ಹಾನಗಲ್ಲ: ಜಗತ್ತಿಗೆ ಧರ್ಮಶಾಸ್ತ್ರದ ಮೂಲಕ ಅತ್ಯುತ್ತಮ ಜೀವನ ಸಂದೇಶಗಳನ್ನು ಸಾರಿದ ಆದಿ ಶಂಕರಾಚಾರ್ಯರು ನಾಡು ಕಂಡ ಅಪ್ರತಿಮ ಆಧ್ಯಾತ್ಮ ಪ್ರಬೋಧಕರು ಎಂದು ತಾಲೂಕು ತಹಸೀಲ್ದಾರ್ ಎಸ್. ರೇಣುಕಾ ನುಡಿದರು.ಮಂಗಳವಾರ ಹಾನಗಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ ಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತಿಗೆ ಮೌಲ್ಯಗಳನ್ನು ಸಾರಿದ ವೇದೋಪನಿಷತ್ತುಗಳು ಸಾರ್ವಕಾಲಿಕ ಸತ್ಯಗಳು. ಮೂಲ ವೇದಗಳ ಸಾರ ಜಗತ್ತಿಗೆ ಪರಿಚಯವಾಗಬೇಕಾಗಿದೆ. ಇದನ್ನೇ ಆಧರಿಸಿದ ಸ್ವಾಮಿ ವಿವೇಕಾನಂದರ ಭಾಷಣ ಚಿಕ್ಯಾಗೋ ಪಟ್ಟಣದಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದೆ. ಬಹುತೇಕ ಮಹಾತ್ಮರು ಇಂತಹ ಧಾರ್ಮಿಕ ಸಂದೇಶಗಳ ಮೂಲಕ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಇಲ್ಲಿನ ಸ್ತ್ರೀ ಸಮಾನತೆಯೂ ಒಂದಾಗಿದೆ. ಮಹಿಳೆಯರನ್ನು ಗೌರವಿಸುವುದೆಂದರೆ ಧರ್ಮವನ್ನು ಪಾಲಿಸಿದಂತೆ ಎಂದರು.ವಿಪ್ರ ಸಮುದಾಯದ ಪ್ರಮುಖ ಘನಶ್ಯಾಮ ದೇಶಪಾಂಡೆ ಮಾತನಾಡಿ, ವಿಶ್ವಕ್ಕೆ ಅತ್ಯಂತ ಅಮೂಲ್ಯ ಸಂದೇಶಗಳನ್ನು ನೀಡಿದ ಆದಿಶಂಕರಾಚಾರ್ಯರು ಜಗಕೆ ನೆಮ್ಮದಿಯ ಬದುಕಿನ ಸೂತ್ರ ನೀಡಿದ್ದಾರೆ. ಸನಾತನ ಧರ್ಮ ಸಂದೇಶಗಳ ಉಳಿವಿಗೆ ೪ ಪೀಠಗಳನ್ನು ಸ್ಥಾಪಿಸಿ ಧರ್ಮ ಪ್ರಚಾರಕ್ಕೆ ಅವಕಾಶ ಮಾಡಿಕೊಟ್ಟರು. ಮಹಾತ್ಮರ ಭಜನೆಯಲ್ಲಿ ಆಧ್ಯಾತ್ಮದ ಶಕ್ತಿ ಇದೆ. ಮಹಾತ್ಮರ ದಿನಾಚರಣೆ ಅವರ ಆದರ್ಶಗಳನ್ನು ಪರಿಪಾಲಿಸಲು ಒಂದು ಚೇತನ ಶಕ್ತಿಯಾಗಬೇಕು ಎಂದರು.ಪಂಡಿತ್ ಗಂಗಾಧರ ಶಾಸ್ತ್ರಿ ಕಾಶೀಕರ ಮಾತನಾಡಿ, ೧೨ ನೂರು ವರ್ಷಗಳ ಹಿಂದೆ ಈ ಭೂಮಿಗೆ ಬಂದ ಆದಿ ಶಂಕರಾಚಾರ್ಯರು ಅದ್ವೈತ ತತ್ವ ಪ್ರಚಾರ ಪ್ರಸಾರ ಮಾಡಿದ ದೊಡ್ಡ ಶಕ್ತಿ ಪುರುಷರಾಗಿದ್ದರು. ಜೀವಾತ್ಮ, ಪರಮಾತ್ಮರ ಸಮ್ಮಿಳಿತವೇ ನಿಜವಾದ ಬದುಕು. ಸಕಲ ಜೀವರಾಶಿಗೆ ಒಳಿತಾಗಲಿ ಎಂಬ ಸಂದೇಶ ಸಾರಿದರು. ಪರಮಾತ್ಮನ ಅಂಶವೇ ಸಕಲ ಜೀವರಾಶಿಗಳಾಗಿವೆ. ಹೀಗಾಗಿ ಆಚಾರ್ಯ ಶಂಕರಾಚಾರ್ಯರು ಜಗನ್ಮಾನ್ಯರು. ಮೋಕ್ಷದ ಮಾರ್ಗ ತೋರಿದ ಮಹಾತ್ಮರು ಎಂದರು.ವಿವಿಧ ಇಲಾಖೆಗಳ ಅಧಿಕಾರಿಗಳಾದ ಗಂಗಾ ಹಿರೇಮಠ, ವೀರಭದ್ರಸ್ವಾಮಿ, ಸಿ.ಎಂ. ರೂಢಗಿ, ಶಂಕರ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ದೇಶಪಾಂಡೆ, ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ರವಿ ಪೋತದಾರ, ವಿಪ್ರ ಸಮಾಜದ ಪ್ರಮುಖರಾದ ಪಿ.ಕೆ. ಪಾರಗಾವಂಕರ, ಮುರಳೀಧರ ಕಾಮನಹಳ್ಳಿ, ಮನೊಜ್ ಸರಾಫ್, ಎಚ್.ವಿ. ದೇಸಾಯಿ, ಪಾರ್ವತಿಬಾಯಿ ಕಾಶೀಕರ, ವಿದ್ಯಾ ಕಾಶೀಕರ, ಗಿರೀಶ ದೇಶಪಾಂಡೆ ಮೊದಲಾದವರು ಈ ಸಂದರ್ಭದಲ್ಲಿದ್ದರು.