ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ‘ಶರಣ ಸಂಸ್ಕೃತಿ ವಿಚಾರಗೋಷ್ಠಿ’

KannadaprabhaNewsNetwork |  
Published : Nov 22, 2024, 01:17 AM IST
32 | Kannada Prabha

ಸಾರಾಂಶ

ಸೋಮವಾರಪೇಟೆ ತಾಲೂಕಿನ ತೋಳೂರು ಶೆಟ್ಟಳ್ಳಿ ಡಾ. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಬುಧವಾರ ಶರಣ ಸಂಸ್ಕೃತಿ ವಿಚಾರಗೋಷ್ಠಿ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಮನುಷ್ಯ ಸಾಮಾಜಿಕ ಸ್ವಾಸ್ಥ್ಯದೊಂದಿಗೆ ಸುಂದರ ಜೀವನ ನಡೆಸಲು ವಚನ ಸಾಹಿತ್ಯ ದೀವಿಗೆ ಇದ್ದಂತೆ. ಹನ್ನೆರಡನೇ ಶತಮಾನದಲ್ಲಿ ಕನ್ನಡದ ನೆಲದಲ್ಲಿ ನಡೆದ ಶರಣರ ಕ್ರಾಂತಿ ಸಮಾಜದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾಯಿತು ಎಂದು ಹೆಬ್ಬಾಲೆ ಪ್ರೌಢಶಾಲೆ ಕನ್ನಡ ಶಿಕ್ಷಕ ಮೆ.ನಾ.ವೆಂಕಟನಾಯಕ್ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ತೋಳೂರು ಶೆಟ್ಟಳ್ಳಿ ಡಾ. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಬುಧವಾರ ನಡೆದ ಶರಣ ಸಂಸ್ಕೃತಿ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.ಅಂದಿನ ಸಮಾಜದಲ್ಲಿ ತಾಂಡವವಾಡುತ್ತಿದ್ದ ಸಾಮಾಜಿಕ ಸಂಘರ್ಷಗಳನ್ನು ತಡೆಗಟ್ಟಲು ವಚನಕಾರರು ಕಲ್ಯಾಣದ ಅನುಭವ ಮಂಟಪದಲ್ಲಿ ಮೊಳಗಿಸಿದ ವಿಚಾರ ಲಹರಿಗಳ ಕಹಳೆ ಇಂದಿಗೂ ಹಾಗೂ ಎಂದೆಂದಿಗೂ ಚಿರಸ್ಥಾಯಿ. ಅಂದಿನ ಶರಣರ ಶ್ರೇಷ್ಠ ಚಿಂತನೆಗಳು ಇಂದು ನೊಂದವರು, ದೀನ ದಲಿತರು ಹಾಗೂ ಜನಸಾಮಾನ್ಯರ ಪಾಲಿಗೆ ಆಶಾಕಿರಣಗಳಾಗಿವೆ ಎಂದರು.

ಸ್ವಾತಂತ್ರ‍್ಯಾನಂತರ ದೇಶದಲ್ಲಿ ಜಾರಿಗೆ ಬಂದ ಸಮಾನತೆ, ಮಹಿಳಾ ಸ್ವಾತಂತ್ರ‍್ಯ ಹಾಗೂ ವಾಕ್ ಸ್ವಾತಂತ್ರ‍್ಯದ ಮೂಲ ಕಾರಣಿಕರೇ ಅಂದಿನ ಶರಣರಾಗಿದ್ದಾರೆ. ಜಗಜ್ಯೋತಿ ಬಸವೇಶ್ವರರು ಇಂತಹ ಅಸಮಾನತೆ, ಜಾತೀಯತೆಯ ವಿಷ ಬೀಜವನ್ನು ನಿರ್ಮೂಲನೆಗೊಳಿಸಲು ಹೋರಾಡಿದ ಮಹಾಪುರುಷ. ಹಾಗಾಗಿ ಇಂದಿನ ಮಕ್ಕಳು ಅಳಿದು ಹೋಗುತ್ತಿರುವ ಶರಣರ ವಿಚಾರಧಾರೆಗಳು ಹಾಗೂ ಅವರಲ್ಲಿದ್ದ ಶ್ರೇಷ್ಠ ಚಿಂತನೆಗಳನ್ನು ವಚನಗಳ ಮೂಲಕ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಶರಣ ಸಂಸ್ಕೃತಿ ವಿಚಾರಗೋಷ್ಠಿ ಉದ್ಘಾಟಿಸಿದ ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ ಮಾತನಾಡಿ, ನೈತಿಕ ಮೌಲ್ಯ ಹಾಗೂ ಆದರ್ಶಗಳು ಕುಸಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮನದಲ್ಲಿ ಹನ್ನೆರಡನೇ ಶತಮಾನದ ಶರಣರ ವಿಚಾರಧಾರೆಗಳು ಹಾಗೂ ನಾಡಿನ ಸಾಹಿತ್ಯ ಹಾಗೂ ಸಂಸ್ಕೃತಿಯ ಪುನರ್ ಪಠನ ಅಗತ್ಯವಾಗಿದೆ ಎಂದರು.

ಡಾ. ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ ಮಾತನಾಡಿ, ಕನ್ನಡ ಸಾಹಿತ್ಯ ಹಾಗೂ ಸಂಸ್ಕ್ರತಿಯ ಶ್ರೀಮಂತಿಕೆಗೆ ವಚನ ಸಾಹಿತ್ಯದ ಕೊಡುಗೆ ಅಪಾರ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ನಿರ್ದೇಶಕ ಕೂಗೆಕೋಡಿ ಬಾಲಶಂಕರ್, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಕೆ.ಪಿ. ಆದರ್ಶ, ವಸತಿ ಶಾಲೆಯ ಮೇಲ್ವಿಚಾರಕ ಶಬರಿ ಗಿರೀಶ್, ಶಿಕ್ಷಕರಾದ ಎಂ.ಡಿ. ಭವ್ಯ, ಎಸ್.ಎ. ಶಭಾನಾ, ಗೌತಮಿ, ರಮ್ಯಾ, ಪೂಜಾ, ಪುಷ್ಪಲತಾ, ಶೈಲಾ, ಕೀರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧಾಳುಗಳಿಗೆ ಆತ್ಮಸ್ಥೈರ್ಯ, ತಾಳ್ಮೆ ಅಗತ್ಯ: ಅಕ್ಷಯ ಪಾಟೀಲ
ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದ ತಲಾದಾಯ ಹೆಚ್ಚಳ