ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಶಾಂತಿ- ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆಯ ಕೋರಿಕೆಯ ಮೇರೆಗೆ ಶರಣ್ ಪಂಪ್ ವೆಲ್ ಅವರಿಗೆ ಆ.19ರಿಂದ 10 ದಿನಗಳ ಕಾಲ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಭಾಷಣ ಮಾಡುವ ಮುನ್ನವೇ ನೋಟಿಸ್ ನೀಡಿ, ಕರೆದೊಯ್ದ ಪೊಲೀಸರು: ಇನ್ನು ಗೋ ಕಳ್ಳತನದ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಇಂದು ಕರೆ ನೀಡಿದ್ದ ಶಿಕಾರಿಪುರ ಬಂದ್ ವೇಳೆ ಆಯೋಜಿಸಿದ್ದ ಪ್ರತಿಭಟನಾ ಸಭೆಗೆ ಆಗಮಿಸುತ್ತಿದ್ದ ಮುಖ್ಯ ಭಾಷಣಕಾರ ಹಿಂದೂ ಮುಖಂಡ ಶರಣ್ ಪಂಪ್ ವೆಲ್ ರನ್ನು ತಡೆದ ಪೊಲೀಸರು ಇಂದೇ ನೋಟಿಸ್ ನೀಡಿದ್ದಾರೆ.ಶಿಕಾರಿಪುರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಭಾಷಣಕ್ಕೆ ಅವಕಾಶ ನೀಡದೇ, ಪೊಲೀಸರು ನಿರ್ಬಂಧಿಸಿದ್ದಾರೆ.
-----
ಶಿಕಾರಿಪುರದ ಬಳಿ ಗೋ ರಕ್ಷಕರ ಮೇಲೆ ತಲ್ವಾರ್ನಿಂದ ಹತ್ಯೆ ಮಾಡಲು ಪ್ರಯತ್ನಿಸಲಾಗಿದೆ. ಇದನ್ನು ಖಂಡಿಸಿ ಶಿಕಾರಿಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ನಾನು ಭಾಗಿಯಾಗಬೇಕಿತ್ತು. ಆದರೆ, ಜಿಲ್ಲಾಡಳಿತ ಈ ಕಾರ್ಯಕ್ರಮಕ್ಕೆ ಬರದಂತೆ ನನಗೆ ನೋಟಿಸ್ ನೀಡಿದ್ದಾರೆ. ಇದನ್ನು ಒಂದು ದಿನ ಮುನ್ನವೇ ಕೊಡಬೇಕಿತ್ತು. ಇವರು ಪ್ರತಿಭಟನೆಗೆ ಭಾಗಿಯಾಗಲು ಐದು ನಿಮಿಷ ಇರುವಾಗ ಕೊಟ್ಟಿದ್ದಾರೆ ಎಂದು ಹಿಂದೂ ಮುಖಂಡ ಶರಣ್ ಪಂಪ್ವೆಲ್ ದೂರಿದರು.
ಗೋ ಮಾಫಿಯಾದ ಸಾಮ್ರಾಜ್ಯವನ್ನು ಮಲೆನಾಡು ಭಾಗದಲ್ಲಿ ವಿಸ್ತಾರ ಮಾಡಲು ಯತ್ನಿಸುತ್ತಿದ್ದಾರೆ. ಮಲೆನಾಡಿನ ಜನ ಜಿಹಾದಿಗಳಿಂದ ಎಚ್ಚೆತ್ತುಕೊಳ್ಳಬೇಕು. ಕೂಡಲೇ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಗೃಹ ಸಚಿವರು ಆರ್ಎಸ್ಎಸ್ ಬಗ್ಗೆ ಮಾತಾಡೋದು ಬಿಟ್ಟು. ಗೋ ಹತ್ಯೆ ಮಾಡುವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.