ಸೇವಾಯೋಗಿ ಕಾಯಕ ಶರಣ ಹಡಪದ ಅಪ್ಪಣ್ಣ: ಸಾವಿತ್ರಿ ಮುಜಮದಾರ

KannadaprabhaNewsNetwork |  
Published : Jul 22, 2024, 01:22 AM IST
21ಕೆಪಿಎಲ್22 ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮ | Kannada Prabha

ಸಾರಾಂಶ

ಹಡಪದ ಅಪ್ಪಣ್ಣನವರು ಸೇವಾಯೋಗಿ, ಕಾಯಕ ಶರಣರಾಗಿದ್ದರು.

ಜಿಲ್ಲಾಡಳಿತದಿಂದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ । ವಿಶೇಷ ಉಪನ್ಯಾಸ

ಕನ್ನಡಪ್ರಭ ವಾರ್ತೆ ಕೊಪ್ಪಳ

ಹಡಪದ ಅಪ್ಪಣ್ಣನವರು ಸೇವಾಯೋಗಿ, ಕಾಯಕ ಶರಣರಾಗಿದ್ದರು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕೊಪ್ಪಳ ತಾಲ್ಲೂಕು ಅಧ್ಯಕ್ಷ ಸಾವಿತ್ರಿ ಮುಜಮದಾರ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ವಚನ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನಮಾನವಿದೆ. ವಚನ ಸಾಹಿತ್ಯಕ್ಕೆ ಶಿವಶರಣರ ಕೊಡುಗೆ ಅಪಾರವಾಗಿದೆ. ಶರಣರು ತಮ್ಮ ಕಾಯಕದ ಜೊತೆಗೆ ವಚನಗಳ ಮೂಲಕ ಸಾಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಇಂತಹ ಮಹನೀಯರಲ್ಲಿ ಅಪ್ಪಣ್ಣನವರು ಒಬ್ಬರು. ತಮ್ಮದೇ ಆದ ಆದರ್ಶಗಳೊಂದಿಗೆ ಅನುಭವಮಂಟಪದಂತಹ ಮಹಾ ಮನೆಯ ಸದಸ್ಯರಾಗಿದ್ದ ಅಪ್ಪಣ್ಣನವರು ಬಸವಣ್ಣನವರ ಕಾಲದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹಡಪದ ಎಂದರೆ, ಎಲೆ ಅಡಿಕೆ ಚೀಲ ಎಂದರ್ಥ, ಅನುಭವ ಮಂಟಪದಲ್ಲಿ ಎಲೆ ಅಡಿಕೆ ಚೀಲ ಇಟ್ಟುಕೊಂಡಿದ್ದ ಅಪ್ಪಣ್ಣನವರಿಂದ ಎಲ್ಲರೂ ಎಲೆ ಅಡಿಕೆ ಪಡೆಯಬೇಕಾಗಿತ್ತು. ಇದರಿಂದಾಗಿ ಅಪ್ಪಣ್ಣನವರಿಗೆ ಹಡಪದ ಅಪ್ಪಣ್ಣ ಎಂದು ಕರೆಯಲಾಯಿತು. ಹಡಪದ ಅಪ್ಪಣ್ಣನವರು ಭಕ್ತಿ ದಾಸೋಹ, ಕಾಯಕ ತತ್ವವನ್ನು ಪಾಲಿಸಿ ಬಸವಣ್ಣನವರ ಅನುಯಾಯಿಯಾಗಿ ಶರಣ ತತ್ವದಲ್ಲಿ ಬದುಕಿದವರು. ಸಮಾಜದಲ್ಲಿ ಎಲ್ಲರೂ ಸಮಾನರಾಗಿದ್ದು, ಯಾವುದೇ ತಾರತಮ್ಯ ಮಾಡದೇ ಎಲ್ಲರನ್ನು ಗೌರವದಿಂದ ಕಾಣಬೇಕು ಎಂದರು.

ಸಮಾಜದ ಜಿಲ್ಲಾ ಅಧ್ಯಕ್ಷ ಮಂಜುನಾಥ ಹಂದ್ರಾಳ ಮಾತನಾಡಿ, ಶರಣರು ಸಮಾಜದ ಒಳಿತಿಗಾಗಿ ಶ್ರಮಿಸಿ, ಮಾನವನ ಜೀವನ ಶೈಲಿ ಹಾಗೂ ಜೀವನಕ್ಕೆ ಬೇಕಾಗುವ ಅಗತ್ಯ ಅಂಶಗಳನ್ನು ತಮ್ಮ ವಚನಗಳ ಮೂಲಕ ನೀಡಿದ್ದಾರೆ. ಅಂತಹ ಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು. ಸಂಘಟನೆಯು ಸಮಾಜಕ್ಕೆ ಮುಖ್ಯವಾಗಿದೆ ಹಾಗೂ ಪೂರ್ವಜರ ಪರಿಶ್ರಮವು ಸಹ ಸಮಾಜಕ್ಕೆ ಬುನಾದಿಯಾಗಿದೆ. ಇವುಗಳನ್ನು ಕಾಪಾಡಿಕೊಂಡು ಹೋಗುವುರದ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ಬಸಪ್ಪ ಹಲಗೇರಿ, ಶರಣಪ್ಪ ಬನ್ನಿಕೊಪ್ಪ, ಶಿವಾಜಿ, ಬಾಳಪ್ಪ ವಕೀಲರು, ನಿಂಗಪ್ಪ ಸೇರಿದಂತೆ ಮತ್ತಿತರರಿದ್ದರು.

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಮೆರವಣಿಗೆ:ಹಡಪದ ಅಪ್ಪಣ್ಣನವರ ಜಯಂತಿ ಅಂಗವಾಗಿ ಬೆಳಗ್ಗೆ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣರ ಭಾವಚಿತ್ರದ ಮೆರವಣಿಗೆಗೆ ಸಂಸದ ಕೆ. ರಾಜಶೇಖರ ಹಿಟ್ನಾಳ ಚಾಲನೆ ನೀಡಿದರು. ಮೆರವಣಿಗೆಯು ಕೊಪ್ಪಳ ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಿಂದ ಆರಂಭಗೊಂಡು, ಗಡಿಯಾರ ಕಂಬ ಮಾರ್ಗವಾಗಿ ಜವಾಹರ ರಸ್ತೆ ಮೂಲಕ ಅಶೋಕ ವೃತ್ತ, ಸಾಹಿತ್ಯ ಭವನದವರೆಗೆ ಅದ್ಧೂರಿಯಾಗಿ ಜರುಗಿತು. ಪೂರ್ಣಕುಂಭ, ಕಲಾತಂಡಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ