ಕೊಪ್ಪಳ: ಸ್ವಂತಿಕೆ ಮತ್ತು ಸ್ವಾವಲಂಬನೆ ಯುವಕರ ಮಂತ್ರವಾಗಬೇಕು ಎಂದು ಸಿವಿಸಿ ಫೌಂಡೇಶನ್ ಮಹಾಪೋಷಕ ಸಿ.ವಿ.ಚಂದ್ರಶೇಖರ್ ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಸಂದು ಎಂಟು ದಶಕಗಳಾಗಿವೆ. ಮಾನಸಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ನಾವು ಪಶ್ಚಿಮಾತ್ಯ ಮಾದರಿಗಳಿಗೆ ಜೋತು ಬಿದ್ದಿದ್ದೇವೆ. ಈ ನೆಲದ ಗುಣ ಅಳವಡಿಸಿಕೊಂಡಿಲ್ಲ. ವೈಚಾರಿಕ ಸ್ವಾತಂತ್ರ್ಯ ನಮಗೆ ಇನ್ನೂ ಸಿಗಬೇಕಿದೆ. ಆದ್ದರಿಂದ ಯುವಕರು ಭಾರತೀಯತೆ, ಭಾರತೀಯ ವಿಚಾರಧಾರೆ ಹಾಗೂ ಭಾರತೀಯ ಸಿದ್ಧಾಂತ ಮರು ಆವಿಷ್ಕರಿಸಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಪಶ್ಚಿಮಾತ್ಯ ಮಾದರಿ ಅನುಸರಿಸಿ ಆ ವಿಚಾರಧಾರೆ ಅನುಸರಿಸುತ್ತಿರುವುದು ಅನೇಕ ಸಮಸ್ಯೆ ಸೃಷ್ಟಿಸಿದೆ. ಭಾರತೀಯ ವಿಚಾರಧಾರೆ ಎರಡನೇ ದರ್ಜೆ ಎಂಬ ಭಾವನೆ ಬಿತ್ತಲಾಗಿದೆ. ಇಂತಹ ವ್ಯವಸ್ಥೆ ಬದಲಾಯಿಸಿ ಭಾರತೀಯತೆ ಬೆಳೆಸಿಕೊಳ್ಳಬೇಕೆಂದರು.ಸ್ವಾವಲಂಬನೆ ಯುವಕರ ಮಂತ್ರವಾಗಬೇಕು. ಯುವಕರು ಉದ್ಯಮಿಗಳಾಗಬೇಕು. ಬೇರೆಯವರ ಮೇಲೆ ಅವಲಂಬನೆ ತಪ್ಪಿಸಿದಾಗ ಭಾರತ ಸದೃಢವಾಗಲು ಸಾಧ್ಯ. ಸಂಶೋಧನೆ ಕ್ಷೇತ್ರದಲ್ಲಿ ವ್ಯಾಪಕ ಅವಕಾಶಗಳಿವೆ. ಯುವಕರು ಅದನ್ನು ಬಳಸಿಕೊಳ್ಳಬೇಕು ಎಂದು ಕರೆ ಕೊಟ್ಟರು.
ಕೃತಕ ಬುದ್ಧಿಮತ್ತೆ ಕಾಲಘಟ್ಟದಲ್ಲಿ ಕೌಶಲ್ಯ ಬೆಳೆಸಿಕೊಳ್ಳುವುದು ಅಗತ್ಯ. ವೈಷಮ್ಯ ಹಾಗೂ ದ್ವೇಷ ಪಸರಿಸಲು ಸಾಮಾಜಿಕ ಜಾಲತಾಣ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ವಿಚಾರದಲ್ಲಿ ಸ್ವಂತಿಕೆ ಯುವಕರು ಬೆಳೆಸಿಕೊಳ್ಳಬೇಕು. ಸರಿ ತಪ್ಪುಗಳ ನಡುವಿನ ವ್ಯತ್ಯಾಸ ತಿಳಿದು ಮುನ್ನಡೆಯಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹ್ರದ್ರೋಗ ತಜ್ಞ ಡಾ. ಮಹೇಂದ್ರ ಕಿಂದ್ರೆ ಹೇಳಿದರು.
ಪ್ರಥಮ (ಪ್ರವೀಣ್ ಹುಯಿಲಗೋಳ), ದ್ವಿತೀಯ (ಶ್ರೀದೇವಿ ಮಡಿವಾಳರ) ಮತ್ತು ತೃತೀಯ (ಪಾರ್ವತಿ ಸುರೇಶ್ ನೆನಕ್ಕಿ) ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.
ಕೆ ಎಸ್ ಸಿ ಎ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಹಂತಕ್ಕೆ ಆಯ್ಕೆಯಾದ ತೇಜಸ್ ಹಾಗೂ ಶಾಹಿದ್ ಅಲಿ ಅವರಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಫೌಂಡೇಶನ್ ಸಂಚಾಲಕ ಮೌನೇಶ್ ಕಿನ್ನಾಳ ಕಾರ್ಯಕ್ರಮ ನಿರೂಪಿಸಿದರು.