ತರೀಕೆರೆಯಲ್ಲಿ 71ನೇ ನಿರಂತರ ಉಚಿತ ನೇತ್ರ ಪರೀಕ್ಷೆ-ಶಸ್ತ್ರ ಚಿಕಿತ್ಸಾ ಶಿಬಿರ
ಕನ್ನಡಪ್ರಭ ವಾರ್ತೆ, ತರೀಕೆರೆಜನಪರ ಕಾರ್ಯ ಸ್ತುತ್ಯಾರ್ಹ, ಬಡವರ ಸೇವೆ ಮನದಾಳದಿಂದ ಬರಬೇಕು ಎಂದು ಉಪ ವಿಭಾಗಾಧಿಕಾರಿ ಡಾ.ಕೆ.ಜಿ. ಕಾಂತರಾಜ್ ಹೇಳಿದ್ದಾರೆ.
ಶುಕ್ರವಾರ, ಅರಿವು ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಎಚ್.ಚಂದ್ರಪ್ಪ ಸೇವಾ ಪ್ರತಿಷ್ಠಾನ, ಶಿವಮೊಗ್ಗ ಶಂಕರ್ ಕಣ್ಣಿನ ಅಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಘಟಕ ಚಿಕ್ಕಮಗಳೂರು ಇವರಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜನೆಗೊಂಡಿದ್ದ 71ನೇ ನಿರಂತರ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಇದು ಬಹಳ ವಿಶೇಷ ಕಾರ್ಯಕ್ರಮ. ಅರು ವರ್ಷಗಳಿಂದ ಸತತವಾಗಿ ಪ್ರತಿ ತಿಂಗಳೂ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ನಡೆಯುತ್ತಾ ಬಂದಿರುವುದನ್ನು ಸ್ಮರಿಸಿಕೊಂಡರೆ ಮೈ ರೋಮಾಂಚನವಾಗುತ್ತದೆ. ಎಲ್ಲರಿಗೂ ಸ್ಪೂರ್ತಿ ದಾಯಕ ಮತ್ತು ಸಮಾಜಮುಖಿ ಕಾರ್ಯವಾಗಿದೆ. ವಯಸ್ಸಾದವರಿಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಜನಪರ ಕಾರ್ಯವಾಗಿದೆ ಎಂದು ಹೇಳಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ತಾ.ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಪರ ಚಟುವಟಿಕೆಗಳ ಜೊತೆಗೆ ಸಮಾಜಮುಖಿಯಾಗಿ ನಾಡು ನುಡಿ ಕಟ್ಟುವ ದ್ಯೇಯಯೊಂದಿಗೆ, ಆರೋಗ್ಯ, ಅರಿವು, ವಿದ್ಯೆ, ರಾಷ್ಟ್ರ ಭಕ್ತಿ, ಸಮಾಜ ಸೇವೆ, ಸ್ವಾವಲಂಬನೆ, ಭಾವೈಕ್ಯತೆ, ಜಾತ್ಯಾತೀತ, ಭ್ರಾತೃತ್ವ, ದೇಶಾಭಿಮಾನ, ಭಾಷಾಭಿಮಾನ, ಪರಿಸರ ಪ್ರಜ್ಞೆ, ಧರ್ಮ ಸಹಿಷ್ಣುತೆ, ದುಶ್ಚಟ ನಿರ್ಮೂಲನೆ, ಭಾರತ ಸಂವಿಧಾನಕ್ಕೆ ಗೌರವ ಮತ್ತು ಸಂವಿಧಾನದ ಅನುಷ್ಠಾನ, ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆ ಹಾಗೂ ಪೋಷಣೆ ಕಾರ್ಯಕ್ರಮಗಳನ್ನು ಸರ್ವರ ಸಹಕಾರದಿಂದ 45 ವರ್ಷಗಳಿಂದ ನಿರಂತರವಾಗಿ ನಿರ್ವಹಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.ಸಮಾಜ ಸೇವೆ ಅಂಗವಾಗಿ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಶಿಬಿರದ ಪರಿಕಲ್ಪನೆ ರೂವಾರಿಗಳಾದ ಕನ್ನಡದ ಕಟ್ಟಾಳು ಎಚ್. ಚಂದ್ಪಪ್ಪ, ಸಮಾಜಸೇವಕ ಟಿ.ಬಿ.ಕಾಂತರಾಜು ಪರಿಕಲ್ಪನೆಯ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಶಿಬಿರದ ಕಾರ್ಯಕ್ರಮ ಆರು ವರ್ಷಗಳಿಂದ ಈ ವರೆಗೂ ನಡೆಯುತ್ತಾ ದೃಷ್ಟಿದೋಷವುಳ್ಳ 3000 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ, 12000 ಜನರಿಗೆ ನೇತ್ರ ತಪಾಸಣೆ ನಡೆಸಲಾಗಿದೆ ಎಂದು ವಿವರಿಸಿದರು.ಡಾ.ಮರುಳಸಿದ್ದಯ್ಯ ಪಟೇಲ್ ಮಾತನಾಡಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಿಸ್ವಾರ್ಥ ಮತ್ತು ನಿರಪೇಕ್ಷಿತರಾಗಿದ್ದಾಗ ಮಾತ್ರ ಇಂತಹ ಜನೋಪಯೋಗಿ ಕಾರ್ಯಕ್ರಮ ನಿರಂತರವಾಗಿ ನೆರವೇರಿಸಲು ಸಾಧ್ಯ. ಇಂತಹ ಪ್ರಯತ್ನದಲ್ಲಿ ಹಿರಿಯ ಸಮಾಜ ಸೇವಕರು ಮತ್ತು ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ ಹಾಗೂ ಯಶಸ್ಸು ಕಂಡಿರುವ ಸಂಘ ಸಂಸ್ಥೆಗಳ ಪದಾದಿಕಾರಿಗಳು ಅಭಿನಂದನಾರ್ಹರು ಎಂದು ತಿಳಿಸಿದರು.ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಕನ್ನಡ ಸಾಹಿತ್ಯದಲ್ಲಿ ಕನ್ನಡಿಗರ ಶ್ರೇಯೋಭಿವೃದ್ಧಿಯೂ ಜನಪರ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಸಾಕ್ಷಿ. ಇಂದಿನ ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡದ ಕಟ್ಟಾಳು ಎಚ್. ಚಂದ್ರಪ್ಪ ಮಾರ್ಗದರ್ಶದಲ್ಲಿ ರೂಪುಗೊಂಡ ಮಿತ್ರ ಬಳಗದಲ್ಲಿ ನನಗೂ ಸಾಹಿತ್ಯ ಮತ್ತು ಸಮಾಜ ಸೇವೆ ಮಾಡುವ ಸುಯೋಗ ದೊರೆತದ್ದು ಸಂತೋಷ ತಂದಿದೆ ಎಂದು ಹೇಳಿದರು.ಲೇಖತ ತ.ಮ. ದೇವಾನಂದ್, ಶಿವಮೊಗ್ಗ ಶಂಕರ್ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ.ಸಲ್ಮಾನ್ ಘಾಟಿನವರ್, ಗಾಯಕ ಬಿ.ಎಸ್.ಕೃಷ್ಣಸ್ವಾಮಿ, ಕ್ರಿಸ್ತ ದಯಾಕುಮಾರ್,ವಿಶ್ವಚಂದ್ರ, ಕಲ್ಯಾಣ್ ಕುಮಾರ್ ನವಲೆ, ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.-
6ಕೆಟಿಆರ್.ಕೆ.8ಃತರೀಕೆರೆಯಲ್ಲಿ ಏರ್ಪಾಡಾಗಿದ್ದ 71ನೇ ನಿರಂತರ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಉದ್ಘಾಟನೆಯನ್ನು ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ನೆರವೇರಿಸಿದರು.