ಕೊಪ್ಪಳ:
ನಗರದ ಪಕ್ಕದಲ್ಲಿಯೇ ತಲೆ ಎತ್ತಲು ಮುಂದಾಗಿರುವ ಬಲ್ಡೋಟಾ ಕಾರ್ಖಾನೆಯನ್ನು ತೊಲಗುವಂತೆ ಸರಣಿ ಹೋರಾಟ ಮಾಡಲು ನಿರ್ಧರಿಸಲಾಗಿದೆ.ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ನಗರದ ಪ್ರವಾಸಿಮಂದಿರದಲ್ಲಿಜಂಟಿ ಕ್ರಿಯಾ ವೇದಿಕೆ ಸಭೆಯಲ್ಲಿ ಬಲ್ಡೋಟಾದ ಎಂಎಸ್ಪಿಲ್ನ ಬಿಎಸ್ಪಿಎಲ್ ಕಾರ್ಖಾನೆ ವಿರುದ್ಧ ಹೋರಾಟದ ರೂಪರೇಷೆ ಸಿದ್ಧಪಡಿಸುವ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ, ಅಂತಿಮವಾಗಿ ಸರಣಿ ಹೋರಾಟ ಮಾಡಲು ಕೊಪ್ಪಳ ಮತ್ತು ಬಾಧಿತ ಪ್ರದೇಶದ ಜನರನ್ನು ಸಜ್ಜುಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.ಕೊಪ್ಪಳದ ೩೧ ಮತ್ತು ಭಾಗ್ಯನಗರದ ೧೯ ಹಾಗೂ ೩೦ ಗ್ರಾಮಗಳಲ್ಲಿ ಪರಿಸರ ಜಾಗೃತಿ ಸಭೆ ನಡೆಸುವುದು, ನಗರದ ಅಶೋಕ ವೃತ್ತದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಪ್ರತಿಯೊಂದು ಸಂಘಟನೆಗಳನ್ನು ಅದರಲ್ಲಿ ತೊಡಗಿಸಿಕೊಳ್ಳುವುದು, ಕ್ಷೇತ್ರದ ೩೦ ಸಾವಿರ ಕುಟುಂಬಗಳಿಂದ, ವಿದ್ಯಾರ್ಥಿಗಳಿಂದ ರಾಷ್ಟ್ರಪತಿ, ಮುಖ್ಯಮಂತ್ರಿ, ಹಸಿರು ನ್ಯಾಯಾಧಿಕರಣಕ್ಕೆ ಮತ್ತು ಬಲ್ಡೋಟಾ ಮಾಲಿಕರಿಗೆ ಒಂದು ಲಕ್ಷ ಪತ್ರ ಬರೆಸುವ ಮೂಲಕ ಪತ್ರ ಚಳವಳಿ ನಡೆಸುವುದು,
ಕೊಪ್ಪಳ ಜಿಲ್ಲಾ ಆಫ್ಸೆಟ್ ಪ್ರಿಂಟರ್ಸ್ ಅಸೋಸಿಯೇಷನ್ ಅವರಿಂದ ಪೋಸ್ಟರ್ ಜಾಗೃತಿ ಅಭಿಯಾನ, ಕೊಪ್ಪಳದಿಂದ ಗಿಣಿಗೇರಾವರೆಗೆ ಸೈಕಲ್ ಜಾಥಾ ಹಾಗೂ ಕೊಪ್ಪಳ ಕಾರ್ಖಾನೆಗಳಿಂದ ಆಗುತ್ತಿರುವ ಪರಿಸರ ಹಾನಿ ಕುರಿತು ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ ಏರ್ಪಡಿಸುವುದು ಸೇರಿದಂತೆ ಸರಣಿ ಹೋರಾಟ ಮಾಡಲು ತೀರ್ಮಾನಿಸಲಾಯಿತು.ಪೇಂಟ್ ಅಭಿಯಾನ ಮುಗಿದ ತಕ್ಷಣ ಹಂತ-ಹಂತವಾಗಿ ಜಾರಿಗೆ ತರಲು ಸಭೆ ಒಕ್ಕೊರಲ ನಿರ್ಣಯ ತೆಗೆದುಕೊಂಡಿದ್ದು, ವಿವಿಧ ಕಾರ್ಯಕ್ರಮಗಳಿಗೆ ಪ್ರತ್ಯೇಕ ಸಮಿತಿ ರಚಿಸಿ, ಜವಾಬ್ದಾರಿ ನೀಡಲು ಸಭೆಯಲ್ಲಿದ್ದವರು ಸಮ್ಮತಿ ನೀಡಿದರು.
ಈ ವೇಳೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಪ್ರಮುಖರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ರಮೇಶ ತುಪ್ಪದ, ಮಹಾಂತೇಶ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಡಾ. ಮಂಜುನಾಥ ಸಜ್ಜನ್, ಸಂತೋಷ ದೇಶಪಾಂಡೆ, ಮುದುಕಪ್ಪ ಹೊಸಮನಿ, ಶಿವಕುಮಾರ ಕುಕನೂರ, ಶರಣು ಪಾಟೀಲ, ಶರಣು ಡೊಳ್ಳಿನ, ಕೇಶವ ಕಟ್ಟಿಮನಿ, ಎಸ್. ಎ. ಗಫಾರ್, ಮಖಬುಲ್ ರಾಯಚೂರ ಇತರರು ಇದ್ದರು.