ನಿಸ್ವಾರ್ಥ ಸೇವೆ ಮಾಡುವವರಿಗೆ ಸ್ಪೂರ್ತಿಯ ಸೆಲೆ ನಾವಾಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗ : ನಿಸ್ವಾರ್ಥ ಸೇವೆ ಮಾಡುವವರಿಗೆ ಸ್ಪೂರ್ತಿಯ ಸೆಲೆ ನಾವಾಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಥುರಾ ಪ್ಯಾರಾಡೈಸ್ ನಲ್ಲಿ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಆರೋಗ್ಯ ಭಾರತಿ, ತೀರ್ಥಹಳ್ಳಿ ಎಂಐಒ ಆಸ್ಪತ್ರೆ, ಮಥುರಾ ರಜತೋತ್ಸವ ಸಮಿತಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಕುರಿತ ಜನಜಾಗೃತಿ ಸರಣಿ ಕಾರ್ಯಕ್ರಮದ ಸಮಾರೋಪದಲ್ಲಿ ಸಮಾಜ ಸೇವಕರನ್ನು ಸನ್ಮಾನಿಸಿ ಮಾತನಾಡಿದರು.
ತೀರ್ಥಹಳ್ಳಿಯ ಎಂಐಒ ಕ್ಯಾನ್ಸರ್ ಆಸ್ಪತ್ರೆ, ಶಿವಮೊಗ್ಗದ ಶರಣ್ಯ ಸಂಸ್ಥೆ ಸೇವೆ ಶ್ಲಾಘನೀಯ ಮತ್ತು ನಿಸ್ವಾರ್ಥ ಸೇವೆ ಮಾಡುವವರನ್ನು ಸನ್ಮಾನ ಮಾಡುತ್ತಿರುವುದು ಕೂಡ ದೇವರು ಮೆಚ್ಚುವ ಕೆಲಸ ಎಂದರು.
ಆರ್.ಎಸ್.ಎಸ್. ದಕ್ಷಿಣ ಪ್ರಾಂತ ಸಹ ಕಾರ್ಯನಿರ್ವಾಹಕ ಪಟ್ಟಾಭಿರಾಮ್ ಮಾತನಾಡಿ, ಆರ್.ಎಸ್.ಎಸ್. ಕೂಡ ಸೇವಾ ಸಂಸ್ಥೆಯ ಒಂದು ಭಾಗವೇ ಆಗಿದೆ. ಅದರಲ್ಲೂ ವೈದ್ಯಕೀಯ ಸೇವೆಯನ್ನು ಆರ್.ಎಸ್.ಎಸ್.ನ ಹಲವು ವಿಭಾಗಗಳು ಮಾಡುತ್ತಾ ಬಂದಿವೆ. ಇದು ಅತ್ಯಂತ ಸಂತೋಷದ ವಿಷಯವಾಗಿದೆ. ಈ ದೇಶದಲ್ಲಿ ವಿದ್ಯೆ, ಅನ್ನ, ಆರೋಗ್ಯ ಮುಖ್ಯವಾಗಿದೆ. ಇವು ಮೊದಲು ಉಚಿತವಾಗಿ ಸಿಗುತ್ತಿತ್ತು. ಆದರೆ ಇಂದು ಇವಕ್ಕೆ ಹಣ ಕೊಡಬೇಕಾಗಿದೆ. ಆದರೆ ಅದು ತಪ್ಪಲ್ಲ, ಅದರಲ್ಲೂ ಸೇವೆ ಎಂಬುದು ಇರಬೇಕಾಗುತ್ತದೆ ಎಂದರು.
ತಜ್ಞ ವೈದ್ಯ ಮತ್ತು ಮುಖ್ಯಸ್ಥ ಡಾ. ಸುರೇಶ್ ರಾವ್ ಮಾತನಾಡಿ, ಬಡವರ, ಅಶಕ್ತರಿಗೆ ವೈದ್ಯರು ತಮ್ಮ ಹೃದಯನ್ನು ತೆರೆದಿಡಬೇಕು ಎಂದರು.
ಕ್ಯಾನ್ಸರ್ ಇಂದು ಸುನಾಮಿ ರೀತಿಯಲ್ಲಿ ಮಾನವನನ್ನು ಕಾಡುತ್ತಿದೆ. ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಜನ ಮೃತಪಡುತ್ತಿದ್ದಾರೆ. ಪ್ರತಿ 7 ನಿಮಿಷಕ್ಕೊಬ್ಬರು ಸಾಯುತ್ತಿದ್ದಾರೆ. ಕ್ಯಾನ್ಸರ್ ಕೇವಲ ತಂಬಾಕು ಉತ್ಪನ್ನಗಳಿಂದ ಮಾತ್ರ ಬರುವುದಿಲ್ಲ. ಇದಕ್ಕೆ ಬೇರೆ ಬೇರೆ ರೀತಿಯ ಕಾರಣಗಳೂ ಇವೆ. ಪರಿಸರ, ಆಹಾರ, ಮುಂತಾದವುಗಳು ಇಂದು ಕ್ಯಾನ್ಸರ್ ಬರಲು ಕಾರಣವಾಗುತ್ತಿವೆ. ಭಾರತ ಕ್ಯಾನ್ಸರ್ ನ ಕ್ಯಾಪಿಟಲ್ ಎಂದೇ ಪ್ರಸಿದ್ಧವಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಆಸ್ಪತ್ರೆಗಳು ಕೋಟ್ಯಂತರ ರೂ. ಮೌಲ್ಯದ ಯಂತ್ರಗಳನ್ನು ಖರೀದಿಸಬೇಕಾಗುತ್ತದೆ. 10 ಕೋಟಿ ಯಂತ್ರ ಕೊಂಡರೆ ಎರಡೂವರೆ ಕೋಟಿ ಜಿ.ಎಸ್.ಟಿ. ಕಟ್ಟಬೇಕಾಗುತ್ತದೆ. ಸರ್ಕಾರಗಳು ಇಂತಹ ಉಪಕರಣಗಳಿಗೆ ಜಿ.ಎಸ್.ಟಿ. ಕಡಿಮೆ ಮಾಡಿದರೆ ಬಡವರ ಪರ ಸೇವೆ ಮಾಡಲು ಮತ್ತಷ್ಟು ಅನುಕೂಲವಾಗುತ್ತದೆ ಎಂದರು.
ಹೋಟೆಲ್ ಉದ್ಯಮಿ ಎನ್. ಗೋಪಿನಾಥ್, ಶರಣ್ಯ ಸಂಸ್ಥೆಯ ಡಿ.ಎಲ್. ಮಂಜುನಾಥ್, ಎಂಐಒನ ಮುಖ್ಯಸ್ಥ ಡಾ. ಸುರೇಶ್ ರಾವ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ವಿವಿಧ ತಾಲೂಕು ಕೇಂದ್ರಗಳಲ್ಲಿ ನಡೆದ ಕ್ಯಾನ್ಸರ್ ಕುರಿತ ಜನಜಾಗೃತಿ ಸರಣಿ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಕೆ.ಎಸ್. ಶ್ರೀಧರ್, ಡಾ. ಪಲ್ಲವಿ, ಶಿಬಿರದ ಸಂಚಾಲಕ ಅ.ನಾ. ವಿಜಯೇಂದ್ರರಾವ್, ವಾಗೀಶ್ ಸೇರಿದಂತೆ ಹಲವರಿದ್ದರು.