ಕನ್ನಡಪ್ರಭ ವಾರ್ತೆ ಮೂಡಲಗಿ
ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಉಚಿತ ಪ್ರಯಾಣದಿಂದಾಗಿ ಅತಿಹೆಚ್ಚು ಮಹಿಳಾ ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಬಸ್ ಮೇಲೆ ಅವಲಂಬಿತರಾಗಿದ್ದ ಪುರುಷ ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳು ಇದರಿಂದ ಸಾಕಷ್ಟು ತೊಂದರೆಗೊಳಗಾಗಿದ್ದಾರೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.ಅರಭಾವಿ ವಿಧಾನಸಭಾ ಮತಕ್ಷೇತ್ರದ ಕಳ್ಳಿಗುದ್ದಿ, ಮನ್ನಿಕೇರಿ, ಬಗರನಾಳ, ಗೋಸಬಾಳ ಗ್ರಾಮಗಳಲ್ಲಿ ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದಲ್ಲಿ ಅನುದಾನ ಇಲ್ಲದ ಕಾರಣ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಾಣ ಮಾಡಲು ಕೂಡಾ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಸದರ ನಿಧಿಯಲ್ಲಿ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ನಾನು ಬಸ್ ತಂಗುದಾಣಗಳನ್ನು ನಿರ್ಮಿಸಿಕೊಡುತ್ತಿದ್ದು ಸಾರ್ವಜನಿಕರ ಇದರ ಅನುಕೂಲ ಪಡೆದುಕೊಳ್ಳಬೇಕೆಂದರು.ಸಂಸದರ ನಿಧಿಯು ಗ್ರಾಮೀಣ ಪ್ರದೇಶ ಜನರ ಅಗತ್ಯಗಳನ್ನು ತಕ್ಷಣ ಪೂರೈಸುವ ಒಂದು ಅಕ್ಷಯ ಪಾತ್ರೆಯಾಗಿದೆ. ಈ ನಿಧಿಯಡಿ ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಸ್ಮಾರ್ಟ್ ಕ್ಲಾಸ್, ಆರೋಗ್ಯ ಕ್ಷೇತ್ರದಲ್ಲಿ, ಜಿಮ್, ಆಂಬ್ಯುಲೆನ್ಸ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮುದಾಯ ಭವನ, ಸಂಗೀತ ಕ್ಷೇತ್ರದಲ್ಲಿ ರಂಗ ಮಂದಿರ, ಪ್ರಯಾಣಿಕರಿಗೆ ಬಸ್ ತಂಗುದಾಣ ಹೀಗೆ ಹಲವಾರು ರೀತಿಯ ಕೆಲಸಗಳನ್ನು ಒದಗಿಸಿ ಕೊಡುವ ಮೂಲಕ ಗ್ರಾಮೀಣ ಜನರ ಸಹಾಯಕ್ಕೆ ಬರುತ್ತಾ ಇದ್ದೀನಿ. ನಮ್ಮ ಗ್ರಾಮೀಣ ಭಾಗದ ರೈತರು ಮತ್ತು ಕೂಲಿಕಾರರು ತಾಲೂಕು ಕೇಂದ್ರಗಳಿಗೆ ಹೋಗಿ ಬರಲು ಬಸ್ಗಾಗಿ ದಾರಿ ಕಾಯುವ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಈ ವೇಳೆ ಕಳ್ಳಿಗುದ್ದಿ ಗ್ರಾಮದ ಎಲ್.ಆರ್.ಕಮಲದಿನ್ನಿ, ಎಲ್.ಆರ್.ಸಂತ್ರಿ, ಲಕ್ಷ್ಮಣ ಹಿರಡ್ಡಿ, ಹನುಮಂತ ಹಿರಡ್ಡಿ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚನ್ನಾಳ, ಭೀಮಶೆಪ್ಪ ಸಿಂತ್ರಿ, ಸಿದ್ದಪ್ಪ ಬಿಸಗುಪ್ಪಿ, ಬಸವರಾಜ ಗಾಡವಿ, ಬಸವರಾಜ ಅಂಗಡಿ, ಮನ್ನಿಕೇರಿ ಗ್ರಾಮದ ಯಲ್ಲಪ್ಪ ನಾಯ್ಕರ, ಮಹಾಂತೇಶ ದಳವಾಯಿ, ಮುತ್ತೆಪ್ಪ ನಾಂವಿ, ಮಹಾಂತೇಶ ಹಿರೇಮಠ, ವಿಠ್ಠಲ ನಾಯ್ಕರ, ಹಣಮಂತ ಗಡಾದ, ಬಗರನಾಳ ಬಸಪ್ಪ ಗೌಡರ, ರಾಮಪ್ಪ ತೋಟಗಿ, ಭೀಮಪ್ಪ ಇಳಿಗಾರ, ಬಸಪ್ಪ ಬಸಿಡೊಣಿ, ಯಮನಪ್ಪ ಹಾವಾಡಿ, ರಾಜು ಗೌಡರ, ಗೋಸಬಾಳ ಗ್ರಾಮದ ಬಸಪ್ಪ ಸುಳನ್ನವರ, ಕಲ್ಲಪ್ಪ ಪೂಜೇರಿ, ಗಂಗಯ್ಯ ಹಿರೇಮಠ, ಮಾರುತಿ ಗೌಡರ, ಹೊಳೆಪ್ಪ ಮಠದ, ಲಕ್ಷ್ಮಣ ಬೆಳ್ಳಿಕೇರಿ, ಪುಂಡಲಿಕ ಬೆಣ್ಣಿ, ಪ್ರಕಾಶ ಪಾಟೀಲ, ಅಶೋಕ ಭಜಂತ್ರಿ ಸೇರಿ ಸ್ಥಳೀಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.