ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಳೆಯ ವಿದ್ಯಾರ್ಥಿಗಳು ಸಾಮಾಜಿಕ ಜೀವನಕ್ಕೆ ಪ್ರವೇಶಿಸಿದ ನಂತರ ತಮ್ಮ ದುಡಿಮೆಯ ಒಂದಿಷ್ಟು ಸಂಪತ್ತನ್ನು ತಾವು ಕಲಿತ ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಪ್ರಭಾರ ಪ್ರಾಂಶುಪಾಲ ಶಫಿ ಅಭಿಪ್ರಾಯಪಟ್ಟರು.ತಾಲೂಕಿನ ಹರಿಹರಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 1994 ರಿಂದ 97ರ ವರೆಗೆ ಕಲಿತ ಬ್ಯಾಚ್ನ ಹಳೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ ನೋಟ್ ಬುಕ್, ಪೆನ್ನು ಮತ್ತಿತರ ಕಲಿಕಾ ಪರಿಕರ ವಿತರಿಸಿ ಮಾತನಾಡಿದರು.ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ತಾನು ಕಲಿತ ಶಾಲೆಯ ಋಣಭಾರವಿರುತ್ತದೆ. ಹಿರಿಯ ವಿದ್ಯಾರ್ಥಿಗಳು ಸಂಘಟಿತರಾಗಿ ತಾವು ಕಲಿತ ಶಾಲೆಗೆ ನೆರವು ನೀಡಿದರೆ ಅದು ಈಗಿನ ಕಲಿಯುವ ಮಕ್ಕಳಿಗೆ ಅನುಕೂಲವಾಗುತ್ತದೆ. ಮುಂದೆ ಮಕ್ಕಳ ಮನಸ್ಸಿನಲ್ಲಿ ಪರೋಪಕಾರ ಗುಣ ಬೆಳೆಯಲು ಉತ್ತೇಜಿಸುತ್ತದೆ ಎಂದರು.
ಎಲ್ಲವನ್ನೂ ಸರ್ಕಾರದಿಂದಲೇ ನಿರೀಕ್ಷಿಸಬಾರದು. ಹಣವುಳ್ಳವರು ತಮ್ಮ ತಮ್ಮ ಭಾಗದ ಸರ್ಕಾರಿ ಶಾಲೆಗಳ ನೆರವಿಗೆ ಧಾವಿಸಬೇಕು. ಪೋಷಕರ ಸಹಕಾರದಿಂದ ಮಾತ್ರ ಸರ್ಕಾರಿ ಶಾಲೆಗಳು ಸಧೃಡವಾಗಲು ಸಾಧ್ಯ ಎಂದರು.ಕನ್ನಡ ಪ್ರಾಧ್ಯಾಪಕ ಡಾ.ಜಯಕೀರ್ತಿ ಮಾತನಾಡಿ, ಇಂದು ಶಿಕ್ಷಣ ವ್ಯಾಪಾರೀಕರಣವಾಗಿದೆ. ಇದು ಗ್ರಾಮೀಣ ಪ್ರದೇಶದ ರೈತ ಮಕ್ಕಳ ಮೇಲೆ ಬೀಳುತ್ತಿದೆ. ಮಕ್ಕಳ ಕಲಿಕೆಗೆ ಅಗತ್ಯ ಹಣ ಹೊಂದಿಸಲಾರದೆ ಪೋಷಕರು ಸಾಲಗಾರರಾಗುವ ಹಂತಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ಬಂದು ನಿಂತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದ ಪೋಷಕರು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಸರ್ಕಾರಿ ಶಾಲೆಗಳು ಮುಚ್ಚಿದರೆ ಮುಂದಿನ ದಿನಗಳಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣ ವಂಚಿತರಾಗುವ ಕಾಲ ಬರುತ್ತದೆ ಎಂದು ಎಚ್ಚರಿಸಿದರು.ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಮಡುವಿನಕೋಡಿ ಎಂ.ಆರ್.ಪ್ರಸನ್ನ, ಎಂ.ಎಲ್.ಪ್ರೇಂಕುಮಾರ್, ಎಂ.ಎನ್.ಮನೋಹರ, ಡಾ.ಜುಯಕೀರ್ತಿ, ಎಚ್.ಎಸ್.ಮೋಹನ, ಎಚ್.ಆರ್.ಪ್ರಭಾಕರ, ಡಿ.ಎಸ್.ಹರೀಶ್, ಡಿ.ಎಸ್.ಮಹದೇವ, ಲೋಕೇಶ್, ಮುಖ್ಯ ಶಿಕ್ಷಕಿ ಮಂಜುಳಾ, ಉಪನ್ಯಾಸಕರಾದ ಗೀತಾ, ಪವಿತ್ರ, ಸಿದ್ದೇಶ್, ಶಿಕ್ಷಕರಾದ ಮಂಜುನಾಥ್, ಸಂದೀಪ, ಸುಧಾ ಮತ್ತಿತರರು ಇದ್ದರು.