ಬಂಜರು ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ

KannadaprabhaNewsNetwork | Updated : Sep 15 2024, 01:55 AM IST

ಸಾರಾಂಶ

ದಾಬಸ್‌ಪೇಟೆ: ಒಬ್ಬ ಸಂಸದನಿಗೆ ವಾರ್ಷಿಕವಾಗಿ 5 ಕೋಟಿ ಅನುದಾನವಷ್ಟೇ ಬಿಡುಗಡೆಯಾಗುತ್ತದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಗೆ ವಾರ್ಷಿಕವಾಗಿ 60 ಲಕ್ಷ ಹಣ ಹಂಚಿಕೆ ಮಾಡಬೇಕಾಗುತ್ತದೆ. ಸ್ಥಳೀಯವಾಗಿ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಪಾಲು ಹೆಚ್ಚೆಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ದಾಬಸ್‌ಪೇಟೆ: ಒಬ್ಬ ಸಂಸದನಿಗೆ ವಾರ್ಷಿಕವಾಗಿ 5 ಕೋಟಿ ಅನುದಾನವಷ್ಟೇ ಬಿಡುಗಡೆಯಾಗುತ್ತದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಗೆ ವಾರ್ಷಿಕವಾಗಿ 60 ಲಕ್ಷ ಹಣ ಹಂಚಿಕೆ ಮಾಡಬೇಕಾಗುತ್ತದೆ. ಸ್ಥಳೀಯವಾಗಿ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಪಾಲು ಹೆಚ್ಚೆಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ತ್ಯಾಮಗೊಂಡ್ಲು ಹೋಬಳಿಯ ಬಳ್ಳಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ 1500 ಎಕರೆ ರೈತರ ಜಮೀನನ್ನು ಕೆಐಎಡಿಬಿ ವಶಪಡಿಸಿಕೊಳ್ಳಲು ತಯಾರಾಗಿದೆ. ಕೈಗಾರಿಕೆ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ಆದರೆ, ಕೃಷಿ ಜಮೀನು ಬದಲಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಸಾಕಷ್ಟು ಬಂಜರು ಭೂಮಿ ಇದೆ. ಇಂತಹ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಬೇಕು. ಕೃಷಿ ಭೂಮಿಯನ್ನು ಕೃಷಿಗೆ ಮೀಸಲಿಡಬೇಕೆಂದು ಮುಖ್ಯಮಂತ್ರಿಗಳು ಹಾಗೂ ಸಚಿವರ ಗಮನಕ್ಕೆ ತರುತ್ತೇನೆ ಎಂದು ಸುಧಾಕರ್‌ ರೈತರಿಗೆ ಭರವಸೆ ನೀಡಿದರು.

ಮಾಜಿ ಶಾಸಕ ಎಂ.ವಿ.ನಾಗರಾಜು ಮಾತನಾಡಿ, ಕೆಐಎಡಿಬಿಯೂ ಕೈಗಾರಿಕಾ ಅಭಿವೃದ್ಧಿಗೆ ಜಮೀನುಗಳನ್ನು ವಶಪಡಿಸಿಕೊಳ್ಳುತ್ತಿದೆ. ನಮ್ಮ ಸಂಸದರು ಭೂಸ್ವಾಧೀನವಾಗದಂತೆ ತಡೆಯಲು ಪ್ರಯತ್ನಿಸುತ್ತಾರೆ. ಒಂದು ವೇಳೆ ಆಗದೇ ಇದ್ದರೆ ಭೂ ಪರಿಹಾರ ಪಡೆಯದೇ ಅಭಿವೃದ್ಧಿ ಹೊಂದಿದ ಭೂಮಿಯನ್ನು ಪಡೆದು ನೀವೇ ಸ್ವಯಂ ಉದ್ಯೋಗಿಗಳಾಗಿ ಬೆಳೆಯಿರಿ ಎಂದು ಹೇಳಿದರು.

ಬಿಜೆಪಿ ಮುಖಂಡ ಸಪ್ತಗಿರಿ ಶಂಕರ್ ನಾಯಕ್ ಮಾತನಾಡಿ, ಕೆಐಎಡಿಬಿ ವತಿಯಿಂದ ಮನಸೋ ಇಚ್ಚೆ ಭೂಸ್ವಾದೀನವನ್ನು ತಡೆಯಬೇಕು. ಆರ್ಥಿಕ ಬಲಹೀನರನ್ನು ಮೊದಲು ಕೆಐಎಡಿಬಿ ಬಲೆ ಬೀಸಿ ಜಮೀನು ವಶಪಡಿಸಿಕೊಳ್ಳುತ್ತಿದೆ. ಕೊಡಿಗೇಹಳ್ಳಿ ಸುತ್ತಮುತ್ತಲಿನ ರೈತರು ಕಂಗಾಲಾಗಿದ್ದಾರೆ ಎಂದರು.

ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಮಾತನಾಡಿ, ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳು ಸ್ಥಾಪನೆಯಾಗಲು ಬಿಡುವುದಿಲ್ಲ. ನಮ್ಮ ಸಂಸದರ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸಿ ರೈತರ ಜಮೀನುಗಳ ಬಳಿ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಮಾಜಿ ಶಾಸಕ ಎಂ.ವಿ.ನಾಗರಾಜು, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ಭೃಂಗೇಶ್, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಚನ್ನೇಗೌಡ, ಗುರುಪ್ರಕಾಶ್, ರಂಗಸ್ವಾಮಿ, ಮಹಿಳಾ ಮುಖಂಡರಾದ ರಾಜಮ್ಮ, ಸೌಮ್ಯ, ಮಂಜುಳಾ, ವೇದಾವತಿ, ಶೀಲಾ, ಮಂಗಳಮ್ಮ, ಮಂಜುಳಾ ಇತರರಿದ್ದರು.

ಪೋಟೋ 7 :

ತ್ಯಾಮಗೊಂಡ್ಲು ಹೋಬಳಿಯ ಬಳ್ಳಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರೈತರ ಸಭೆಯನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಉದ್ಘಾಟಿಸಿದರು.

Share this article