗ ಕಾಫಿ ಬೆಳೆಗಾರರಿಗೆ ಸರ್ಫೇಸಿ ಕಾಯ್ದೆ ಸಮಸ್ಯೆ ಕುರಿತು ಹಣಕಾಸು ಸಚಿವರೊಂದಿಗೆ ಸಭೆ ನಡೆಸಿದ್ದಾರೆ.