ಧಾರವಾಡ: ಚುನಾವಣೆಗಳು ಪ್ರಜಾತಂತ್ರದ ಜೀವಾಳ. ಚುನಾವಣೆ, ಜನಪ್ರತಿನಿಧಿಗಳ ಆಯ್ಕೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೋಳ್ಳಲು ಮತದಾರರಲ್ಲಿ ಅವರ ಹಕ್ಕು ಮತ್ತು ಕರ್ತವ್ಯಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಹೇಳಿದರು.
ಭಾರತ ಚುನಾವಣಾ ಆಯೋಗ ಮತ್ತು ಧಾರವಾಡ ಜಿಲ್ಲಾಡಳಿತ ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿದ ಅವರು, ಪ್ರತಿಯೊಬ್ಬರು ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಬೇಕು. ಪಾರದರ್ಶಕ ಆಡಳಿತ ನೀಡಲು ಜನಪರ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಜನರಿಗೆ ಅಗತ್ಯವಿರುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಪರಮಾಧಿಕಾರ ಮತದಾರರಿಗೆ ಇದೆ. ಇದಕ್ಕೆ ಮೂಲ ಕಾರಣ ನಿರ್ಭಿತವಾದ, ಮುಕ್ತ, ನ್ಯಾಯಸಮ್ಮತವಾಗಿ ಜರುಗುವ ಚುನಾವಣೆಗಳು ಎಂದು ಹೇಳಿದರು.ಚುನಾವಣೆಗಳ ಸಮಯದಲ್ಲಿ ಉಚಿತ ಉಡುಗೊರೆ, ಹಣ,ಸರಾಯಿ ಹಂಚಿಕೆ ಬಗ್ಗೆ ಎಚ್ಚರವಿದ್ದು, ಅವುಗಳನ್ನು ಮತದಾರರು ತಿರಸ್ಕರಿಸಬೇಕು. ಇಂತಹ ಆಮಿಷಗಳಿಗೆ ಮತದಾರರು ಬಲಿಯಾಗದೇ ಅವುಗಳನ್ನು ಹಂಚುವವರನ್ನು ವಿರೋಧಿಸಬೇಕು. ಎಲ್ಲ ಮತದಾರರು ಸ್ವಾಭಿಮಾನಿಗಳಾಗಿ ತಮ್ಮ ಮತದಾನದ ಹಕ್ಕು ತಪ್ಪದೇ ಚಲಾಯಿಸಬೇಕು ಎಂದು ನ್ಯಾಯಾಧೀಶ ಪಿ.ಎಫ್.ದೊಡ್ಡಮನಿ ತಿಳಿಸಿದರು.
ಊರಿನ ಅಭಿವೃದ್ಧಿ, ಜನಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ, ಎಲ್ಲ ಮತದಾರರು ಮತ ಚಲಾಯಿಸಬೇಕು ಮತ್ತು ಮತದಾನದ ಪ್ರಮಾಣ ಹೆಚ್ಚಳವಾಗಬೇಕು ಎಂದು ತಿಳಿಸಿದರು. ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸ್ವಾಗತಿಸಿದರು. ಧಾರವಾಡ ತಹಸೀಲ್ದಾರ್ ದೊಡ್ಡಪ್ಪ ಹೂಗಾರ ವಂದಿಸಿದರು. ನಿವೃತ್ತ ಮುಖ್ಯೋಪಾದ್ಯ ಕೆ.ಎಂ. ಶೇಖ ನಿರೂಪಿಸಿದರು.ಜಿಲ್ಲಾ ಚುನಾವಣಾ ರಾಯಬಾರಿ, ಪದ್ಮಶ್ರೀ ಪುರಸ್ಕೃತ ಪಂಡಿತ ವೇಂಕಟೇಶಕುಮಾರ, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಎ.ಚನ್ನಪ್ಪ ಮಾತನಾಡಿದರು. ಮನಗುಂಡಿ ಗ್ರಾಮದ ಶತಾಯುಷಿ ಮತದಾರ ಬಸವಣ್ಣೆವ್ವ ಹುಂಬೇರಿ ವೇದಿಕೆಯಲ್ಲಿದ್ದರು.
ಜಿಪಂ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ ಸಭಿಕರಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಚುನಾವಣಾ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಿದ ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಚುನಾವಣಾ ಆಯೋಗದ ಪರವಾಗಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತರಾದ ಹುಬ್ಬಳ್ಳಿಯ ಗೋಕುಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಯುವ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ನವ ಮತದಾರರಿಗೆ ವಿತರಿಸುವ ಮತದಾರ ಚೀಟಿಗಳನ್ನು ಸಾಂಕೇತಿಕವಾಗಿ ಪದವಿ ಕಾಲೇಜು ವಿದ್ಯಾರ್ಥಿ ಭುವನ ಜಗದೀಶ ಅಂಗಡಿ ಮತ್ತು ಇಂಜನೀಯರಿಂಗ್ ವಿದ್ಯಾರ್ಥಿನಿ ಸೋನಲ್ ದಯಾನಂದ ಉಗರಗೋಳ ಅವರಿಗೆ ಶತಾಯುಷಿ ಮತದಾರರಾದ ಬಸವಣ್ಣವ್ವ ಹುಂಬೇರಿ ಅವರು ವಿತರಿಸುವ ಮೂಲಕ ಉಚಿತ ಎಪಿಕ್ ಕಾರ್ಡ್ ವಿತರಣೆಗೆ ಚಾಲನೆ ನೀಡಿದರು.