ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಹಾಗೂ ನೈರುತ್ಯ ಕ್ಷೇತ್ರದ ಪ್ರಚಾರ ಸಭೆಯಲ್ಲಿ ನೈರುತ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಾತ್ವಿಕ ಮನಸ್ಥಿತಿ ಹಾಗೂ ಸೇವಾ ಮನೋಭಾವನೆ ಡಾ.ಧನಂಜಯ ಸರ್ಜಿ ಅವರಲ್ಲಿದೆ. ಹೀಗಾಗಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ವಿಧಾನಪರಿಷತ್ಗೆ ಕಳಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ಮೈತ್ರಿ ಪಕ್ಷದ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.
ವಿಧಾನ ಪರಿಷತ್ತ ಚಿಂತಕರ ಚಾವಡಿಯಾಗಿದ್ದು, ಅಲ್ಲಿಗೆ ಚಿಂತನೆ ಮಾಡುವಂತಹ, ಪೂರ್ಣ ಪ್ರಮಾಣದಲ್ಲಿ ಸಮಾಜಸೇವೆ ಮಾಡುವಂತಹ ವ್ಯಕ್ತಿಗಳನ್ನು ಕಳಿಸಿಕೊಡಬೇಕಾಗಿದೆ. ಡಾ. ಧನಂಜಯ ಸರ್ಜಿ ಅವರು ಆರ್ಎಸ್ಎಸ್ ಸ್ವಯಂಸೇವಕರಾಗಿ, ಶಿಕ್ಷಕರಾಗಿ, ಮಕ್ಕಳ ತಜ್ಞರಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇವರಿಗಿಂತ ಉತ್ತಮ ಅಭ್ಯರ್ಥಿ ಮತ್ತೊಬ್ಬರಿಲ್ಲ ಎಂದು ಹೇಳಿದರು.
ವಿಧಾನಪರಿಷತ್ತಿನ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, 1988ರಲ್ಲಿ ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದಿದ್ದು, ಅಲ್ಲಿಂದ ಇಲ್ಲಿಯವರೆಗೆ ಪರಿಷತ್ ಆರು ಚುನಾವಣೆ ಎದುರಿಸಿದೆ. ಈ ಆರು ಚುನಾವಣೆಗಳಲ್ಲೂ ಬಿಜೆಪಿ ಗೆದ್ದು ಇತಿಹಾಸ ಸೃಷ್ಠಿಸಿದೆ. ಈ ಬಾರಿಯೂ ನಮ್ಮ ಪಕ್ಷ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿದ್ದು, ಡಾ.ಧನಂಜಯ ಸರ್ಜಿಗೆ ತಾವೆಲ್ಲರೂ ಮತ ನೀಡಬೇಕೆಂದು ಮನವಿ ಮಾಡಿದರು.
ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ಉಸಿರು ಮತ್ತು ಹೆಸರುಗಳ ಮಧ್ಯೆ ನಡೆಯುವುದೇ ಜೀವನ. ಈ ಜೀವನ ಸಾರ್ಥಕವಾಗಬೇಕಾದರೆ ಸದ್ದಿಲ್ಲದೇ ಸಮಾಜಸೇವೆ ಮಾಡಬೇಕು. ನಾನು ಹಂತ ಹಂತವಾಗಿ ಮೇಲೆ ಬಂದವನು, ಎಸ್ಸೆಸ್ಸೆಲ್ಸಿಯಿಂದ ವೈದ್ಯ ವೃತ್ತಿವರೆಗೆ ಮೆರಿಟ್ ಪಡೆದು ಓದಿ ಈ ಮಟ್ಟಕ್ಕೆ ಬಂದಿದ್ದೇನೆ. 100 ಜನ ವೈದ್ಯರನ್ನು ಕಟ್ಟಿಕೊಂಡು, ಸಾವಿರ ಜನಕ್ಕೆ ಉದ್ಯೋಗ ಕೊಟ್ಟು 7 ಆಸ್ಪತ್ರೆ ನಡೆಸುತ್ತಿದ್ದೇನೆ. ಮಕ್ಕಳ ತಜ್ಞನಾಗಿ ಯಾರನ್ನು ನೋಯಿಸುವ ಕೆಲಸ ಮಾಡಿಲ್ಲ, ಸಾಕಷ್ಟು ಸಮಾಜ ಸೇವೆಯಿಂದ ನಾನು ಗುರುತಿಸಿಕೊಂಡಿದ್ದೇನೆ ಎಂದರು. ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಹಿಂದುಳಿದ ವರ್ಗಗಳ ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ. ಕುಬೇರಪ್ಪ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ಡಿ.ಜಿ.ರಾಜಪ್ಪ, ದಿಡಗೂರು ಫಾಲಾಕ್ಷಪ್ಪ, ಸುರೇಂದ್ರನಾಯ್ಕ, ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮಹಾಂತೇಶ್, ಕೋಶಾಧ್ಯಕ್ಷ ಸತೀಶ್, ಸಿ.ಆರ್. ಶಿವಾನಂದ್ ಇತರರು ಇದ್ದರು.
ಪಿಕ್ ಪಾಕೆಟ್ ಸರ್ಕಾರ:
ರಾಜ್ಯದಲ್ಲಿ ಆಡಳಿತ ನಡೆಸುತ್ತಿರವ ಕಾಂಗ್ರೆಸ್ ಸರ್ಕಾರ ಪಿಕ್ ಪಾಕೆಟ್ ಸರ್ಕಾರ ಎಂದು ಜರಿದ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ, ರೈತರ ಮಕ್ಕಳ ವಿದ್ಯಾನಿಧಿ ಸೇರಿ ಅನೇಕ ಯೋಜನೆಗಳ ಅನುದಾನ ಕಿತ್ತುಕೊಂಡಿದೆ ಎಂದು ದೂರಿದರು. 30 ವಿಧಾನಸಭಾ ಕ್ಷೇತ್ರ ಹೊಂದಿದ ಈ ಕ್ಷೇತ್ರದಲ್ಲಿ 85 ಸಾವಿರ ಮತದಾರರನ್ನು ಹೊಂದಿದೆ. ಕಳೆದ ಬಾರಿ 3800 ಮತದಾರರು ಕುಲಗೆಟ್ಟ ಮತ ಹಾಕಿದ್ದು, ಈ ಬಾರಿ ಅಂತಹ ಕೆಲಸ ವಿದ್ಯಾವಂತರಾದ ನೀವುಗಳು ಮಾಡಬೇಡಿ ಎಂದು ಮನವಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.