ಹುಬ್ಬಳ್ಳಿ: ಯಾವುದೇ ಸಂಘಟನೆಗೆ 25 ವರ್ಷ ದೊಡ್ಡದಲ್ಲ. ಈ ಸಣ್ಣ ಸೀಮಿತ ಅವಧಿಯಲ್ಲಿ ಅನೇಕ ರೀತಿಯ ಸೇವೆಗಳು ಸಮಾಜಕ್ಕೆ ಮುಟ್ಟುವಂತೆ ಸೇವಾ ಭಾರತಿ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸಂಘದ ಪ್ರೇರಣೆಯಿಂದ ಹುಟ್ಟಿಕೊಂಡ ಸೇವಾ ಭಾರತಿ ಯಾರಿಗೆ ಸೇವೆಯ ಅವಶ್ಯಕತೆ ಇದೆಯೋ ಅಂಥವರಿಗೆ ಮೊದಲು ಹಸ್ತ ಚಾಚುತ್ತ ಇಂದು ಹೆಮ್ಮರವಾಗಿ ಬೆಳೆದಿದೆ. ಎಲ್ಲರಿಗೂ ಸಮಾನ ಅವಕಾಶ, ಶಿಕ್ಷಣ ದೊರೆಯುವಂತೆ ಮಾಡುವುದೇ ಸೇವಾ ಭಾರತಿಯ ಪರಮೋದ್ದೇಶ ಎಂದರು.
ಸೇವಾ ಭಾರತಿಯಡಿ ಕಾರ್ಯ ನಿರ್ವಹಿಸುತ್ತಿರುವ ಬಾಲಕಲ್ಯಾಣ ಕೇಂದ್ರದಲ್ಲಿ ಬೆಳೆದ ಹೆಣ್ಣು ಮಕ್ಕಳು, ಇಂದು ಸಾವಿರಾರು ಮನೆಯ ದೀಪ ಬೆಳಗುತ್ತಿದ್ದಾರೆ. ಗಂಡನ ಮನೆಯಲ್ಲಿ ಅತ್ಯಂತ ಸಂಸ್ಕಾರಯುತವಾಗಿ ನಡೆದುಕೊಳ್ಳುವ ಮೂಲಕ ಮಕ್ಕಳಿಗೂ ಉತ್ತಮ ಸಂಸ್ಕಾರ ನೀಡುತ್ತಿದ್ದಾರೆ ಎಂದರು.ಆರ್ಎಸ್ಎಸ್ನ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಮಾತನಾಡಿ, ಸಮಾಜದ ದಯನೀಯ ಸ್ಥಿತಿಯನ್ನು ಬಳಸಿಕೊಂಡು ಕೆಲ ಮಷಿನರಿಗಳು ಸೇವೆಯ ಹೆಸರಿನಲ್ಲಿ ಸಮಾಜವನ್ನು ದಾಸ್ಯಕ್ಕೆ ಕೆಡವುತ್ತಿವೆ. ಆದರೆ, ಇದರ ತದ್ವಿರುದ್ದ ಕೆಲಸ ಆರ್ಎಸ್ಎಸ್ ನದ್ದು. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳಿಂದ ಶತ ಶತಮಾನಗಳ ಹಿಂದೆ ಭಾರತ ವಿಶ್ವಗುರುವಾಗಿತ್ತು. ಅದನ್ನು ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಸದ್ಯ ಸಂಘಪರಿವಾರ ಕಾರ್ಯ ಪ್ರವೃತ್ತವಾಗಿದೆ ಎಂದರು.
ರಾಷ್ಟ್ರೀಯ ಸೇವಾ ಭಾರತಿ ಅಧ್ಯಕ್ಷ ಸುನೀಲ ಸಪ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅದಕ್ಕೂ ಮುನ್ನ ಪಂ. ಜಯತೀರ್ಥ ಮೇವುಂಡಿ ಅವರಿಂದ ಸ್ವರಸೇವಾ ಸಂಗೀತ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ವಿದ್ಯಾ ವಿಕಾಸ ಪ್ರಕಲ್ಪ ಶಿಕ್ಷಕರ "ರಜತ ಪಥ " ಕೈಪಿಡಿ ಬಿಡುಗಡೆಗೊಳಿಸಲಾಯಿತು.