ಲೈಂಗಿಕ ಕಾರ್ಯಕರ್ತರ ಬಗ್ಗೆ ಸಂವೇದನೆ ಅಗತ್ಯ

KannadaprabhaNewsNetwork |  
Published : Jul 25, 2024, 01:22 AM IST
24ಕೆಡಿವಿಜಿ7-ದಾವಣಗೆರೆಯಲ್ಲಿ ಬುಧವಾರ ಶ್ರೀ ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಕಾಲತ್ತಿನ ಸಭೆಯ ಕಾರ್ಯಸೂಚಿ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ.ಕರೆಣ್ಣವರ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್‌.ಅರುಣಕುಮಾರ. | Kannada Prabha

ಸಾರಾಂಶ

ಭಾರತದ ಎಲ್ಲ ನಾಗರೀಕರಿಗೆ ಸಂವಿಧಾನದಲ್ಲಿ ಖಾತ್ರಿಪಡಿಸಿದ ಮೂಲಭೂತ ಹಕ್ಕುಗಳು ಮತ್ತು ಮಾನವ ಹಕ್ಕುಗಳು ಲೈಂಗಿಕ ಕಾರ್ಯಕರ್ತೆಯರಿಗೂ ಇವೆ. ಅವುಗಳನ್ನು ಅನುಭವಿಸುವ ಹಕ್ಕು ಅವರಿಗೂ ಇದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜಿಲ್ಲಾಮಟ್ಟದ ವಕಾಲತ್ತಿನ ಸಭೆ ಕಾರ್ಯಸೂಚಿ ಉದ್ಘಾಟಿಸಿ ನ್ಯಾ.ಮಹಾವೀರ ಮ. ಕರೆಣ್ಣವರ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಭಾರತದ ಎಲ್ಲ ನಾಗರೀಕರಿಗೆ ಸಂವಿಧಾನದಲ್ಲಿ ಖಾತ್ರಿಪಡಿಸಿದ ಮೂಲಭೂತ ಹಕ್ಕುಗಳು ಮತ್ತು ಮಾನವ ಹಕ್ಕುಗಳು ಲೈಂಗಿಕ ಕಾರ್ಯಕರ್ತೆಯರಿಗೂ ಇವೆ. ಅವುಗಳನ್ನು ಅನುಭವಿಸುವ ಹಕ್ಕು ಅವರಿಗೂ ಇದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಹೇಳಿದರು.

ನಗರದ ಅಶೋಕ ಇನ್ ಹೋಟೆಲ್‌ನಲ್ಲಿ ಬುಧವಾರ ಶ್ರೀ ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಕಾಲತ್ತಿನ ಸಭೆ ಕಾರ್ಯಸೂಚಿ ಉದ್ಘಾಟಿಸಿ ಅವರು ಮಾತನಾಡಿದರು. ಲೈಂಗಿಕ ಕಾರ್ಯಕರ್ತರು, ಅಂತಹವರ ಹಕ್ಕುಗಳ ವಿಚಾರದಲ್ಲಿ ಸಂಬಂಧಿಸಿದ ಇಲಾಖೆಗಳು, ಪೊಲೀಸ್ ಇಲಾಖೆ, ಇತರೆ ಕಾನೂನು ಸಂಸ್ಥೆಗಳು ಸಹ ಸಂವೇದನಾಶೀಲವಾಗಿರಬೇಕು ಎಂದರು.

ಲೈಂಗಿಕ ಕಾರ್ಯಕರ್ತರನ್ನು ಘನತೆಯಿಂದ ನಡೆಸಿಕೊಳ್ಳಬೇಕು. ಅಂತಹವರನ್ನು ಮೌಖಿಕವಾಗಿ ಮತ್ತು ದೈಹಿಕವಾಗಿ ನಿಂದಿಸಬಾರದು, ಹಿಂಸೆಗೊಳಪಡಿಸಬಾರದು. 2022ರಲ್ಲಿ ಸುಪ್ರೀಂ ಕೋರ್ಟ್‌ ಲೈಂಗಿಕ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಸಮಿತಿ ಸ್ಥಾಪಿಸಿ, ಆದೇಶಿಸಿದ್ದನ್ನು ಗಮನಿಸಬೇಕು. ಸುಪ್ರೀಂ ಕೋರ್ಟ್‌ ಸಮಿತಿ ಮಾಡಿದ ಕೆಲ ಶಿಫಾರಸುಗಳಿಗೆ ಸರ್ಕಾರಗಳೂ ಒಪ್ಪಿಗೆ ನೀಡಿವೆ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ, ಹಿರಿಯ ವಕೀಲ ಎಲ್.ಎಚ್‌. ಅರುಣಕುಮಾರ ಮಾತನಾಡಿ, ಸಂವಿಧಾನದ 21ನೇ ವಿಧಿಯಡಿ ಘನತೆಯಿಂದ ಬದುಕುವ ಹಕ್ಕನ್ನು ಎಲ್ಲರಿಗೂ ನೀಡಲಾಗಿದೆ. ಸಮಾಜವು ಲೈಂಗಿಕ ಕಾರ್ಮಿಕರನ್ನು, ಏಡ್ಸ್‌ ಸೋಂಕು ಪೀಡಿತರನ್ನು, ಮಂಗಳಮುಖಿಯರನ್ನು ಸಹ ಸಂವಿಧಾನದ ಆಶಯದಂತೆ ಸಮಾನತೆಯಿಂದ ಕಾಣಬೇಕು. ಲೈಂಗಿಕ ಕಾರ್ಯಕರ್ತರು, ಮಂಗಳಮುಖಿಯರ ಸಮಸ್ಯೆ ಪರಿಹರಿಸುವ ಹೊಣೆ ಸರ್ಕಾರ, ಸಮುದಾಯಗಳ ಮೇಲಿದೆ ಎಂದರು.

ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಎ.ಪಿ.ಜಗದೀಶ ಮಾತನಾಡಿ, ಜಿಲ್ಲೆಯಲ್ಲಿರುವ ಲೈಂಗಿಕ ಕಾರ್ಯಕರ್ತರು, ಏಡ್ಸ್ ಪೀಡಿತರು, ಸಲಿಂಗಗಳ ಬಗ್ಗೆ ನಿರಂತರ ಅಧ್ಯಯನ ನಡೆಸಲಾಗುತ್ತಿದೆ. ಅಂತಹವರ ಹಕ್ಕುಗಳು, ಆ ಜನರ ಪರವಾಗಿರುವ ಕಾನೂನು, ಯೋಜನೆಗಳ ಬಗ್ಗೆ ತಿಳಿಸುವ ಕೆಲಸವಾಗಬೇಕು. ಶೋಷಣೆಯಿಂದ ರಕ್ಷಿಸುವ ಕಾರ್ಯವನ್ನು ನಿಯಂತ್ರಣ ಘಟಕದಡಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಂಜುಳಾ, ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಆಪ್ತ ಸಮಾಲೋಚಕರಾದ ಡಾ.ಗುರು ಸವಣೂರು, ಸಂಘಟನೆಯ ಸಮುದಾಯ ಮಹಿಳೆಯರಾದ ಜ್ಯೋತಿ, ರೇಣುಕಾ, ಸಂಘಟನೆಯ ರಾಜಶ್ರೀನಿವಾಸ, ಮುಕ್ತಾ ಪೂಜಾರ್, ವಿಜಯಲಕ್ಷ್ಮೀ, ವಕೀಲರು, ರಾ.ಲ. ಕಾನೂನು ಕಾಲೇಜು ವಿದ್ಯಾರ್ಥಿಗಳು, ಪೊಲೀಸ್ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘಟನೆಯವರು ಭಾಗವಹಿಸಿದ್ದರು. ಸಂಘಟನೆಯ ಉಚ್ಚೆಂಗೆಪ್ಪ ಪ್ರಾರ್ಥಿಸಿದರು.

- - -

ಬಾಕ್ಸ್‌ ತಮ್ಮ ಆರೋಗ್ಯ, ಸುರಕ್ಷತೆಗಾಗಿ ಲೈಂಗಿಕ ಕಾರ್ಯಕರ್ತರು ಬಳಸಿಕೊಳ್ಳುವ ಕ್ರಮಗಳನ್ನು ಅಪರಾಧವೆಂದು ಪರಿಗಣಿಸಬಾರದು. ಎಲ್ಲ ಇಲಾಖೆ, ಸಾರ್ವಜನಿಕರಿಗೆ ಲೈಂಗಿಕ ಕಾರ್ಮಿಕರ ಸಮುದಾಯವು ಎದುರಿಸುತ್ತಿರುವ ಸವಾಲುಗಳ ಬಗ್ಗೆ, ಅಂತಹವರು ಅನುಭವಿಸುತ್ತಿರುವ ಕಿರುಕುಳ, ಹಿಂಸೆಗಳ ಬಗ್ಗೆ ಸಮಾಜಕ್ಕೆ ಮನವರಿಕೆ ಮಾಡಲು ಮತ್ತು ಪರಿಹಾರ ದೊರಕಿಸಲು ಇಲಾಖೆಗಳು ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ

- ಮಹಾವೀರ ಮ. ಕರೆಣ್ಣವರ, ನ್ಯಾಯಾಧೀಶ

- - - -24ಕೆಡಿವಿಜಿ7:

ದಾವಣಗೆರೆಯಲ್ಲಿ ಬುಧವಾರ ಶ್ರೀ ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಕಾಲತ್ತಿನ ಸಭೆಯನ್ನು ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!