ಕನ್ನಡಪ್ರಭ ವಾರ್ತೆ ಹರಿಹರ
ಸಾರ್ವಜನಿಕರಿಗೆ ನಗರಸಭೆಯಿಂದ ಖಾತಾ ನವೀಕರಣದಿಂದ ದಾಖಲೆ ಬದಲಾವಣೆಯ ತನಕ ಎಲ್ಲವೂ ಸ್ಥಗಿತವಾಗಿದೆ. ನಿವೇಶನ-ಮನೆ ದಾಖಲೆ ಸಂಬಂಧಿತ ಖಾತಾ ನವೀಕರಣ, ಖಾತಾ ಬದಲಾವಣೆ, ತೆರಿಗೆ ಮಾಹಿತಿ, ನಾಗರಿಕ ದಾಖಲೆಗಳು ಸಾಮಾನ್ಯವಾಗಿ ನಗರಸಭೆಯಲ್ಲಿ ನಡೆಯುವ ಕೆಲಸಗಳೆಲ್ಲವೂ ದೀರ್ಘ ನಿರೀಕ್ಷೆಯ ಪಟ್ಟಿಗೆ ಸೇರಿವೆ. ಸಿಬ್ಬಂದಿ–ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಅಸಹಾಯಕ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ.
ಸಾರ್ವಜನಿಕರು ಇದುವರೆಗೆ ಅಧ್ಯಕ್ಷ, ಉಪಾಧ್ಯಕ್ಷರ ಅಥವಾ ಸದಸ್ಯರ ದುಂಬಾಲು ಬಿದ್ದು ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಆದರೆ ಸದಸ್ಯರ ಅವಧಿ ಮುಗಿದ ಕಾರಣಕ್ಕೆ ಹರಿಹರದ ಉಸ್ತುವಾರಿ ನೋಡಿಕೊಳ್ಳಲು ಯಾವ ಜನಪ್ರತಿನಿಧಿಗಳು ಇಲ್ಲ. ಅವರಿದ್ದಾಗಲೂ ಆಗುತ್ತಿದ್ದ ಕೆಲಸ ಕಾರ್ಯಗಳು ಅಷ್ಟಕಷ್ಟೆ, ಈಗ ಜನಪ್ರತಿನಿಧಿಗಳೂ ಇಲ್ಲ. ಆಡಳಿತಾಧಿಕಾರ ಜಿಲ್ಲೆಗೆ ಸರ್ವರ್ ಪ್ರಾಬ್ಲಂ ಆಗಿ ಜನರು ಪರದಾಡುತ್ತಿದ್ದಾರೆ.ನಗರಸಭೆಯಲ್ಲಿ ಪ್ರಸ್ತುತ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳ ಅವಧಿ ಪೂರ್ಣವಾಗಿ ಖಾಲಿಯಾಗಿವೆ. ಇದರಿಂದ ಸರ್ವರ್ ತೊಂದರೆ, ಜನರ ದೂರಗಳು, ಸಿಬ್ಬಂದಿ ವರ್ತನೆ ಗಮನಿಸಲು ಮೇಲ್ವಿಚಾರಣೆ ಇಲ್ಲದೆ ಜನರ ಗೋಳಾಟ ಯಾರಿಗೂ ಕೇಳುವ ಸ್ಥಿತಿ ಇಲ್ಲವಾಗಿದೆ.
‘ಸಿಟಿಜನ್ ಲಾಗಿನ್’ ನವೀಕರಣಕ್ಕಾಗಿ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜನರು ಮನೆಯಿಂದಲೇ ದಾಖಲೆಗಳನ್ನು ಅಪ್ಲೋಡ್ ಮಾಡಬಹುದಾದ ವ್ಯವಸ್ಥೆ ಬರುತ್ತಿದೆ ಎಂಬುದು ಅಧಿಕಾರಿಗಳ ಉತ್ತರ.