ಕನ್ನಡಪ್ರಭ ವಾರ್ತೆ ಉಡುಪಿ
ಕರಾವಳಿ ಭಾಗದಲ್ಲಿ ನಡೆದಿರುವ, ನಡೆಯುತ್ತಿರುವ ಘಟನಾವಳಿಗಳ ಆಧಾರದಲ್ಲಿ ಕೋಮು ಸಂಘರ್ಷಗಳ ತಡೆಗಾಗಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಯಾವುದೇ ಜಿಲ್ಲೆಯನ್ನು ಕೋಮುಸೂಕ್ಷ್ಮ ಪ್ರದೇಶ ಎಂದು ಬಿಂಬಿಸಲು ನಾವು ಈ ಕಾರ್ಯಪಡೆ ರಚಿಸಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.ವಿಶೇಷ ಕಾರ್ಯಪಡೆಗೆ ಉಡುಪಿ ಜಿಲ್ಲೆಯ ಸೇರ್ಪಡೆ ವಿರೋಧಿಸಿ ಶಾಸಕ ಯಶ್ಪಾಲ್ ಸುವರ್ಣ ಅವರ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ಪಡೆಯ ಉಪಯೋಗ ಆಗದಿರುವಂತೆ ನೋಡಿಕೊಳ್ಳಿ ಎಂದು ಸಾರ್ವಜನಿಕರಿಗೂ ನಾನು ಮನವಿ ಮಾಡಿದ್ದೇನೆ. ಕೋಮುವಾದಕ್ಕೆ ಸಂಬಂಧಪಟ್ಟ ಘಟನೆ ನಡೆಯದಿದ್ದಲ್ಲಿ ಈ ಕಾರ್ಯಪಡೆ ಅಗತ್ಯ ಬರುವುದಿಲ್ಲ. ಇದರ ಅಗತ್ಯ ಬರದಿದ್ದಲ್ಲಿ ಕೋಮುವಾದ ಸಂಪೂರ್ಣ ಹೋಗಿದೆ ಎಂಬ ಅರ್ಥವೇ ಬರುತ್ತದೆ ಎಂದರು.ಈ ಕಾರ್ಯಪಡೆಯಿಂದ ಜಿಲ್ಲೆಯ ಘನತೆಗೆ ಧಕ್ಕೆ ಬರುವ ಪ್ರಮೇಯವೇ ಇಲ್ಲ. ನಕ್ಸಲರ ನಿಗ್ರಹಕ್ಕಾಗಿ ಕಾರ್ಕಳ ಭಾಗದಲ್ಲಿ ಎಎನ್ಎಫ್ ಮುಖ್ಯ ಕಚೇರಿ ಮಾಡಿದ್ದೆವು. ಎಎನ್ಎಫ್ನಿಂದ ಉಡುಪಿಯ ಘನತೆ ಕಡಿಮೆ ಆಗಿದೆಯಾ ಎಂದು ಪ್ರಶ್ನಿಸಿದ ಅವರು, ನಕ್ಸಲರಿಂದ ಬಹಳಷ್ಟು ಜನರ ಹತ್ಯೆ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಉಡುಪಿಯಲ್ಲಿ ಎಎನ್ಎಫ್ ಕಚೇರಿ ಆರಂಭಿಸಿದ್ದೆವು. ಇದರಿಂದ ಉಡುಪಿ ಜನಸಮುದಾಯದ ಘನತೆಗೆ ಧಕ್ಕೆ ಆಗಿಲ್ಲ ಎಂದರು.ಕಮಿಷನರ್ ಅವರು ಕಾರ್ಯಪಡೆಯ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ನೋಡಿಕೊಳ್ತಾರೆ. ಐಜಿ ಅವರು ಮೂರು ಜಿಲ್ಲೆಗಳನ್ನು ನಿರ್ವಹಣೆ ಮಾಡುತ್ತಾರೆ. ಏನಾದರೂ ಸಮಸ್ಯೆಯಾದರೆ ಈ ಕಾರ್ಯಪಡೆ ಕಾರ್ಯಾಚರಣೆ ಮಾಡಲಿದೆ ಎಂದು ಹೇಳಿದರು.ಹೊಸ ಜಾತಿ ಗಣತಿಸಮೀಕ್ಷೆಗೆ ತೀರ್ಮಾನ:
ರಾಜ್ಯದಲ್ಲಿ ಪುನಃ ಜಾತಿ ಜನಗಣತಿ ವಿಚಾರದ ಕುರಿತು ಉತ್ತರಿಸಿದ ಪರಮೇಶ್ವರ್, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಸಂಪುಟ ತೀರ್ಮಾನ ಮಾಡಿದೆ. ಅನೇಕ ಸಮುದಾಯ, ಸಂಘ ಸಂಸ್ಥೆಗಳು ಜಾತಿ ಜನಗಣತಿಯಲ್ಲಿ ಅಂಕಿ ಅಂಶ ಸರಿಯಿಲ್ಲ ಎಂದು ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಹೊಸ ಸಮೀಕ್ಷೆಗೆ ನಿರ್ಧರಿಸಲಾಗಿದೆ ಎಂದರು.ಜನಗಣತಿಯಲ್ಲಿ ನಮ್ಮ ಸಮುದಾಯದ ಸಂಖ್ಯೆ ಕಡಿಮೆ ಇದೆ. ಜಾತಿ ಜನಗಣತಿಯಲ್ಲಿ ಹತ್ತು ವರ್ಷದ ಹಳೆಯ ದಾಖಲೆಗಳಿವೆ ಎಂದು ಬಹಳಷ್ಟು ಮಂದಿ ಆಕ್ಷೇಪ ಎತ್ತಿದ್ದಾರೆ. ಅಲ್ಲದೇ ಕಳೆದ ಹತ್ತು ವರ್ಷಗಳಲ್ಲಿ ಒಂದೂವರೆ ಕೋಟಿ ಜನಸಂಖ್ಯೆ ಸೇರ್ಪಡೆ ಆಗಿರುವುದು ಗಣನೆಗೆ ತೆಗೆದುಕೊಳ್ಳಲು ಸಲಹೆ ಬಂದಿತ್ತು. ಇದನ್ನು ಪರಿಗಣಿಸಿ ಮರು ಜಾತಿ ಜನಗಣತಿಗೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಮರು ಸಮೀಕ್ಷೆಯನ್ನು ಸಮರ್ಥಿಸಿಕೊಂಡರು.
ಜನರ ಭಾವನೆ ಅರಿತು ಹೈಕಮಾಂಡ್ ಮರು ಜಾತಿ ಜನಗಣತಿಗೆ ಸೂಚನೆ ನೀಡಿದೆ. ಕಾಂತರಾಜು ಹಾಗೂ ಹೆಗ್ಡೆಯವರು ವೈಜ್ಞಾನಿಕವಾಗಿ ಮಾಡಿರುವ ಜಾತಿ ಜನಗಣತಿ ಮೂಲೆಗುಂಪು ಆಗುವುದಿಲ್ಲ. ವೈಜ್ಞಾನಿಕ ಅಡಿಪಾಯದ ಮೇಲೆ ಮರು ಜಾತಿ ಜನಗಣತಿ ನಡೆಯಲಿದೆ. ಒಂದೂವರೆ ಕೋಟಿ ಜನರನ್ನ ಸೇರಿಸುವ ಗಣತಿ ನಡೆಯಲಿದೆ ಎಂದು ವಿವರಿಸಿದರು.ಕೇಂದ್ರದ್ದು ಜನಗಣತಿ ಮಾತ್ರವೇ ಆಗಿರುತ್ತದೆ:ಭಾರತ ಸರ್ಕಾರ ಜನಗಣತಿಗೆ ಮುಂದಾಗಿದ್ದು, ಇದರಿಂದ ಜಾತಿ ಜನಗಣತಿ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸಮೀಕ್ಷೆ ಮಾಡುತ್ತಿಲ್ಲ. ಕೇವಲ ಜನಗಣತಿ ಮಾತ್ರ ಮಾಡುತ್ತಿದೆ. ಸಾಮಾಜಿಕ, ಶೈಕ್ಷಣಿಕವಾಗಿ ಸ್ಥಿತಿಗತಿ ಅಧ್ಯಯನ ಹಾಗೂ ಅಂಕಿ ಅಂಶ ಹೊರತರಲು ಹೊಸ ಜನಗಣತಿ ನಡೆಯುತ್ತಿದೆ ಎಂದರು.