ಎಲ್ಲರಲ್ಲೂ ಸೋದರತೆಯ ಭಾವನೆ ಮೂಡಿಸಿದವರು ಸೇವಾಲಾಲ್: ಶೇಷನಾಯಕ್ ಅಭಿಪ್ರಾಯ

KannadaprabhaNewsNetwork |  
Published : Feb 17, 2025, 12:34 AM IST
16ಶಿರಾ1: ಶಿರಾ ನಗರದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತ ಹಾಗೂ ಶಿರಾ ತಾಲ್ಲೂಕು ಲಂಬಾಣಿ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ನಡೆದ 286 ನೇ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಶೇಷಾನಾಯಕ್ ಸೇರಿದಂತೆ ಹಲವರು ಪುಷ್ಪಾರ್ಚನೆ ಸಲ್ಲಿಸಿದರು. | Kannada Prabha

ಸಾರಾಂಶ

ಸಮಾಜದಲ್ಲಿ ಸತ್ಯ, ನ್ಯಾಯದಿಂದ ಕಷ್ಟಪಟ್ಟು ದುಡಿದು ಬದುಕುವವರು ಬಂಜಾರ ಸಮುದಾಯದವರು. ನಂಬಿಕೆಗೆ ಅರ್ಹರೆಂದೇ ಬಿಂಬಿತವಾಗಿರುವ ನಮ್ಮ ಸಮುದಾಯದ ಸಂಪ್ರದಾಯ ವಿಶಿಷ್ಟವಾಗಿದೆ. ನಾವು ನೀರಿನ ಗುಣದವರು ಎಲ್ಲರೊಂದಿಗೂ ಸ್ನೇಹಭಾವದಿಂದ ಇರುತ್ತೇವೆ.

ಕನ್ನಡಪ್ರಭ ವಾರ್ತೆ ಶಿರಾ

ಸಂತ ಸೇವಾಲಾಲ್ ಅವರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನ ಮಾರ್ಗ ತೋರಿಸಿದವರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೇಪಿಸಿದರು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಬಂಜಾರ ಸಮುದಾಯದವರು ಸಾಗಬೇಕು. ಎಲ್ಲರೂ ಒಗ್ಗಟ್ಟಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಶಿರಾ ತಾಲೂಕು ಲಂಬಾಣಿ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್.ಶೇಷ ನಾಯಕ್ ಹೇಳಿದರು.

ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ಹಾಗೂ ಶಿರಾ ತಾಲೂಕು ಲಂಬಾಣಿ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ನಡೆದ 286ನೇ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಶ್ರೀ ಸಂತ ಸೇವಾಲಾಲ್ ಅವರು ಬಂಜಾರ ಸಮುದಾಯದ ಬೆಳಕಾಗಿದ್ದಾರೆ. ಅವರು ಸಮುದಾಯಕ್ಕೆ ಶಿಕ್ಷಣದ ಮಹತ್ವ ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನ ಪಡೆಯಲು ಪ್ರೇರಕಶಕ್ತಿಯಾಗಿದ್ದಾರೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರಾಜಾನಾಯಕ್ ಮಾತನಾಡಿ, ಸಮಾಜದಲ್ಲಿ ಸತ್ಯ, ನ್ಯಾಯದಿಂದ ಕಷ್ಟಪಟ್ಟು ದುಡಿದು ಬದುಕುವವರು ಬಂಜಾರ ಸಮುದಾಯದವರು. ನಂಬಿಕೆಗೆ ಅರ್ಹರೆಂದೇ ಬಿಂಬಿತವಾಗಿರುವ ನಮ್ಮ ಸಮುದಾಯದ ಸಂಪ್ರದಾಯ ವಿಶಿಷ್ಟವಾಗಿದೆ. ನಾವು ನೀರಿನ ಗುಣದವರು ಎಲ್ಲರೊಂದಿಗೂ ಸ್ನೇಹಭಾವದಿಂದ ಇರುತ್ತೇವೆ. ರಾಜಮಹಾರಾಜರ ಕಾಲದಲ್ಲಿ ಚಿನ್ನ, ಬೆಳ್ಳಿಯ ಒಡವೆಗಳನ್ನು ನಮ್ಮ ಸಮುದಾಯದ ಮಹಿಳೆಯರು ಧರಿಸಿ ಒಂದು ಊರಿನಿಂದ ಮತ್ತೊಂದು ಊರಿಗೆ ಸಂಚರಿಸುತ್ತಿದ್ದರು. ಆದ್ದರಿಂದಲೇ ಇಂದಿಗೂ ನಮ್ಮ ಹೆಣ್ಣು ಮಕ್ಕಳು ತಮ್ಮ ವಸ್ತ್ರದ ಮೇಲೆ ವಿಶಿಷ್ಟವಾದ ಅಲಂಕಾರ ಮಾಡಿರುತ್ತಾರೆ. ನಮ್ಮ ಅಸ್ತಿತ್ವ, ಸಂಪ್ರದಾಯ ಉಳಿಯಬೇಕು. ಸಂತ ಸೇವಾಲಾಲ್ ಅವರ ಆದರ್ಶ ಎಲ್ಲರೂ ಪಾಲಿಸಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜ ಮಾತನಾಡಿ, ಸಂತ ಸೇವಾಲಾಲ್ ಅವರು ನಮ್ಮ ನಾಡಿನಲ್ಲಿ ನೆಲೆಸಿದ್ದರು ಎಂಬುದೇ ನಮಗೆ ಹೆಮ್ಮೆಯ ವಿಚಾರ. ಇವರಂತೆ ಹಲವು ಮಹನೀಯರ ವಿಚಾರಧಾರೆಗಳನ್ನು ನಾವು ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಗಳು ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.

ಮಾಜಿ ತಾಪಂ ಸದಸ್ಯೆ ಕೆ. ಆರ್. ಮಂಜುಳಾ ಬಾಯಿ ಮಾತನಾಡಿ, ಶ್ರೀ ಸಂತ ಸೇವಾಲಾಲ್ ಅವರು ತಮ್ಮ ಜೀವನದ ಅನುಭವವನ್ನು ಧಾರೆ ಎರೆಯುತ್ತಾ ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜ, ಸಂಘದ ಪದಾಧಿಕಾರಿಗಳಾದ ಮೇಘ್ಯಾನಾಯ್ಕ, ಲಕ್ಷ್ಮಣ ನಾಯ್ಕ, ಬಾಬು ನಾಯ್ಕ, ಚಂದ್ಯಾನಾಯ್ಕ,ಚಂಪಕಮಾಲ, ರಾಜಮ್ಮ ಚಂದ್ರ ನಾಯ್ಕ, ಭಿಮಾನಾಯ್ಕ, ಕುಮಾರ್ ನಾಯ್ಕ, ಮಹೇಶ್ ನಾಯ್ಕ, ಹಾಮಾನಾಯ್ಕ, ಗೋಪಾಲ್ ನಾಯ್ಕ, ಪರಶುರಾಮ್ ನಾಯ್ಕ, ಆನಂದ್ ಕುಮಾರ್, ಸತೀಶ್, ರಾಮಕೃಷ್ಣನಾಯ್ಕ, ನಾಗರಾಜ್ ನಾಯ್ಕ, ವೆಂಕಟರಾಮ್ ನಾಯ್ಕ, ಅಂಜನ್ ಕುಮಾರ್, ದೇಶ್ಯಾ ನಾಯ್ಕ, ನಾರಾಯಣ್ ನಾಯ್ಕ, ಜಗದೀಶ್ ನಾಯ್ಕ, ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಂಜನ್ ಕುಮಾರ್, ಮುಖಂಡರಾದ ಪೆದ್ದರಾಜು, ಬಗರ್ ಹುಕುಂ ಸಮಿತಿ ಸದಸ್ಯ ಮದ್ದಕ್ಕನಹಳ್ಳಿ ತಿಪ್ಪೇಸ್ವಾಮಿ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV