ಜಿ. ದೇವರಾಜ ನಾಯ್ದು
ಕನ್ನಡಪ್ರಭ ವಾರ್ತೆ ಹನೂರುಶತಮಾನದಂಚಿನಲ್ಲಿರುವ ಶಾಲೆ ಮಳೆ ಬಂದರೆ ಶಾಲೆಯ ಕೊಠಡಿ ಒಳಗೆ ನೀರು ಸುರಿಯುತ್ತದೆ. ಶಾಲೆಯಲ್ಲಿ ಕೊಠಡಿ ಕೊರತೆಯಿದ್ದು, ಹಳೆಯ ಕೊಠಡಿ ಕೆಡವಿ ಹೊಸ ಕೊಠಡಿ ನಿರ್ಮಾಣಕ್ಕೆ ಇಲಾಖೆಗೆ ಪತ್ರ ಬರೆದಿದ್ದರೂ ಸಹ ಹೊಸ ಕೊಠಡಿಗಳು ನಿರ್ಮಾಣವಾಗಿಲ್ಲ.
ಹನೂರು ಶೈಕ್ಷಣಿಕ ವಲಯದ ಸರ್ಕಾರಿ ಉನ್ನತಿಕರಿಸಿದ ಶಾಗ್ಯ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 180 ವಿದ್ಯಾರ್ಥಿಗಳಿದ್ದು 11 ಕೊಠಡಿಗಳಲ್ಲಿ 9 ಕೊಠಡಿಗಳು ಶಿಥಿಲ ವ್ಯವಸ್ಥೆಯಲ್ಲಿದ್ದು ಮಳೆ ಬಂದರೆ ಸೋರುತ್ತದೆ. ಜೊತೆಗೆ ಮಕ್ಕಳು ರಕ್ಷಣೆ ಇಲ್ಲದೆ ಪಾಳು ಬಿದ್ದ ಕೊಠಡಿಗಳಲ್ಲೇ ಸುರಕ್ಷತೆ ಇಲ್ಲದೆ ಪಾಠ ಪ್ರವಚನ ಕೇಳಬೇಕಾಗಿದೆ.ಶಾಗ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ 180ಕ್ಕೂ ವಿದ್ಯಾರ್ಥಿಗಳು ಈ ಸರ್ಕಾರಿ ಶಾಲೆಯನ್ನು ಅವಲಂಬಿಸಿದ್ದು ಶತಮಾನದ ಅಂಚಿನಲ್ಲಿರುವ ಹಳೆಯ ಕಾಲದ ಕೊಠಡಿಗಳಲ್ಲೇ ಮಕ್ಕಳು ಪಾಠ ಪ್ರವಚನ ಕೇಳುವಂತಾಗಿದೆ. ವಿಧಿ ಇಲ್ಲದೆ ಶಿಕ್ಷಕರು ಸಹ ಕೊಠಡಿಗಳ ಕೊರತೆ ಇರುವುದರಿಂದ ಪಾಳು ಕೊಂಪೆಯಂತಾಗಿರುವ ಸೀಮೆ ಅಂಚಿನ ಕೊಠಡಿಯ ಮೇಲ್ಚಾವಣಿಗಳ ಹೆಂಚುಗಳು ಬೀಳುವಂತಿದ್ದರೂ ಸಹ ಅಭದ್ರತೆಯಿಂದ ಕೂಡಿರುವ ಕೊಠಡಿಗಳಲ್ಲೇ ಸುರಕ್ಷತೆ ಇಲ್ಲದೆ ಮಕ್ಕಳು ಪಾಠ ಪ್ರವಚನ ಕೇಳುವಂತಾಗಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪಾಠ ಪ್ರವಚನ ಕೇಳಲು ತೊಂದರೆ ಉಂಟಾಗಿದ್ದು, ಮಳೆಯ ನೀರಿನಲ್ಲಿ ನೆನೆದು ಸುರಕ್ಷತೆ ಇಲ್ಲದೆ ಇರುವ ಕೊಠಡಿಗಳನ್ನು ಕೆಡವಿ ನೂತನ ಕೊಠಡಿಗಳನ್ನು ನಿರ್ಮಾಣ ಮಾಡಲು ಹಲವರು ಬಾರಿ ಇಲಾಖೆಗೆ ಇಲ್ಲಿನ ಮುಖ್ಯೋಪಾಧ್ಯಾಯರು ಮತ್ತು ಗ್ರಾಮ ಪಂಚಾಯತಿ ವತಿಯಿಂದ ಮನವಿ ಮಾಡಲಾಗಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ.ಹಾನಿಗೂ ಮುನ್ನ ಎಚ್ಚೆತ್ತುಕೊಳ್ಳಿ: ಶತಮಾನದಂಚಿನಲ್ಲಿರುವ ಹಳೆಯ ಕಟ್ಟಡಗಳನ್ನು ಕೆಡವಿ ಹೊಸ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿ ಭದ್ರತೆ ರೂಪಿಸಬೇಕಾದ ಶಿಕ್ಷಣ ಇಲಾಖೆ ಅಭದ್ರತೆಯಿಂದ ಇರುವ ಹಳೆಯ ಕಾಲದ ಹೆಂಚಿನ ಮನೆಗಳ ಮೇಲೆ ಛಾವಣಿ ಕುಸಿಯುವ ಹಂತದಲ್ಲಿದೆ. ಮಕ್ಕಳ ಮೇಲೆ ಕೊಠಡಿಗಳು ಕುಸಿದು ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳುವ ಮೂಲಕ ಇತ್ತ ಗಮನ ಹರಿಸಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.